ವಾ.ಕ.ರ.ಸಾ. ಸಂಸ್ಥೆಯಿಂದ ಮತದಾನದ ಮಹತ್ವದ ಜಾಗೃತಿ
ಹುಬ್ಬಳ್ಳಿ,ಏ.16: ಬಸ್ಸುಗಳಲ್ಲಿ ಪ್ರಯಾಣಿಕರಿಗೆ ನೀಡುವ ಟಿಕೇಟ್ ನಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಮುದ್ರಿಸುವ ಮೂಲಕ ಸಾರ್ವಜನಿಕರಿಗೆ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮುಂದಾಗಿದೆ.
ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು, ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ಕಾರ್ಯೋನ್ಮುಖವಾಗಿವೆ. ಅದೇ ರೀತಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಸಹ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಬಸ್ಸಿನಲ್ಲಿ ಪ್ರಯಾಣಿಕರಿಗೆ ನೀಡುವ ಟಿಕೆಟ್ ಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮತದಾನ ಜಾಗೃತಿ ಸಂದೇಶಗಳನ್ನು ಮುದ್ರಿಸಲಾಗುತ್ತಿದೆ.
ಬಸ್ಸುಗಳಲ್ಲಿ ಪ್ರಯಾಣಿಕರಿಗೆ ನೀಡುವ ಟಿಕೇಟ್ ನಲ್ಲಿ “ದಿನಾಂಕ: 10-05-2023 ರಂದು ತಪ್ಪದೇ ಮತದಾನ ಮಾಡಿರಿ” ಎಂಬ ಸಂದೇಶವನ್ನು ಮುದ್ರಿಸಲಾಗುತ್ತಿದೆ. ಸಂಸ್ಥೆಯ ಟ್ವೀಟರ್, ಇನ್ಸ್ ಟಾಗ್ರಾಂ ಹಾಗೂ ಫೇಸ್ ಬುಕ್ ಪೇಜ್ ನಲ್ಲಿ “ಮತದಾನ ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯ. ಮೇ 10 ರಂದು ಬುಧವಾರ ತಪ್ಪದೇ ಮತದಾನ ಮಾಡಿರಿ” “ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಮೇ10 ರಂದು ಬುಧವಾರ ತಪ್ಪದೇ ಮತದಾನ ಮಾಡಿರಿ.””ಮೇ10 ರಂದು ನಮ್ಮ ನಡಿಗೆ- ಮತಗಟ್ಟೆಯ ಕಡೆಗೆ” ಇತ್ಯಾದಿ ಸಂದೇಶಗಳನ್ನು ಪೆÇೀಸ್ಟ್ ಮಾಡಲಾಗಿದೆ.
ಸಂಸ್ಥೆಯ ಈ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಸಂಸ್ಥೆಯ ಬಸ್ಸುಗಳಲ್ಲಿ ನಿತ್ಯ ಲಕ್ಷಾಂತರ ಜನರು ಪ್ರಯಾಣ ಮಾಡುತ್ತಾರೆ. ಹಾಗೂ ಸಾವಿರಾರು ಮಂದಿ ಸಂಸ್ಥೆಯ ಟ್ವೀಟರ್, ಇನ್ಸ್ ಟಾ ಗ್ರಾಂ ಹಾಗೂ ಫೇಸ್ ಬುಕ್ ಫಾಲೋವರ್ಸ್ ಇದ್ದಾರೆ. ಅವರಲ್ಲಿ ಬಹಳಷ್ಟು ಮಂದಿ 18 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದು ಮತದಾನದ ಹಕ್ಕು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಏಕ ಕಾಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ತಲುಪಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್. ಎಸ್ ತಿಳಿಸಿದ್ದಾರೆ.