ಮೈಸೂರು: ಜೂ.03- ಶಿವಮೊಗ್ಗ ವಿಮಾನ ನಿಲ್ದಾಣದಂತೆಯೇ ಮೈಸೂರು ವಿಮಾನ ನಿಲ್ದಾಣದ ರನ್ ವಿಸ್ತರಣೆಯನ್ನು 3.5 ಕಿಲೋ ಮೀಟರ್ಗೆ ವಿಸ್ತರಿಸಲು ಚಿಂತನೆ ನಡೆದಿದೆ ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು.
ಮೈಸೂರು ವಿಮಾನ ನಿಲ್ದಾಣ ಉನ್ನತೀಕರಣ ಹಾಗೂ ವಿಸ್ತರಣೆಗೆ ಸಂಬಂಧಿಸಿದಂತೆ ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕರು, ಕೆಐಎಡಿಬಿ ಅಧಿಕಾರಿಗಳೊಂದಿಗೆ ಶುಕ್ರವಾರ ಜಲದರ್ಶಿನಿ ಅತಿಥಿಗೃಹದಲ್ಲಿ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ವಿಮಾನ ನಿಲ್ದಾಣದ ರನ್ ವೇಯನ್ನು 1.75 ಕಿ.ಮೀ.ನಿಂದ 2.75 ಕಿ.ಮೀ.ಗೆ ವಿಸ್ತರಿಸಬೇಕೆಂದು ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಭೂ ಸ್ವಾಧೀನಕ್ಕೆ 319 ಕೋಟಿ ರೂ. ನೀಡಿದ್ದರು. ಚುನಾವಣೆಗೂ ಮೊದಲು 160 ಎಕರೆ ಸ್ವಾಧೀನ ಮಾಡಿಕೊಳ್ಳಲಾಗಿದೆ. ಉಳಿದ 46 ಎಕರೆ ಸ್ವಾಧೀನಕ್ಕೆ ಪ್ರಕ್ರಿಯೆ ಆರಂಭಿಸಬೇಕಿದೆ ಎಂದು ಹೇಳಿದರು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ 3.5 ಕಿ.ಮೀ ರನ್ವೇ ಇದೆ. ಮೈಸೂರಿನ ಭವಿಷ್ಯದ ಹಿತದೃಷ್ಟಿಯಿಂದ 3.5 ಕಿ.ಮೀ ರನ್ವೇ ನಿರ್ಮಾಣಕ್ಕೆ ಚಿಂತನೆ ಮಾಡಿದ್ದೇವೆ. ಇದಕ್ಕೆ 91 ಎಕರೆ ಜಮೀನು ಬೇಕು. ಈಗಾಗಲೇ ಕೆಐಎಡಿಬಿ ಅಧಿಕಾರಿಗಳು ಸರ್ವೇ ಮಾಡಿದ್ದಾರೆ. ಏರ್ಪೆÇ?ರ್ಟ್ ಅಥಾರಿಟಿ ಆಫ್ ಇಂಡಿಯಾ ಸಭೆಯಲ್ಲಿ ಕೆಐಎಡಿಬಿಗೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು.
ಮಾರ್ಗ ಬದಲು: ಮೈಸೂರು-ನಂಜನಗೂಡು ರಸ್ತೆಯಲ್ಲಿ ರನ್ವೇ ವಿಸ್ತರಣೆಗೆ ಅಂಡರ್ ಪಾಸ್ಗೆ ಅಧಿಕ ವೆಚ್ಚವಾಗಲಿದೆ. ಇದರ ಬದಲು ಮೈಸೂರು-ನಂಜನಗೂಡು ರಸ್ತೆಯನ್ನು ಬದಲಿಸುವ ಚಿಂತನೆ ಮಾಡಿದ್ದೇವೆ. ಇದರಿಂದ 7 ಕಿ.ಮೀ ಹೆಚ್ಚಾಗಲಿದೆ ಎಂದು ವಿವರಿಸಿದರು.
ಮೈಸೂರು-ನಂಜನಗೂಡು ರಸ್ತೆಯನ್ನು ಆರು ಪಥದ ರಸ್ತೆ ಮಾಡುವ ಉದ್ದೇಶವಿದೆ. ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಬೇಕು. ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ 510 ಕೋಟಿ ರೂ.ಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಲಿದೆ. ಉಳಿಕೆ ಹಣ ಹೊಂದಿಸಿಕೊಂಡು ಹೆದ್ದಾರಿ ಪ್ರಾ?ಕಾರ ರಸ್ತೆ ನಿರ್ಮಿಸಬೇಕು. ನಾಲ್ಕೈದು ತಿಂಗಳಲ್ಲಿ ಕೆಲಸ ಪೂರೈಸುವ ಉದ್ದೇಶವಿದೆ ಎಂದು ನುಡಿದರು.
ಬೆಂಗಳೂರು-ಮೈಸೂರು ನಗರಗಳ ನಡುವೆ ವಿಮಾನಗಳ ಸಂಚಾರಕ್ಕೆ ಮಾತ್ರ ನಿಲ್ದಾಣ ಅಭಿವೃದ್ಧಿಪಡಿಸುತ್ತಿಲ್ಲ. ದೇಶದ ಇತರ ನಗರಗಳಿಗೆ ಮೈಸೂರಿಂದಲೇ ಕನೆಕ್ಟಿವಿಟಿ ದೊರೆಯಬೇಕೆಂದು ವಿಸ್ತರಣೆ ಮತ್ತು ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಬಳಿಕ ಪ್ಲೈ ಬಸ್ಗಳು 2.5 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುತ್ತಿವೆ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಸೌಲಭ್ಯ ಇರಬೇಕು. ಮುಂಬೈ, ದೆಹಲಿ ನಗರಿಗಳಿಗೂ ಮೈಸೂರಿಂದಲೇ ವಿಮಾನ ಸೇವೆ ದೊರೆಯಬೇಕು ಎಂದು ನುಡಿದರು.
ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಲ್ಲುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮಳೆ ಬಂದ ನಂತರ ಸಮಸ್ಯೆ ತಿಳಿಯಲಿದೆ. ಸಮಸ್ಯೆ ಇತ್ಯರ್ಥಕ್ಕೆ ಸಿದ್ಧತೆಯನ್ನೂ ಮಾಡಿಕೊಂಡಿದ್ದೇವೆ. ಅಂದಾಜು ಮಾಡಿಕೊಂಡು ಮುಂಜಾಗ್ರತ ಕ್ರಮಗಳನ್ನು ವಹಿಸಲಾಗಿದೆ ಎಂದು ಹೇಳಿದರು.
ಕಬ್ಬಿಣ ಕಳ್ಳತನ: ಬೆಂಗಳೂರು-ಮೈಸೂರು 118 ಕಿ.ಮೀ. ಹೆದ್ದಾರಿಯಲ್ಲಿ ಪೆನ್ಸಿಂಗ್ ಕಬ್ಬಿಣ ಕಳ್ಳತನದ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಂಸದ ಪ್ರತಾಪ ಸಿಂಹ ಅವರು, ಗುಜರಿಗೆ ಹಾಕಲು ಯಾರಾದರೂ ಕಬ್ಬಿಣ ಕಳ್ಳತನ ಮಾಡಿದರೆ ಸಂಬಂಧಪಟ್ಟವರ ಗಮನಕ್ಕೆ ತರುವಂತೆ ಮನವಿ ಮಾಡಿದರು.
ದಕ್ಷಿಣ ಭಾರತದಲ್ಲಿಯೇ ಮೊದಲು ಪ್ರವೇಶ ಮತ್ತು ನಿರ್ಗಮನದ ತನಕ ಸಂಚಾರಕ್ಕೆ ಅಡಚಣೆ ಇರಬಾರದೆಂದು, ಪ್ರಾಣಿಗಳು ರಸ್ತೆ ಪ್ರವೇಶಿಸುವುದನ್ನು ತಡೆಯಲು ಪೆನ್ಸಿಂಗ್ ಹಾಕಲಾಗಿದೆ. ಈ ರಸ್ತೆಯಿಂದ ಆ ರಸ್ತೆಗೆ ಹೋಗಲು ಕಬ್ಬಿಣ ಕಟ್ ಮಾಡುತ್ತಿರುವುದನ್ನು ನಿಲ್ಲಿಸುವಂತೆ ಮನವಿ ಮಾಡಿದರು.
ಹೆದ್ದಾರಿಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆಗೆ 80 ಕೋಟಿ ರೂ. ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸರ್ಕಾರವೂ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ತಿಳಿಸಿದರು.
ಗ್ಯಾರಂಟಿ ಜಾರಿ ಕುರಿತಂತೆ ಮಾತನಾಡಿದ ಪ್ರತಾಪಸಿಂಹ ಅವರು, ಖಚಿತ, ಉಚಿತ, ನಿಶ್ಚಿತ ಎನ್ನುತ್ತಿದ್ದ ಕಾಂಗ್ರೆಸ್ ನಾಯಕರು ಯಾವ ಷರತ್ತು ಇಲ್ಲದೇ ಜಾರಿ ಮಾಡಬೇಕು. ಗ್ಯಾರಂಟಿ ಕಾರ್ಡ್ನಲ್ಲಿ ಷರತ್ತು ಇಲ್ಲ. ಅವರು ಹೇಳಿದ ಮಾತಿನಂತೆ ನಡೆದುಕೊಳ್ಳಬೇಕು. ಅವರ ಹೇಳಿದ ಮಾತಿನ ಒತ್ತಡವೇ ಅವರ ತಲೆ ಮೇಲಿದೆ. ತಮ್ಮ ಭಾರವನ್ನು ಇಳಿಸಿಕೊಳ್ಳಬೇಕು ಎಂದು ತಿಳಿಸಿದರು.