ಕಲಬುರಗಿ:ಜೂ.9: ವಿಶ್ವಬ್ಯಾಂಕ ನೆರವಿನ ಕರ್ನಾಟಕ ನೀರು ಸರಬರಾಜು ಆಧುನೀಕರಣ ಯೋಜನೆಯಡಿಯಲ್ಲಿ
ನಗರದಲ್ಲಿ ಅನುಷ್ಠಾನಗೊಳುತ್ತಿರುವ 24*7 ನಿರಂತರ ನೀರು ಸರಬರಾಜು ಯೋಜನೆಯ ಅನುಷ್ಠಾನವು ಪ್ರಗತಿಯಲ್ಲಿದ್ದು, ವಿವಿಧ ಹಂತಗಳಲ್ಲಿ ನೀರು ಸರಬರಾಜಿಗೆ ಸಂಬಂಧಿಸಿದ ವಾಸ್ತವ ಸ್ಥಿತಿಗತಿ ಕುರಿತು ಆಯ್ದ 3500 ಕುಟುಂಬಗಳಿಂದ ವಿವರವಾದ ಮಾಹಿತಿ ಪಡೆಯಲು ಮಹಾನಗರ ಪಾಲಿಕೆ ಸದಸ್ಯರ ಸಹಕಾರ ಕೋರಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಗಾರವನನ್ನು ಮಹಾನಗರ ಪಾಲಿಕೆಯ ಮಹಾಪೌರ ವಿಶಾಲ ದರ್ಗಿ,ಉಪಮೇಯರ ಶಿವಾನಂದ ಪಿಸ್ತಿ ಹಾಗೂ ಮಹಾನಗರ ಪಾಲಿಕೆ ಸದಸ್ಯರು ನೆರವೇರಿಸಿದರು.
ನಗರದ ಮಹಾನಗರ ಪಾಲಿಕೆಯ ಇಂದಿರಾ ಸ್ಮಾರಕ ಭವನದಲ್ಲಿ ನೀರು ಸರಬರಾಜು ಕುರಿತು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಆಯುಕ್ತ ಭುವನೇಶ ದೇವಿದಾಸ ಪಾಟೀಲ ಮಾತನಾಡಿ ನಗರದ ಪ್ರಸ್ತುತ ನೀರು ಸರಬರಾಜು ಯೋಜನೆಯ ವಾಸ್ತವ ಸ್ಥಿತಿಗತಿಗಳ ಸಮೀಕ್ಷೆಯ ಉದ್ದೇಶ. ಸಮೀಕ್ಷೆಯಲ್ಲಿ ಕೈಗೊಳ್ಳಲಾಗುವ ಗೃಹ ನೀರು ಸರಬರಾಜು ವ್ಯವಸ್ಥೆ.ನಗರ ಮಟ್ಟದಲ್ಲಿ ನೀರು ಸರಬರಾಜು ವ್ಯವಸ್ಥೆಯನ್ನು ನಿರ್ವವಹಿಸುವ ಸಂಸ್ಥೆ ಹಾಗೂ ವಾಣಿಜ್ಯ ಸಂಕೀರ್ಣಗಳಿಂದ ಸಂಗ್ರಹಿಸಲಾಗುವ ಮಾಹಿತಿ ಬಗ್ಗೆ ತಿಳಿಸಿ ಸಮೀಕ್ಷೆಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು.
ನಿರಂತರ ನೀರು ಸರಬರಾಜು ಯೋಜನೆ ಅನುಷ್ಠಾನಗೊಳ್ಳುತ್ತಿರುವ ಮೆ|| ಎಲ್ ಟಿ ಕಂಪನಿಯು ಕಾಮಗಾರಿಗಳ ಪ್ರಗತಿ ಮತ್ತು ವಿವರಗಳನ್ನು ಪ್ರಸ್ತುತ ಪಡಿಸಿದರು.ಮಹಾನಗರ ಪಾಲಿಕೆ ಸದಸ್ಯರು ಗುತ್ತಿಗೆದಾರರ ಪ್ರಸ್ತುತ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ನಿಗದಿಪಡಿಸಿದ ಅವಧಿಯಲ್ಲಿ ಪೂರ್ಣಗೊಳಿಸಲು ಅಸಾಧ್ಯವೆಂದು ತಿಳಿಸಿದರು.ವಾರ್ಡ ವಾರು ಕಾಮಗಾರಿಗಳ ವಿವರ ಅನುಷ್ಠಾನ ಮತ್ತು ಪೂರ್ಣಗೊಳಿಸುವ ಅವಧಿಯ ವಿವರಗಳನ್ನು ಒಂದು ವಾರದೊಳಗೆ ಕಡ್ಡಾಯವಾಗಿ ಸಲ್ಲಿಸಬೇಕೆಂದು ಗುತ್ತಿಗೆದಾರರ ಒಕ್ಕೊರಲಿನಿಂದ ಆಗ್ರಹಿಸಿದರು.
ಪ್ರಸ್ತುತ ನೀರನ್ನು 5-6 ದಿನಕ್ಕೊಮ್ಮೆ ಸರಬರಾಜು ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, 3-4 ದಿನಗಳಿಗೊಮ್ಮೆ ಸರಬರಾಜು ಮಾಡಲು ಆಗ್ರಹಿಸಿದರು.ಪೈಪಲೈನ ಅಳವಡಿಸುವಾಗ ಅಗೆಯಲಾದ ರಸ್ತೆಯನ್ನು ಯಥಾಸ್ಥಿತಿಗೆ ತರದೇ ಇರುವುದರಿಂದ ನಾಗರೀಕರಿಗೆ ತೊಂದರೆಯಾಗುತ್ತಿದ್ದು ತಕ್ಷಣವೇ ಕ್ರಮವಹಿಸಬೇಕೆಂದು ಮಹಾನಗರ ಪಾಲಿಕೆ ಆಯುಕ್ತರು ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಪ ಆಯುಕ್ತ ಆರ್.ಪಿ.ಜಾಧವ,ಅಧೀಕ್ಷಕ ಅಭಿಯಂತರ ಕಾಂತರಾಜ ಕೆ,ಕುಸ್ಸೆಂಪ-ಕೆಯುಐಡಿಎಪ್ ಸಿ ಮತ್ತು ಎಲ್ ಮತ್ತು ಟಿ ಕಂಪನಿ ಅಧಿಕಾರಿಗಳು , ಡಿ ಬಿ ಒ ಇ( ಸ್ಮೆಕ್) ಅಧಿಕಾರಿಗಳು ಉಪಸ್ಥಿತರಿದ್ದರು.