
ಬೆಂಗಳೂರು,ಮೇ.೮- ರಾಜ್ಯದ ಜನರು ಈ ಭಾರಿ ಬದಲಾವಣೆಯನ್ನು ಬಯಸಿದ್ದು, ಕಾಂಗ್ರೆಸ್ ಪಕ್ಷ ೧೫೦ ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣ ಹಿಡಿಯಲಿದೆ ಎಂದು ಮಾಜಿ ಮುಖ್ಯ ಮಂತ್ರಿ ಎಂ.ವೀರಪ್ಪ ಮೊಯಿಲಿ ವಿಶ್ವಾಸ ವ್ಯಕ್ತಪಡಿಸಿದರು.
ಯಲಹಂಕ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೇಶವ ರಾಜಣ್ಣ ಪರ ವಿವಿಧ ಗ್ರಾ ಮಗಳಲ್ಲಿ ರೋಡ್ ಷೋ ನಡೆಸಿ ಮತಯಾಚಿಸಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ.೪೦% ಕಮೀಷನ್, ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ, ನಿರುದ್ಯೋಗ ಹಾಗೂ ಬೆಲೆ ಏರಿಕೆಯಂತಹ ಗಂಭೀರ ಸಮಸ್ಯೆಗಳಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಈ ಭಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದೊಂದೇ ಇದಕ್ಕೆ ಪರಿಹಾರವೆಂದು ನಿರ್ಧರಿ ಸಿದ್ದಾರೆ ಎಂದರು.
ಇಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿ ಕೇಶವ ರಾಜಣ್ಣ, ಒಳ್ಳೆಯ ವ್ಯಕ್ತಿಯಾಗಿದ್ದು, ಕಳೆದ ಏಳೆಂಟು ವರ್ಷಗಳಿಂದ ಕ್ಷೇತ್ರದ ಜನರ ಜೊತೆಗೆ ನಿರಂತರ ಸಂಪರ್ಕವನ್ನಿಟ್ಟುಕೊಂಡು ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಾಕಷ್ಟು ಸೇವಾಕಾರ್ಯಗಳನ್ನು ಮಾಡಿದ್ದಾರೆ. ಅವರನ್ನು ಈ ಭಾರಿ ಶಾಸಕರನ್ನಾಗಿ ಆಯ್ಕೆಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಇನ್ನು ಚಿಕ್ಕಬಳ್ಳಾಪುರ ವಿಧಾನಸಭಾ ವ್ಯಾಪ್ತಿಯ ೮ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ವೈ.ಆರ್.ಶ್ರೀಧರ್, ಎನ್.ಎಂ.ಶ್ರೀನಿವಾಸ್, ಎಂ.ಎನ್.ಗೋಪಾಲ ಕೃಷ್ಣ, ಎಸ್.ಬಿ.ಭಾಷಾ, ಅದ್ದೆ ಮಂಜುನಾಥ್, ಗೋಪಿನಾಥ್, ಸುರೇಶ್ ಮೃತ್ಯುಂಜಯ, ಲಾವಣ್ಯ ನರಸಿಂಹಮೂರ್ತಿ, ಪದ್ಮಾವತಿ ಅಮರನಾಥ್ ಮತ್ತಿತರರು ಉಪಸ್ಥಿತರಿದ್ದರು.