100 ಅಡಿಗೆ ಕುಸಿದ ಕೃಷ್ಣರಾಜಸಾಗರ-ಬೇಸಿಗೆ ಬೆಳೆಗೆ ನೀರು ಪೂರೈಕೆ ಕಷ್ಟಸಾಧ್ಯ!

ಮಂಡ್ಯ : ಕೃಷ್ಣರಾಜಸಾಗರ ಅಣೆಕಟ್ಟು ನೀರಿನ ಮಟ್ಟ ಇದೀಗ 100 ಅಡಿಗೆ ಕುಸಿತವಾಗಿದೆ. ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಜಲಾಶಯದ ನೀರಿನ ಮಟ್ಟದಲ್ಲಿ ಕಡಿಮೆಯಾಗಿದೆ. ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ಕುಡಿಯುವ ನೀರಿಗೆ ತೊಂದರೆಯಾಗದಿದ್ದರೂ, ಬೇಸಿಗೆ ಬೆಳೆಗಳಿಗೆ ನೀರು ಪೂರೈಸುವುದು ಕಷ್ಟಕರ ಎನ್ನುವ ಪರಿಸ್ಥಿತಿ ಸೃಷ್ಟಿಯಾಗಿದೆ.
ಪ್ರಸ್ತುತ ಜಲಾಶಯದಲ್ಲಿ 100.08 ಅಡಿ ನೀರು ಸಂಗ್ರಹವಾಗಿದ್ದು, 138 ಕ್ಯುಸೆಕ್ ಒಳಹರಿವು, 4420 ಕ್ಯೂಸೆಕ್ ಹೊರಹರಿವು ದಾಖಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಜಲಾಶಯದಲ್ಲಿ 9 ಅಡಿಯಷ್ಟು ನೀರು ಕಡಿಮೆ ಇರುವುದು ಕಂಡುಬಂದಿದೆ.
ಕಳೆದ ನಾಲ್ಕು ವರ್ಷಗಳಿಂದ ಕಾವೇರಿ ಕಣಿವೆ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು. ನೀರಿಗೆ ಕೊರತೆ ಎದುರಾಗಿರಲಿಲ್ಲ. ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿದ್ದದ್ದು ಕಾವೇರಿ ಕಣಿವೆ ಭಾಗದ ಜನರಲ್ಲೂ ನೆಮ್ಮದಿಯನ್ನು ತರಿಸಿತ್ತು.
ಇದೀಗ ಬೇಸಿಗೆ ಆರಂಭಗೊಂಡಿದೆ. ನಿರೀಕ್ಷೆಯಂತೆ ಜಲಾಶಯದಲ್ಲಿ ನೀರಿನ ಪ್ರಮಾಣವೂ ಕಡಿಮೆಯಾಗಿದೆ. ಮಳೆಗಾಲ ಆರಂಭಕ್ಕೆ ಇನ್ನೂ ಮೂರು ತಿಂಗಳಿದೆ. ಈ ಸಮಯದಲ್ಲಿ ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಜಿಲ್ಲೆಗಳ ಜನರ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಏಕೆಂದರೆ, ಜಲಾಶಯದಲ್ಲಿ 60 ಅಡಿಯವರೆಗೂ ಕುಡಿಯುವ ನೀರು ಪೂರೈಸುವುದಕ್ಕೆ ಅವಕಾಶವಿದೆ.
ಹಾಲಿ ಬೇಸಿಗೆ ಬೆಳೆಗಳಿಗೆ ನೀರನ್ನು ಹರಿಸಲಾಗುತ್ತಿದೆ. 15 ದಿನಗಳಿಗೊಮ್ಮೆ 4420 ಕ್ಯೂಸೆಕ್ ನೀರನ್ನು ನಾಲೆಗಳಿಗೆ ಹರಿಯಬಿಡಲಾಗುತ್ತಿದೆ. ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಕೆಆರ್‌ಎಸ್ ನೀರಿನ ಮಟ್ಟ 100 ಅಡಿ ತಲುಪಿದೆ. ಹೀಗಾಗಿ ಬೇಸಿಗೆ ಅಂತ್ಯದವರೆಗೆ ಜಲಾಶಯದಿಂದ ಬೆಳೆಗಳಿಗೆ ನೀರು ಹರಿಸಲು ಕಷ್ಟಸಾಧ್ಯವಾಗುವ ಸಾಧ್ಯತೆಗಳಿವೆ.
ಕಳೆದ ವರ್ಷ ಮುಂಗಾರು ಬಿರುಸಾಗಿದ್ದರಿಂದ ಜುಲೈ ತಿಂಗಳಲ್ಲೇ ಅಣೆಕಟ್ಟು ಭರ್ತಿಯಾಗಿತ್ತು. ನಾಲ್ಕು ವರ್ಷಗಳಿಂದಲೂ ಬೇಸಿಗೆ ಅವಧಿಯಲ್ಲೂ ನೀರಿನ ಮಟ್ಟ ತೃಪ್ತಿದಾಯಕ ಹಂತದಲ್ಲಿತ್ತು. ಇದೀಗ ಜಲಾಶಯದ ನೀರಿನ ಮಟ್ಟ 100 ಅಡಿಗೆ ಕುಸಿದಿರುವುದು ಸ್ವಲ್ಪ ಪ್ರಮಾಣದ ಆತಂಕ ಸೃಷ್ಟಿಸಿದೆ. ಬೇಸಿಗೆ ಕಳೆಯಲು ಇನ್ನೂ ಎರಡು ತಿಂಗಳಿದೆ. ಈ ವರ್ಷ ಮಳೆಯ ಪರಿಸ್ಥಿತಿ ಏನಾಗುವುದೋ ಇನ್ನೂ ಗೊತ್ತಾಗಿಲ್ಲ. ಕಳೆದ ಮೂರು ವರ್ಷದಂತೆ ಮಳೆಯ ಆಗಮನವಾದ್ರೆ ರೈತರು ಸಂತಸದಿಂದ ಇರಬಹುದು.