10ನೇ ರಾಜ್ಯ ಮಟ್ಟದ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ


ಹುಬ್ಬಳ್ಳಿ, ಫೆ.27:ವಿದ್ಯಾರ್ಥಿಗಳು ಭವಿಷ್ಯವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ದಾಪುಗಾಲು ಇಡಬೇಕು. ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರವನ್ನು ಪ್ರತಿನಿಧಿಸುವ ನ್ಯಾಯಾಧೀಶರಾಗಿ ಬೆಳೆಯಬೇಕು ಎಂದು ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಹೇಳಿದರು.
ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ವತಿಯಿಂದ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 10ನೇ ರಾಜ್ಯ ಮಟ್ಟದ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾದ ಸೇವೆ ನೀಡಬೇಕಾಗಿದೆ. ಕಾಯ್ದೆ, ಕಾನೂನುಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ನಾನು ಕಾನೂನು ಪದವಿ ಓದುವಾಗ ಎರಡನೇ ವರ್ಷದಲ್ಲಿ ಅನುತೀರ್ಣನಾದೆ. ಹೀಗಾಗಿ ಕಾನೂನು ಪದವಿಯನ್ನು ಪಡೆಯಲು ಸಾಧ್ಯವಾಗಲಿಲ್ಲ. ಕಾನೂನು ಮಂತ್ರಿಯಾಗಿದ್ದಾಗ ಎಲ್ಲವನ್ನೂ ತಿಳಿದುಕೊಂಡೆ. ಯುವ ವಕೀಲರಿಗೆ ಮಾಸಿಕ ರೂ. 2 ಸಾವಿರ ಕೊಡುವ ಕೆಲಸ ಮಾಡಿದೆ. ಜನರು ನಂಬಿಕೆ, ಭರವಸೆ ಇಟ್ಟುಕೊಂಡು ನಿಮ್ಮ ಹತ್ತಿರ ಬರುತ್ತಾರೆ. ಅವರ ನಂಬಿಕೆಗೆ ವಿರುದ್ಧವಾಗಿ ನಡೆದುಕೊಳ್ಳಬೇಡಿ. ಇಂದಿನಿಂದ ವಿದ್ಯಾರ್ಥಿಗಳು ಸ್ಪರ್ಧಾತ್ಮಕತೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ವಿಶ್ವವಿದ್ಯಾಲಯದ ಕುಲಪತಿ ಡಾ.ಸಿ.ಬಸವರಾಜು ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,
ಅಣುಕು ನ್ಯಾಯಾಲಯ ಸ್ಪರ್ಧೆ ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿದೆ. ನ್ಯಾಯಾಧೀಶರಾಗಿ ರೂಪಗೊಳ್ಳಲು ಸಹಾಯಕವಾಗಲಿದೆ. ಉತ್ತಮ ನ್ಯಾಯಾವಾದಿಗಳಾಗಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಸಮಾಜದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಸಮಾಜದಲ್ಲಿನ ಸಮಸ್ಯೆಗಳಿಗೆ ಹೇಗೆ ಸ್ಪಂದಿಸುತ್ತೀರಿ ಎಂಬುದನ್ನು ಕಲಿಯಬಹುದು. ವಕೀಲರಾಗಿ ಜನಪರ ಸೇವೆ ಸಲ್ಲಿಸಲು ಅಣಿಯಾಗಬೇಕು. ಮಾತೃಭಾಷೆಯನ್ನು ಬಳಸಿ, ಆದರೆ ಇಂಗ್ಲೀಷ್ ಕೂಡ ಅವಶ್ಯಕವಾಗಿದೆ. ಕಕ್ಷಿದಾರರಿಗೂ ಸಹ ತೀರ್ಪಿನ ಬಗ್ಗೆ ಅರ್ಥವಾಗಬೇಕು. ವಿದ್ಯಾರ್ಥಿಗಳು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಸಚಿವರಾದ ಮೊಹಮದ್ ಝುಬೇರ ಎನ್, ಮೌಲ್ಯಮಾಪನ ಕುಲಸಚಿವೆ ಡಾ.ರತ್ನಾ ಆರ್ ಭರಮಗೌಡರ, ಪೆÇ್ರ.ಸಿ.ಎಸ್. ಪಾಟೀಲ, ಬಸವಪ್ರಭು ಹೊಸಕೇರಿ, ಅಧ್ಯಾಪಕರು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಮತಿ ಹುಣಸಗಿ ಪ್ರಾರ್ಥಿಸಿದರು. ವಿವಿಯ ಡೀನ್ ಡಾ.ಜಿ.ಬಿ. ಪಾಟೀಲ ಸ್ವಾಗತಿಸಿದರು. ಸ್ಪೂರ್ತಿ ಬಸಾಪೂರ ನಿರೂಪಿಸಿದರು.