
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೨; ವಿವಿಧ ಸ್ವತ್ತು ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ದಾವಣಗೆರೆ ಗ್ರಾಮಾಂತರ ಉಪವಿಭಾಗದ ಪೊಲೀಸರು ಹಲವಾರು ಪ್ರಕರಣಗಳಲ್ಲಿ ವಶಪಡಿಸಿಕೊಂಡ 1.68 ಕೋಟಿ ಮೌಲ್ಯದ ಸ್ವತ್ತುಗಳನ್ನು ಸಂಬಂಧಿಸಿದ ವಾರಸುದಾರರಿಗೆ ವಿತರಿಸಿದರು.ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 134 ಪ್ರಕರಣಗಳಲ್ಲಿ ವಶ ಪಡಿಸಿಕೊಂಡ ಸ್ವತ್ತುಗಳಾದ 172 ಗ್ರಾಂ ಬಂಗಾರ, 2.90 ಕೆಜಿ ಬೆಳ್ಳಿ ಆಭರಣಗಳು, 16 ಮೋಟರ್ ಬೈಕ್ಗಳು, ಟ್ರ್ಯಾಕ್ಟರ್ ಮತ್ತು ಬಿಡಿ ಭಾಗಗಳು, 178 ಕೆಜಿ ಅಡಿಕೆ, 3 ಮೊಬೈಲ್, 2,31,650 ನಗದು ಹಣ ಮತ್ತು ಕೃಷಿ ಉಪಕರಣಗಳು ಸೇರಿ ಒಟ್ಟು 1,68,96,744 ಮೌಲ್ಯದ ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದೆ.ದಾವಣಗೆರೆ ಗ್ರಾಮಾಂತರ ಉಪ-ವಿಭಾಗ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ 2022ರ ಜನವರಿ 1ರಿಂದ 2023ರ ಜೂನ್ 30ರವರೆಗೆ ವರದಿಯಾಗಿ ಪತ್ತೆಯಾಗಿರುವ ಸ್ವತ್ತು ಕಳವು ಪ್ರಕರಣಗಳಲ್ಲಿ ಕಳುವಾಗಿದ್ದ ಮಾಲನ್ನು ಪತ್ತೆ ಮಾಡಿ ವಶ ಪಡಿಸಿಕೊಳ್ಳಲಾಗಿತ್ತು.ದಾವಣಗೆರೆ ನಗರದ ಡಿ.ಎ.ಆರ್ ಕವಾಯಿತು ಮೈದಾನದಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ ವಶಕ್ಕೆ ಪಡೆದುಕೊಂಡಿದ್ದ ಮಾಲುಗಳನ್ನು, ಅವುಗಳ ವಾರಸುದಾರರಿಗೆ ಹಿಂದಿರುಗಿಸುವ ಸಂಬಂಧ ಪ್ರಾಪರ್ಟಿ ರಿಟರ್ನ್ ಪೆರೇಡ್ ನಡೆಸಲಾಯಿತು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ. ಬಸರಗಿ ಉಪಸ್ಥಿತಿಯಲ್ಲಿ, ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಎಸ್.ಬಸವರಾಜ್ ನೇತೃತ್ವದಲ್ಲಿ, ರೂರಲ್ ಪಿಐ ಲಿಂಗನಗೌಡ ನೆಗಳೂರು, ಮಾಯಕೊಂಡ ವೃತ್ತದ ಸಿಪಿಐ ನಾಗರಾಜ್, ಹರಿಹರ ವೃತ್ತದ ಸತೀಶ್, ಹರಿಹರ ನಗರ ಪಿಐ ದೇವಾನಂದ್, ಜಗಳೂರು ಪಿಐ ಶ್ರೀನಿವಾಸ್, ಬಿಳಿಚೋಡು ಠಾಣೆಯ ಪಿಐ ಸೋಮಶೇಖರ್ ಕೆಂಚಾರೆಡ್ಡಿ, ಉಪ-ವಿಭಾಗದ ಎಲ್ಲಾ ಠಾಣೆಯ ಪಿಎಸ್ಐಗಳು ಹಾಗೂ ಉಪ-ವಿಭಾಗದ ಅಪರಾಧ ವಿಭಾಗದ ಸಿಬ್ಬಂದಿಗಳು ಇದ್ದರು.