
ಕಲಬುರಗಿ.ಏ.10: ಹೋಮಿಯೋಪಥಿಯು ಯಾವುದೇ ಅಡ್ಡಪರಿಣಾಮಗಳಿಲ್ಲದ, ಬಹುತೇಕ ಎಲ್ಲಾ ಕಾಯಿಲೆಗಳಿಗೆ ಸೂಕ್ತ ಪರಿಣಾಮಕಾರಿಯಾದ ಚಿಕಿತ್ಸೆ ಹೊಂದಿರುವ, ರೋಗ ಮುಕ್ತತೆ ಹೊಂದಿ ಜೀವನ ನಿರ್ವಹಣೆಗೆ ಪೂರಕವಾದ, ವಿಶೇಷ ಚಿಕಿತ್ಸೆ ವಿಧಾನವಾಗಿದೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡುವುದು ಪ್ರಸ್ತುತ ದಿನಗಳಲ್ಲಿ ಹೆಚ್ಚು ಅಗತ್ಯವಾಗಿದೆ ಎಂದು ಹೋಮಿಯೋಪಥಿ ತಜ್ಞೆ ಡಾ.ವಿಜಯಲಕ್ಷ್ಮೀ ಬಿ.ಎಂ ಅಭಿಮತಪಟ್ಟರು.
ನಗರದ ಎನ್.ವಿ.ಕಾಂಪೆಕ್ಸ್ನಲ್ಲಿರುವ ‘ಶ್ರೀವಿಜಯ ಹೋಮಿಯೋ ಕ್ಲಿನಿಕ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಜರುಗಿದ ‘ವಿಶ್ವ ಹೋಮಿಯೋಪಥಿ ದಿನಾಚರಣೆ’ಯನ್ನು ಹೋಮಿಯೋಪಥಿ ಪಿತಾಮಹ ಹ್ಯಾನಮನ್ರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿ, ನಂತರ ಬಳಗದ ಸತ್ಕಾರ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಹೋಮಿಯೋಪಥಿ ಚಿಕಿತ್ಸೆ ಡಾ.ಹ್ಯಾನಮನ್ ಅವರ ದೀರ್ಘ ಸಂಶೋಧನೆಯ ಫಲವಾಗಿ 1756ರಲ್ಲಿ ಪದ್ಧತಿ ಉದಯವಾಗಿದೆ. ಇದರ ಬಗ್ಗೆ ನಿಧಾನ ಮತ್ತು ದೀರ್ಘಾವಧಿ, ಸಂಪೂರ್ಣ ಚಿಕಿತ್ಸೆ ಅಸಾಧ್ಯ, ಅಡ್ಡಪರಿಣಾಮಗಳಿಂದ ಮುಕ್ತವಾಗಿಲ್ಲವೆಂಬ ಕೆಲವು ತಪ್ಪು ಕಲ್ಪನೆಗಳಿವೆ. ‘ಸಾಮ್ಯವು ಸಾಮ್ಯವನ್ನು ಗುಣಪಡಿಸುತ್ತದೆ’ ಎಂಬ ತತ್ವ ಇದರಲ್ಲಿ ಒಳಗೊಂಡಿದೆ. ಅಂದರೆ ಯಾವುದು ರೋಗ ಉಂಟುಮಾಡುತ್ತದೆಯೋ, ಅದನ್ನೇ ಔಷಧಿಯನ್ನಾಗಿ ಶಾಸ್ತ್ರೀಯವಾಗಿ ರೋಗಿಯ ಮೇಲೆ ಪ್ರಯೋಗಿಸುವ ಮೂಲಕ ಸಂಪೂರ್ಣ ಚಿಕಿತ್ಸೆಯನ್ನು ಮಾಡುವ ಗುಣ ಹೋಮಿಯೋಪಥಿ ಹೊಂದಿದೆ. ಇದು ಸಮಾಜಸೇವೆಯನ್ನು ಹೊಂದಿದ್ದು, ವ್ಯಾಪಾರೀಕರಣ ಸಲ್ಲದು. ಹೋಮಿಯೋಪಥಿ ಕೋರ್ಸ್ ಮಾಡಿ, ಮುಂದೆ ವೈದ್ಯಕೀಯ ವೃತ್ತಿ ಜೀವನದಲ್ಲಿ ಅದನ್ನೇ ಮುಂದುವರೆಸಬೇಕು. ಈ ಪದ್ಧತಿಯ ಬಗ್ಗೆ ಅಪನಂಬಿಕೆ ಮೂಡುವಂತಹ ಕೆಲಸವಾಗಬಾರದೆಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ಕ್ಲಿನಿಕ್ನ ಸಿಬ್ಬಂದಿ ಡಾ.ಜ್ಯೋತಿಪ್ರಕಾಶ ದೇಶಮುಖ, ಖುರ್ಷಿದ್ ಮುಲ್ಲಾ, ಪ್ರಮುಖರಾದ ಶಿವಯೋಗಪ್ಪ ಬಿರಾದಾರ. ಪರಮೇಶ್ವರ ದೇಸಾಯಿ, ಜಯಮ್ಮ ಬಿರಾದಾರ, ಜಗದೇವಿ ಶ್ರೀಚಂದ, ವೈಜನಾಥ ಸಜ್ಜನಶೆಟ್ಟಿ, ವಿದ್ಯಾವತಿ ಸಜ್ಜನಶೆಟ್ಟಿ, ಭಾಗ್ಯವತಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.