ಕುಂದಗೋಳ ಜು.21 : ಕಿಸಾನ್ ಕಾಂಗ್ರೆಸ್ ಘಟಕವು ಬೆಳೆ ವಿಮೆ ಹಾಗೂ ಬ್ಯಾಂಕ್ ರೈತರಿಗೆ ಸಾಲ ನೀಡುವಲ್ಲಿ ಮೀನಾಮೇಷ ಎಣಿಸುತ್ತಿವೆ ಎಂಬುದಾಗಿ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದು ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ರವಿಗೌಡ ಪಾಟೀಲ ಅವರು ಕಿಸಾನ್ ಕಾಂಗ್ರೆಸ್ ಘಟಕದ ಆರೋಪವನ್ನು ತಳ್ಳಿಹಾಕಿದರು.
ಪರಿವೀಕ್ಷಣಾ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಅನೇಕ ರೈತರ ಖಾತೆಗೆ ಹಣ ಜಮಾ ಆಗಿದೆ. ಅದರಂತೆ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಕೈಗೊಂಡ ರೈತಪರ ಕಾರ್ಯಗಳಿಂದ ಲಕ್ಷಾಂತರ ರೈತರಿಗೆ ವರದಾನವಾಗಿದ್ದು, ಕಿಸಾನ್ ಕಾಂಗ್ರೆಸ್ ಘಟಕದ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಅಲ್ಲಗಳೆದರು.
ಜಿಲ್ಲಾ ಬಿಜೆಪಿ ಪ್ರ.ಕಾರ್ಯದರ್ಶಿ ಮಾಂತೇಶ ಶಾಗೋಟಿ ಅವರು ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದಿಂದ ರೈತರಿಗೆ ಪ್ರತಿ ವರ್ಷ ಬೀಜ-ಗೊಬ್ಬರಕ್ಕಾಗಿ 6 ಸಾವಿರ ರೂ. ಬರುತ್ತಿಲ್ಲವೆ? ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಸಾವಿರಾರು ರೈತರಿಗೆ ಅನುಕೂಲ ಆಗಿರುವದನ್ನು ಎಷ್ಟು ಉದಾಹರಣೆ ತೋರಿಸಲಿ? ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮೇಲೆ ನೇರವಾಗಿ ಆರೋಪಿಸದೆ, ಅವರು ಕೈಗೊಂಡ ಕಾರ್ಯಗಳು, ರೈತಪರ ಅಭಿವೃದ್ಧಿಗಳು ಸಾಕಷ್ಟಿದ್ದರೂ ಅವರನ್ನು ಪದೇ-ಪದೇ ದೂರುವುದು ಸರಿಯಲ್ಲ ಎಂದು ಕಿಸಾನ್ ಕಾಂಗ್ರೆಸ್ ಘಟಕದ ಹೇಳಿಕೆಯನ್ನು ಖಂಡಿಸಿದರು. ಗೋಷ್ಠಿಯಲ್ಲಿ ಫಕ್ಕೀರೇಶ ಕೋರಿ, ಭರಮಗೌಡ್ರ ಇದ್ದರು.