
ಬೀದರ್:ಎ.3: ಮನೆಯಲ್ಲಿ ಹೆಣ್ಣು ಮಗು ಜನಿಸಿದೆ ಎಂದು ಮರುಕ ಪಡಬಾರದು. ಹೆಣ್ಣು ಈ ದೇಶದ ಕಣ್ಣು. ಹೆಣ್ಣು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ ಹುಲಿ ಮರಿಗಳಂತೆ ಬೆಳೆಸಬೇಕು. ಮುಂದೆ ಇವೆ ಹುಲಿಮರಿಗಳೇ ರಾಷ್ಟ್ರದ ಶಕ್ತಿಯಾಗಿ ಹೊರ ಹೊಮ್ಮಲಿವೆ’ ಎಂದು ನ್ಯೂ ಟೌನ್ ಪೆÇಲೀಸ್ ಠಾಣೆಯ ಪಿಎಸ್ಐ ಯಶೋಧಾ ಕಟಕೆ ವಿಶ್ವಾಸ ವ್ಯಕ್ತಪಡಿಸಿದರು.
ಸಮಾಜ ಸೇವಾ ಸಮಿತಿ ಬೀದರ್ ಘಟಕದ ವತಿಯಿಂದ ಕುಂಬಾರವಾಡಾದ ಕರುನಾಡು ಸಾಂಸ್ಕøತಿಕ ಭವನದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ತಂದೆ-ತಾಯಿಗೆ ಮೂರು ಜನ ಹೆಣ್ಣುಮಕ್ಕಳು. ಪಾಲಕರು ಉತ್ತಮ ಶಿಕ್ಷಣ ಕೊಡಿಸಿ ನನ್ನ ಬೆಳೆಸಿದರು. ಅದರ ಪರಿಣಾಮವಾಗಿಯೇ ನಾನು ಇಂದು ಪಿಎಸ್ಐ ಆಗಿ ಗುರುತಿಸಿಕೊಂಡಿದ್ದೇನೆ’ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಅಖಿಲಾಂಡೇಶ್ವರಿ ಮಾತನಾಡಿ, ‘ಇಂದು ಎಲ್ಲರಿಗೂ ತಾಯಿಯಾಗಿ, ಸೊಸೆಯಾಗಿ ಹೆಣ್ಣು ಬೇಕಾಗಿದೆ. ಆದರೆ ಮಕ್ಕಳಾಗಿ ಬೇಕಾಗಿಲ್ಲ ಎಂಬುದು ದುರ್ದೈವದ ಸಂಗತಿಯಾಗಿದೆ. ಆದ್ದರಿಂದ ಹೆಣ್ಣು ಎಂದರೆ ಹುಣ್ಣು ಎಂದು ತಿಳಿಯದೆ ದೇವತೆ ಎಂದು ಭಾವಿಸಿ, ಜೀವನದ ಕಷ್ಟ-ಸುಖಗಳಲ್ಲಿ ಭಾಗಿಯಾಗುವಂತೆ ಹೆಣ್ಣು ಮಗುವನ್ನು ಸಂಸ್ಕಾರ ನೀಡಿ ಬೆಳೆಸಬೇಕು’ ಎಂದು ಮನವಿ ಮಾಡಿದರು.
ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಸರಿತಾ ಹುಡುಗಿಕರ್, ‘ಭಾರತೀಯ ಸಂಸ್ಕೃತಿಯು ವಿಶ್ವದಲ್ಲಿಯೇ ವಿಶಿಷ್ಟವಾಗಿದೆ. ಹಿಂದಿಗಿಂತಲೂ ಇಂದು ಮಹಿಳೆಯರು ಸಾಧನೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಪುರುಷ ಪ್ರಧಾನ ವ್ಯವಸ್ಥೆ ಮಧ್ಯದಲ್ಲಿಯೂ ಹೆಣ್ಣು ಮಕ್ಕಳು ಸಾಧಕರಾಗಿ ಬೆಳೆಯುತ್ತಿರುವುದು ಸಂತಸದ ಸಂಗತಿಯಾಗಿದೆ’ ಎಂದು ವಿವರಿಸಿದರು.
ಸಾಹಿತಿ ಭಾಗಿರಥಿ ಕೊಂಡ ಅಧ್ಯಕ್ಷತೆ ವಹಿಸಿದ್ದರು. ವಕೀಲ ಎಂ.ಆರ್. ಗೋಡಬೋಲೆ, ಸಮಿತಿಯ ಕಾರ್ಯದರ್ಶಿ ಬಿ.ಎಂ. ಶಶಿಕಲಾ, ಕರುನಾಡು ಸಾಂಸ್ಕೃತಿಕ ವೇದಿಕೆಯ ಸಂಜೀವಕುಮಾರ ಅತಿವಾಳೆ, ಸಮಿತಿಯ ಸಂಚಾಲಕಿ ಮಹಾದೇವಿ ಬಿರಾದಾರ ಇದ್ದರು.
ಆದರ್ಶ ದಂಪತಿ ಪ್ರಶಸ್ತಿ: ಪಾರ್ವತಿ ರಾಮಕೃಷ್ಣನ್ ಸಾಳೆ, ಪುಣ್ಯವತಿ ಸಾಯಿಬಣ್ಣ ವಿಸಾಜಿ, ವಿಜಯಲಕ್ಷ್ಮಿ ಗಣಪತಿ ಸೋಲಪೂರ, ವಿಜಯಲಕ್ಷ್ಮಿ ಸತೀಶ ಚೊಂಡೆ, ಅರ್ಚನಾ ಅನಿಲಕುಮಾರ, ಸಂತೋಷ ಅರುಣಕುಮಾರ, ದೀಪಾ ವಿಜಯ ಕೊಂಡಾ ಅವರನ್ನು ಮಹಿಳಾ ದಿನಾಚರಣೆ ಪ್ರಯುಕ್ತ ಆದರ್ಶ ದಂಪತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮಾಜ ಸೇವಾ ರತ್ನ ಪ್ರಶಸ್ತಿ: ವಿದ್ಯಾವತಿ ಸಜ್ಜನಶೆಟ್ಟಿ, ಲಲಿತಾ ಪಾಟೀಲ, ಲಕ್ಷ್ಮಿ ಮೇತ್ರೆ, ಗೀತಾ ಗಡ್ಡಿ, ರಾಜಮ್ಮ ಚಿಕ್ಕಪೇಟ, ಸ್ವರ್ಣ ಟಿಪಿ, ಸುವರ್ಣಮಾಲಾ ದೀಕ್ಷಿತ್, ಶಾಂತಮ್ಮ ಬಲ್ಲೂರ, ಜಯದೇವಿ ಯದಲಾಪುರೆ, ಸಾರಿಕಾ ಗಂಗಾ, ಹೇಮಲತಾ ವೀರಶೆಟ್ಟಿ ಮತ್ತು ಎಂ.ಮಕ್ತುಂಬಿ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ಕೊಡಲಾಯಿತು.
ಸಮಾಜ ಸೇವಾ ಸಮಿತಿ ಜಿಲ್ಲಾ ಸಂಚಾಲಕ ಮಹಾದೇವಿ ಬಿರಾದಾರ ಸ್ವಾಗತಿಸಿದರು. ಧನಲಕ್ಷ್ಮಿ ಪಾಟೀಲ ನಿರೂಪಿಸಿದರು. ಶ್ರೀಲತಾ ಅತಿವಾಳೆ ವಂದಿಸಿದರು.