
ಲಿಂಗಸೂಗೂರು,ಮಾ.೦೯- ಸಮಾಜದಲ್ಲಿ ಹೆಣ್ಣು ತ್ಯಾಗದ ಪ್ರತಿರೂಪವಾಗಿದ್ದು, ಸುಶಿಕ್ಷಿತಳನ್ನಾಗಿಸಿ ಸಮಾಜದಲ್ಲಿ ಸ್ವಾಭಿಮಾನದಿಂದ, ಆತ್ಮಾಭಿಮಾನದಿಂದ ಬದುಕಲು ಪ್ರೇರಣೆ ನೀಡುವ ಅಗತ್ಯವಿದೆ ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ಮಹಿಳಾ ಘಟಕದ ಅಧ್ಯಕ್ಷೆರಾದ ಶೋಭಾ ಕಾಟವಾ ಹೇಳಿದರು.
ರಜಪೂತ ಸಮಾಜದ ಮಹಿಳಾ ಘಟಕದಿಂದ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಸ್ವಾವಲಂಬಿಯಾಗಿ ಬದುಕುವ ಚೈತನ್ಯ ಶಕ್ತಿ ನೀಡುವ ಸದುದ್ದೇಶದಿಂದ ಕ್ರಿ.ಶ.೧೯೧೦ ಮಾರ್ಚ್ ೮ ರಂದು ವಿಶ್ವ ಸಂಸ್ಥೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲು ಘೋಷಿಸಿತು. ಹೆಣ್ಣು ನಮ್ಮ ಎದುರಿಗಿರುವ ಭಾವಜಗತ್ತಿನ ಶಕ್ತಿ, ಬದುಕಿನುದ್ದಕ್ಕೂ ಉಸಿರಿನಂತೆ ಒಂದಾದ ಜೀವ, ದೈವ ಇದ್ದಂತೆ. ಹೆಣ್ಣನ್ನು ಗೌರವಿಸುವ ಸಮಾಜ ಶ್ರೇಷ್ಠ ರಹದಾರಿಯಲ್ಲಿ ಮುನ್ನಡೆಯುತ್ತದೆ ಎಂದರು.
ರಜಪೂತ ಮಹಿಳಾ ಘಟಕದ ಅಧ್ಯಕ್ಷೆ ರಜನಿ ಕೇಶವ ಶ್ರೀವಾಸ್ತವ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ರಂಜನಾ ಸುರೇಶಸಿಂಗ್, ಸವಿತಾ ಶಿವರಾಜಸಿಂಗ್, ಕವಿತಾ ಆನಂದಸಿಂಗ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಮಹಿಳೆಯರಿಂದ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.