ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಿದರೆ ಲೈಸೆನ್ಸ್ ರದ್ದು

ಮೈಸೂರು: ಜೂ.10:- ನಿಗಧಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರಗಳನ್ನು ಮಾರಾಟ ಮಾಡಿದರೇ ಅಂತಹ ಮಾಲೀಕರ ಲೈಸನ್ಸ್ ರದ್ದು ಮಾಡಲಾಗುವುದೆಂದು ಸಹಾಯಕ ಕೃಷಿ ನಿರ್ದೇಶಕಿ ಡಾ.ಎಚ್.ಬಿ.ಮಧುಲತಾ ಎಚ್ಚರಿಕೆ ನೀಡಿದರು.
ಕೃಷಿ ಇಲಾಖೆವತಿಯಿಂದ ಕರ್ಜನ್ ಪಾರ್ಕ್‍ನಲ್ಲಿರುವ ಡಾ.ಎಂ.ಎಚ್.ಮರೀಗೌಡ ಸಭಾ ಭವನದಲ್ಲಿ ಆಯೋಜಿಸಿದ್ದ ಮೈಸೂರು ತಾಲೂಕಿನ ಎಲ್ಲ ರಸಗೊಬ್ಬರ, ಕೀಟನಾಶಕ ಮತ್ತು ಬಿತ್ತನೆ ಬೀಜ ಮಾರಾಟಗಾರರು ಹಾಗೂ ತಾಲೂಕಿನ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದರು. ಕೃಷಿ ಪರಿಕರ ಮಾರಾಟಗಾರರು ರೈತಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ದಾಸ್ತಾನಿರುವ ರಸಗೊಬ್ಬರ ಹಾಗೂ ಬಿತ್ತನೆ ಬೀಜ, ಕೀಟನಾಶಕಗಳ ಪ್ರಮಾಣ ಮಾರಾಟ ದರ ಮತ್ತು ಮಾರಾಟಗಾರರ ಲೈಸನ್ಸ್‍ಗಳನ್ನು ಗ್ರಾಹಕರಿಗೆ ಕಾಣುವ ರೀತಿಯಲ್ಲಿ ಪ್ರದರ್ಶಿಸಬೇಕು. ಕಡ್ಡಾಯವಾಗಿ ರೈತರಿಗೆ ಬಿಲ್ ನೀಡಬೇಕೆಂದು ಸೂಚಿಸಿದರು.
ಇತ್ತೀಚಿನ ದಿನಗಳಲ್ಲಿ ನಕಲಿ ರಸಗೊಬ್ಬರಗಳ ಹಾವಳಿ ವರದಿಯಾಗುತ್ತಿರುವುದರಿಂದ ಎಲ್ಲ ರೈತರು ಎಚ್ಚರ ವಹಿಸಿ, ತಾವು ಪಾವತಿಸುವ ಹಣಕ್ಕೆ ಬಿಲ್ ಕೇಳಿ ಪಡೆಯಬೇಕು. ರಸಗೊಬ್ಬರದ ಚೀಲದ ಬಾಯಿಯನ್ನು ಯಂತ್ರದಿಂದ ಹೊಲೆದಿರಬೇಕು. ಕೈಯಿಂದ ಚೀಲ ಹೊಲೆದಿದ್ದರೆ ಅದಕ್ಕೆ ಸೀಸದ ಮೊಹರನ್ನು ಖಚಿತವಾಗಿ ಹಾಕಿರಬೇಕು. ರಸಗೊಬ್ಬರ ಖರೀದಿಸಿದಾಗ, ಖರೀದಿಸಿದ ಚೀಲಗಳನ್ನು ತೂಕ ಮಾಡಿ, ಖಾತ್ರಿ ಪಡಿಸಿಕೊಳ್ಳಬೇಕು. ರಸಗೊಬ್ಬರದ ಚೀಲದ ಮೇಲೆ ರಸಗೊಬ್ಬರವೆಂದು ಮುದ್ರಿತವಾಗಿರಬೇಕು ಎಂದು ತಿಳಿಸಿದರು.
ಯಾವ ಡೀಲರ್‍ಗಳು ರೈತರೊಂದಿಗೆ ಅನುಚಿತವಾಗಿ ವರ್ತಿಸಬೇಕು. ಮೇಲ್ಕಂಡ ನಿಯಮಗಳನ್ನು ಮೀರಿ ನಡೆದುಕೊಳ್ಳುವುದು ಕಂಡುಬಂದಲ್ಲಿ ಕೂಡಲೇ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿಯೂ ಸಹಾಯ ಧನದಲ್ಲಿ ಬಿತ್ತನೆ ಬೀಜಗಳಾದ ಮುಸುಕಿನ ಜೋಳ, ಹೆಸರು, ಉದ್ದು, ಅಲಸಂದೆ ಲಭ್ಯವಿದ್ದು, ರೈತರು ಈ ಸೌಲಭ್ಯಗಳನ್ನು ಪಡೆಯಲು ತಮ್ಮ ಆಧಾರ್ ಸಂಖ್ಯೆ ಅಥವಾ ಎಫ್‍ಐಡಿ ಸಂಖ್ಯೆಯನ್ನು ಮತ್ತು ಪರಿಶಿಷ್ಠ ಜಾತಿ, ಪಂಗಡ ವರ್ಗದ ರೈತರು ಜಾತಿ ಪ್ರಮಾಣ ಪತ್ರ ಪ್ರತಿಗಳನ್ನು ಒದಗಿಸುವಂತೆ ಸೂಚಿಸಿದರು.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಬಿ.ಲಿಂಗರಾಜು, ರೈತ ಮುಖಂಡರಾದ ವರಕೂಡು ಕೃಷ್ಣೇಗೌಡ, ವೆಂಕಟೇಶ್, ವಿಜಯೇಂದ್ರ, ಕಂದಾಯ ಇಲಾಖೆಯ ಶಿರಸ್ತೇದಾರ್ ಲೋಕೇಶ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶಶಿಧರ್, ಕೃಷಿ ಅಧಿಕಾರಿಗಳಾದ ಪಿ.ಎನ್.ವೆಂಕಟೇಶ, ಆನಂದ ಕುಮಾರ್, ಪಿ.ಎನ್.ಜೀವನ್, ಸಿ.ಎಂ.ಕಾರ್ತಿಕ್, ತೊರವಳ್ಳಿ ಚಿಕ್ಕಣ್ಣ, ನಾಗೇಂದ್ರ ಸೇರಿ ಇನ್ನಿತರರು ಇದ್ದರು.