
ಆನೇಕಲ್. ಮಾ. ೧೯- ಇತಿಹಾಸ ಪ್ರಸಿದ್ದ ಹುಸ್ಕೂರು ಮದ್ದೂರಮ್ಮ ಜಾತ್ರಾ ಮಹೋತ್ಸವ ಅಪಾರ ಜನಸ್ತೋಮ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಇನ್ನು ಐದು ದಿನಗಳ ಕಾಲ ನಡೆಯುವ ಈ ಜಾತ್ರೆಗೆ ಹುಸ್ಕೂರು ಹಾಗೂ ಸುತ್ತಮುತ್ತಲಿನ ಗ್ರಾಮದ ಜನರೆಲ್ಲಾ ಒಟ್ಟಾಗಿ ಈ ಜಾತ್ರೆಯಲ್ಲಿ ಪಾಲ್ಗೋಳ್ಳುವುದು ಬಹಳ ವಿಶೇಷವಾಗಿದೆ. ಬಿದಿರುನಿಂದ ತಯಾರಿಸಿದ ತೇರುಗಳನ್ನು ಗದ್ದೆ-ಹೊಲ ಎನ್ನದೆ ಆಯಾ ಗ್ರಾಮದ ರಾಸುಗಳ ಮತ್ತು ಟ್ರಾಕ್ಟರ್ ಮೂಲಕ ಹಾಗೂ ಜನರ ಮೂಲಕ ತೇರುಗಳನ್ನು ಎಳೆದು ಕೊಂಡು ಬರುವ ದೃಶ್ಯಗಳು ನೋಡುಗರ ಕಣ್ಣಿಗೆ ರೋಮಾಂಚಕವಾಗಿತ್ತು.ಬಿದಿರು ಹಾಗೂ ಮರದಿಂದ ತಯಾರಿಸಿದ ತೇರುಗಳು ಸುಮಾರು ೧೦೦ ಅಡಿಯಿಂದ ೧೪೫ ಅಡಿವರೆಗೆ ಎತ್ತರವಾಗಿ ತೇರುಗಳು ನಿರ್ಮಾಣ ಮಾಡಿ ರಸ್ತೆಯಿಲ್ಲದ ಪ್ರದೇಶಗಳಲ್ಲಿ ತೇರುಗಳನ್ನು ಎಳೆದು ಕೊಂಡು ಬರುವ ದೃಶ್ಯಾವಳಿಗಳು ಇಡೀ ಕರ್ನಾಟಕ ರಾಜ್ಯದಲ್ಲಿಯೇ ಎಲ್ಲೂ ಇಂತಹ ಜಾತ್ರಾ ಮಹೋತ್ಸವ ನಡೆಯುವುದು ಅಪರೂಪವಾಗಿದೆ.

ಈ ಬಾರಿ ಹುಸ್ಕೂರು ಮದ್ದೂರಮ್ಮ ಜಾತ್ರೆಗೆ ಲಷ್ಮೀನಾರಾಯಣಪುರ, ಗೂಳಿಮಂಗಲ, ದೊಡ್ಡನಾಗಮಂಗಲ,ರಾಯಸಂದ್ರ ಗ್ರಾಮಗಳಿಂದ ತೇರುಗಳು ಹುಸ್ಕೂರು ಮದ್ದೂರಮ್ಮ ದೇವಾಲಯದ ಸನ್ನಿದಿಗೆ ಆಗಮಿಸಿದವು. ಇನ್ನು ಹುಸ್ಕೂರು ಜಾತ್ರಾ ಮಹೋತ್ಸವದಲ್ಲಿ ಬಿಸಿಲಿನ ಬೇಗೆಯನ್ನು ಮತ್ತು ಹಸಿವನ್ನು ನಿವಾರಿಸಲು ಆಯಾ ಗ್ರಾಮಗಳ ಪ್ರತಿ ರಸ್ತೆಯಲ್ಲಿ ಅನ್ನದಾಸೋಹ ಮತ್ತು ಅರವಂಟಿಕೆಗಳನ್ನು ಆಯಾ ಗ್ರಾಮಗಳ ಗ್ರಾಮಸ್ಥರು ಮತ್ತು ಭಕ್ತರು ಆಯೋಜಿಸಿದ್ದು ಕಂಡು ಬಂತು. ಇನ್ನು ಕಾರ್ಯಕ್ರಮದಲ್ಲಿ ಹುಸ್ಕೂರು ಮದ್ದೂರಮ್ಮ ದೇವಾಲಯದ ಅಧ್ಯಕ್ಷ ಪಾಪಣ್ಣ, ಮಾಜಿ ರಾಜ್ಯ ಸಭಾ ಸದಸ್ಯರಾದ ಕುಪೇಂದ್ರ ರೆಡ್ಡಿ, ಲಷ್ಮೀನಾರಾಯಣಪುರ ನಾರಾಯಣರೆಡ್ಡಿ, ರಾಜ್ ಗೋಪಾಲ್ ರೆಡ್ಡಿ ಮತ್ತು ಜನಪ್ರತಿನಿಧಿಗಳು, ಭಕ್ತರು ಭಾಗವಹಿಸಿದ್ದರು.