ದಾವಣಗೆರೆ.ಜೂ.೧೫ : ಹಿಂದುಳಿದ ವರ್ಗಗಳ ಮಾಲಿಕತ್ವದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಮಾಹೆ ಎರಡು ಪುಟ ಜಾಹಿರಾತು ಯೋಜನೆ ಮುಂದುವರೆಸಿ ಜಾಹೀರಾತು ನೀತಿಯಲ್ಲಿ ಸೇರಿಸುವ ಭರವಸೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ.ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ಕರ್ನಾಟಕ ಒಬಿಸಿ ಪತ್ರಿಕೆ ಸಂಪಾದಕರ ಸಂಘ ನೀಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಸಣ್ಣ ಪತ್ರಿಕೆಗಳ ನೆರವಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.ರಾಜ್ಯ ಸರ್ಕಾರ ಹಿಂದಿನ ವರ್ಷದಂತೆ ಈ ವರ್ಷವೂ ಹಿಂದುಳಿದ ವರ್ಗಗಳ ಪತ್ರಿಕೆಗೆ ಪ್ರೋತ್ಸಾಹಯಕ ಜಾಹೀರಾತು ನೀಡಲಿದೆ. ಸರ್ಕಾರದ ಆದೇಶವನ್ನು ಜಾಹೀರಾತು ನೀತಿಯಲ್ಲಿಯೂ ಸೇರಿಸಲಾಗುವುದು. ಬಡ ವರ್ಗ ಹಾಗೂ ಗ್ರಾಮೀಣ ಭಾಗದ ಸುದ್ದಿಗಳನ್ನು ಪ್ರಕಟಿಸುವ ಇಂಥ ಪತ್ರಿಕೆಗಳ ಜೊತೆ ಸರ್ಕಾರ ನಿಲ್ಲಲಿದೆ ಎಂದು ಹೇಳಿದ್ದಾರೆ.ಸಂಘದ ರಾಜ್ಯ ಸಂಚಾಲಕ ಮಲ್ಲಿಕಾರ್ಜುನ್ ಕಬ್ಬೂರು ಮನವಿ ನೀಡಿ ಮಾತನಾಡಿ, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳು ಕಚ್ಚಾ ಸಾಮಾಗ್ರಿ ಬೆಲೆ ಹೆಚ್ಚಳದಿಂದ ನಡೆಸುವುದೇ ಕಷ್ಟವಾಗಿದೆ. ಗ್ರಾಮೀಣ ಭಾಗದ ಸುದ್ದಿ ಜೊತೆ ಸರ್ಕಾರಗಳ ಕಾರ್ಯಕ್ರಮ ಯೋಜನೆಗಳ ಸುದ್ದಿಗಳನ್ನು ಸಹ ಸಣ್ಣ ಪತ್ರಿಕೆಗಳೇ ಹೆಚ್ಚಾಗಿ ಪ್ರಕಟಿಸಿ ಪ್ರಚಾರ ಮಾಡುತ್ತವೆ. ಪ್ರಸ್ತುತ ರಾಜ್ಯ ಸರ್ಕಾರ ಹಿಂದುಳಿದ ವರ್ಗದ ಪತ್ರಿಕೆಗಳಿಗೆ ಪ್ರೋತ್ಸಾಹದ ಜಾಹೀರಾತು ಯೋಜನೆ ಜೋತೆ ಬಹುವರ್ಣದ ಮುದ್ರಣ ಯಂತ್ರಗಳನ್ನು ನೀಡುವಂತೆ ಮನವಿ ಮಾಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಮುದ್ರಣ ಯಂತ್ರ ನೀಡುವ ಕುರಿತು ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.ಕರ್ನಾಟಕ ಒಬಿಸಿ ಪತ್ರಿಕೆ ಸಂಪಾದಕರ ಸಂಘ ಗೌರವಾಧ್ಯಕ್ಷರಾದ ಬೆಳಗಾವಿಯ ರಾಜು ನಧಾಪ್, ದಾವಣಗೆರೆಯ ಎ. ಫಕೃದ್ದೀನ್, ರಾಮನಗರದ ಡಿ.ಎಂ. ಮಂಜುನಾಥ್, ಬೀದರ್ ಜಿಲ್ಲೆಯ ಶಶಿ ಪಾಟೀಲ್, ರಾಯಚೂರಿನ ವೀರಾ ರೆಡ್ಡಿ, ರಾಯಚೂರಿನ ಈರಪ್ಪ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಿಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಲೋಕೇಶ್ ಇದ್ದರು.