ಹಾಸ್ಟೇಲ್ ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ

ವಿಜಯಪುರ :ಜೂ.21: ಹಾಸ್ಟೇಲ್ ಹೊರಗುತ್ತಿಗೆ ಸಿಬ್ಬಂದಿಗಳ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ, ಬೆಂಗಳೂರು ಇದರ ವಿಜಯಪುರ ಜಿಲ್ಲಾ ಸಮಿತಿಯ ವತಿಯಿಂದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾಧ್ಯಕ್ಷರು ಹಾಘೂ ರಾಜ್ಯ ಜಂಟಿ ಕಾರ್ಯದರ್ಶಿಯಾದ ಹುಲಗಪ್ಪ ಚಲವಾದಿ ಮಾತನಾಡಿ, ಹಾಸ್ಟೇಲ್ ಹೊರಗುತ್ತಿಗೆ ಸಿಬ್ಬಂದಿಗಳ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯಿಸಿ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿರುವದಿಲ್ಲ. ಕರ್ನಾಟಕ ಸರ್ಕಾರದ ಅಡಿಯಲ್ಲಿ ನಡೆಸುತ್ತಿರುವ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗ ಮತ್ತು ಪಂಗಡಗಳ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ರಿ) ನಡೆಸುತ್ತಿರುವ ವಿದ್ಯಾರ್ಥಿ ನಿಲಯಗಳಲ್ಲಿ ಕಳೆದ ಹತ್ತು ಹದಿನೈದು ವರ್ಷಗಳಿಂದ ಕೆಲಸ ಮಾಡುತ್ತಿರುವ ಆಡುಗೆಯವರು, ಅಡುಗೆ ಸಹಾಯಕರು, ಕಾವಲುಗಾರು, ಸ್ವಚ್ಛತಾಗಾರರು, ಜವಾನರು, ನರ್ಸಗಳು, ಡಿ.ಗ್ರೂಪ್ ನೌಕರರು ಕೆಲಸ ಮಾಡುತ್ತಿದ್ದಾರೆ . ಆದರೆ ಇವರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಆದ್ದರಿಂದ ಸಿ ಮತ್ತು ಡಿ ವರ್ಗದ ಹೊರಗುತ್ತಿಗೆ ಸಿಬ್ಬಂದಿಗಳಿಗೆ ನಿವೃತ್ತಿ ವರೆಗೆ ಸೇವಾ ಭದ್ರತೆ ಕೊಡಬೇಕು. ನೇರವಾಗಿ ಇಲಾಖೆಯಿಂದ ಮಾಸಿಕ ವೇತನವನ್ನು ಬ್ಯಾಂಕ್ ಖಾತೆಗೆ ಹಾಕಬೇಕು, ಕಾರ್ಮಿಕ ಇಲಾಖೆಯ ಆದೇಶದಂತೆ ಕನಿಷ್ಠ ವೇತನವನ್ನು ಕೊಡಬೇಕೆಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಲಕ್ಷ್ಮಣ ಮಸಳಿ ಮಾತನಾಡಿ ಕಾನೂನು ಪ್ರಕಾರ ವಾರದ ರಜೆ, ಹಬ್ಬಗಳ ರಜೆ, ಸಂಬಳದ ಚೀಟಿ, ಇ.ಎಸ್.ಐ. ಕಾರ್ಡ್ , ಪಿ.ಎಫ್. ಗೆ ಹಣ ತುಂಬಿದ ರಶೀದಿ ಕೊಡಬೇಕು ಸುಪ್ರೀಂ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಕೆಲಸದ ಸಮಯ ನಿಗದಿ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆಯಲ್ಲಿ ನೌಕರರ ಸಂಖ್ಯೆ ಕಡಿಮೆ ಮಾಡಿರುವ ಆದೇಶವನ್ನು ವಾಪಸು ಪಡೆಯಬೇಕು. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ರಿ) ಅಡಿಯಲ್ಲಿ ಬರುವ ವಸತಿ ಶಾಲಾ ಮತ್ತು ಕಾಲೇಜುಗಳಲ್ಲಿ ಕೆಲಸ ಮಾಡುವ ಹೊರಗುತ್ತಿಗೆ ಸಿಬ್ಬಂದಿಗಳು 20 ರೂ. ಬಾಂಡ್ ಮೇಲೆ ಮುಚ್ಚುಳಿಕೆ ಪತ್ರ ಬರೆದು ಕೊಡಬೇಕು ಎನ್ನುವ ಆದೇಶವನ್ನು ವಾಪಸು ಪಡೆಯಬೇಕು. ಬಿ.ಸಿ.ಎಂ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚು ಮಾಡಿದ್ದುಹಾಗೆಯೇ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು. ಬಾಕಿ ಇರುವ ಸಂಬಳವನ್ನು ತಕ್ಷಣ ಕೊಡಬೇಕು. ನೇರ ನೇಮಕಾತಿ ಸಮಯದಲ್ಲಿ ಕೆಲಸ ಕಳೆದುಕೊಂಡ ಹೊರಗುತ್ತಿಗೆ ನೌಕರರನ್ನು ಮತ್ತೆ ಕೆಲಸಕ್ಕೆ ತೆಗೆದು ಕೊಳ್ಳಬೇಕು, ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಜೋಳದ ರೊಟ್ಟಿ ಬಳಕೆ ಮಾಡುತ್ತಿದ್ದು , ಈ ಭಾಗದ ಹಾಸ್ಟೆಲ್‍ಗಳಿಗೆ ಹೆಚ್ಚುವರಿ ಸಿಬ್ಬಂದಿ ನೇಮಿಸಬೇಕು. ಜನಪ್ರತಿನಿಧಿಗಳು ಹೊರಗುತ್ತಿಗೆ ನೌಕರರಾಗಿ ಕೆಲಸಕ್ಕೆ ತೆಗೆದುಕೊಳ್ಳಲು ಕೊಡುವ ಶಿಫಾರಸು ಪತ್ರಗಳನ್ನು ಪರಿಗಣಿಸಬಾರದು. ಇದರಿಂದ ಹಾಲಿ ಹೊರಗುತ್ತಿಗೆ ನೌಕರರು ಕೆಲಸ ಕಳೆದು ಕೊಳ್ಳುತ್ತಾರೆ. ವಾರ್ಡ್‍ನ ಮತ್ತು ಅಧಿಕಾರಿಗಳ ಕಿರುಕುಳ ನಿಲ್ಲಬೇಕು . ಅಕ್ರಮವಾಗಿ ನೇಮಕ ಮಾಡಿಕೊಳ್ಳುವ ವಾರ್ಡ್‍ನ್ ಮತ್ತು ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು. ನಿವೃತ್ತಿ ನಂತರ ಜೀವನ ನಿರ್ವಹಣೆಗೆ 5 ಲಕ್ಷ ಪರಿಹಾರ ಕೊಡಬೇಕು. ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನೂರಜಾನ ಎಲಿಗಾರ, ದಾನಪ್ಪ ಹೂಗಾರ, ಗೌರಕ್ಕ ಬೀಲೂರ, ಮಲ್ಲಿಕಾರ್ಜುನ ಚಲವಾದಿ, ರಾಮಚಂದ್ರ ಕೋಳಿ, ಮೀನಾಕ್ಷಿ ತಳವಾರ, ಕವಿತಾ ತಳವಾರ, ತೋಟಾಬಾಯಿ ರಾಠೋಡ, ಸುಜಾತಾ ಕೂಡಗಿ, ಲಕ್ಷ್ಮೀ ಕಣಿಮಣಿ, ರೇಖಾ ಕಾಳಶೆಟ್ಟಿ, ನೀಲಮ್ಮ ಹೆಳವರ, ಸುಮಿತ್ರಾ ತಳವಾರ, ಹೀನಾ ಪಡೇಕನೂರ, ಅನಸೂಯಾ ಬಡಿಗೇರ, ಗಿರೀಶ ಕಲಶೆಟ್ಟಿ, ಇನ್ನಿತರರು ಇದ್ದರು.