
(ಸಂಜೆವಾಣಿ ಪ್ರತಿನಿಧಿಯಿಂದ)ಕೂಡ್ಲಿಗಿ. ಆ 11 :- ಪಟ್ಟಣದ ಬಂಡೆ ಬಸಾಪುರ ರಸ್ತೆಯಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್, ವಸತಿ ನಿಲಯದಲ್ಲಿ ಮಕ್ಕಳಿಗೆ ಹಾಸಿಗೆ ನೀಡದೆ ಬೆಡ್ ಶೀಟ್ ಮೇಲೆ ಮಲಗಿಸಿರುವುದು ಕಂಡು ಸಿಡಿಮಿಡಿ ಗೊಂಡರು. ನಿಮ್ಮ ಮಕ್ಕಳನ್ನು ಹೀಗೇ ಮಲಗಿಸುತ್ತೀರಾ? ಎಂದು ಪ್ರಶ್ನಿಸಿ ಹಾಸ್ಟೆಲ್ ವಾರ್ಡನ್ ಗೆ ತರಾಟೆಗೆ ತೆಗೆದುಕೊಂಡರು. ಅಲ್ಲದೆ, ವಾರ್ಡನ್ ಗುರುರಾಜ್ ಎಂಬುವವರನ್ನು ತಕ್ಷಣದಿಂದಲೇ ಅಮಾನತು ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.ನಂತರ ಪಟ್ಟಣದಲ್ಲಿದ್ದ ಹಳೇ ಸಾರ್ವಜನಿಕ ಆಸ್ಪತ್ರೆ ಕಟ್ಟಡ ಜಾಗ ಪರಿಶೀಲನೆ ನಡೆಸಿ ಹೊಸದಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ದಪಡಿಸಲು ಸೂಚನೆ ನೀಡಿದರು. ನಂತರ ತಾಲೂಕು ಆಸ್ಪತ್ರೆ ಗೂ ಭೇಟಿ ನೀಡಿ ಪರಿಶೀಲನೆ ನಡೆಸಿ ವ್ಯವಸ್ಥೆ ಬಗ್ಗೆ ರೋಗಿಗಳ ಬಳಿ ಮಾಹಿತಿ ಪಡೆದರು.ಸರಕಾರಿ ಪದವಿಪೂರ್ವ ಹಾಗೂ ಎಸ್ ಎವಿಟಿ ಸರಕಾರಿ ಪ್ರಥಮದರ್ಜೆ ಕಾಲೇಜಿಗೆ ಭೇಟಿ ನೀಡಿ ಹೆಚ್ಚುವರಿ ಕೊಠಡಿ ನಿರ್ಮಾಣ, ಉಪನ್ಯಾಸಕರ ನೇಮಕಾತಿಗೆ ಕ್ರಮ ಕೈಗೊಳ್ಳುವುದಾಗಿ ಸಚಿವ ಜಮೀರ್ ತಿಳಿಸಿದರು.
One attachment • Scanned by Gmail