
ದೇವದುರ್ಗ.ನ.೧೧- ಹಾವು ಕಡಿತದಿಂದ ಸಾವನ್ನಪ್ಪುವವರ ಸಂಖ್ಯೆ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದ್ದು ಹಾವು ಕಡಿತಕ್ಕೆ ಗ್ರಾಮೀಣ ಭಾಗದಲ್ಲೇ ಔ?ದಿ ಸಿಗುವಂತೆ ನೋಡಿಕೊಳ್ಳಬೇಕು ಎಂದು ಸಮಾಜ ಸೇವಕಿ ದೇವಿಕಾ ದೊರೆ ಆಲ್ಕೋಡ್ ಮನವಿ ಮಾಡಿದ್ದಾರೆ.
ಕಳೆದ ಕೆಲ ತಿಂಗಳುಗಳಲ್ಲೇ ದೇವದುರ್ಗ ತಾಲೂಕಿನಲ್ಲಿ ಅನೇಕ ಜನರು ಹಾವು ಕಡಿತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಹಾವು ಕಡಿತದಿಂದ ಸಾವನ್ನಪ್ಪುವವರಲ್ಲಿ ಬಹುತೇಕರು ರೈತರು, ಕೃಷಿ ಕಾರ್ಮಿಕರಾಗಿದ್ದಾರೆ. ಹಾವು ಕಚ್ಚಿದ ತಕ್ಷಣ ಅವರ ಅಕ್ಕಪಕ್ಕದಲ್ಲೇ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಅದಕ್ಕಿಂತ ಕೆಳಹಂತದ ಆಸ್ಪತ್ರೆಗಳಲ್ಲಿ ಅವರಿಗೆ ಔಷಧಿ, ಚಿಕಿತ್ಸೆ ಲಭ್ಯವಾಗಿದ್ದರೆ ಅವರ ಪ್ರಾಣವನ್ನು ಉಳಿಸಬಹುದಾಗಿತ್ತು.
ತಾಲೂಕು ಆಸ್ಪತ್ರೆಗಳು, ತಾಲೂಕು ಕೇಂದ್ರಗಳು ಗ್ರಾಮಗಳಿಂದ ೩೦-೩೫ ಕಿ.ಮೀ. ದೂರವಿದ್ದಾಗ ಹಾವು ಕಡಿತಕ್ಕೆ ಒಳಗಾದವರನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವುದು ತುಂಬಾ ಕಷ್ಟದ ಕೆಲಸವಾಗಿರುತ್ತದೆ. ಗ್ರಾಮೀಣ ಭಾಗದಲ್ಲಿ ಔಷಧಿ ಮತ್ತು ಚಿಕಿತ್ಸೆ ಸಿಗುವಂತೆ ಮಾಡಿದರೆ ಹಾವು ಕಡಿತದಿಂದ ಉಂಟಾಗುವ ಸಾವುಗಳನ್ನು ತಪ್ಪಿಸಬಹುದಾಗಿದೆ.
ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಅದಕ್ಕಿಂತ ಚಿಕ್ಕ ಆಸ್ಪತ್ರೆಗಳಲ್ಲೂ ಕೂಡ ಹಾವು ಕಡಿತಕ್ಕೆ ಔಷಧಿ ಮತ್ತು ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕೆಂದು ಮಾಧ್ಯಮಗಳ ಮೂಲಕ ಸಮಾಜ ಸೇವಕಿ ದೇವಿಕಾ ದೊರೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.