
ಭಾಲ್ಕಿ:ಆ.5: ಪರಿಶುದ್ಧ ಪರಿಸರದಲ್ಲಿ ಬಾಳಲು ನಾವೆಲ್ಲರೂ ಹಸಿರೇ ಉಸಿರಾಗಿಸಿಕೊಳ್ಳಬೇಕು, ಅಂದಾಗ ಮಾತ್ರ ನಮ್ಮ ಬದುಕು ಸುಂದರವಾಗುತ್ತದೆ ಎಂದು ನೂತನ ಡಿವಾಯ್ಎಸ್ಪಿ ಶಿವಾನಂದ ಪವಾಡಶೆಟ್ಟಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಗಿಡಗಳನ್ನು ನೆಡುವ ಮೂಲಕ ಪರಿಸರ ಜಾಗೃತಿಗೆ ಚಾಲನೆ ನೀಡಿ ಅವರು ಮಾತನಾಡಿದರು. ವಿವಿಧ ಕಾರಣಗಳಿಂದ ನಮ್ಮ ಪರಿಸರ ಮಲೀನವಾಗುತ್ತಿದೆ. ಮಾನವನ ಬದುಕಿಗೆ ಆಮ್ಲಜನಕ ಅತ್ಯವಶ್ಯಕ, ಇಂಗಾಲವನ್ನೇ ಹೆಚ್ಚಾಗಿ ಉತ್ಪತ್ತಿಸುವರ ಪರಿಸರದಲ್ಲಿ ನಮಗೆ ಶುದ್ಧ ಆಮ್ಲಜನಕ ಕೊಡುವ ಗಿಡ, ಮರಗಳನ್ನು ನೆಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಮುಂದೊಂದುದಿನ ನಾವು ಈ ಭೂಮಿಯ ಮೇಲೆ ಆಮ್ಲಜನಕದ ಸಿಲಿಂಡರ್ ಹಚ್ಚಿಕೊಂಡು ಓಡಾಡುವ ಪರಿಸ್ಥಿತಿ ಬರುವುದು. ಅದಕ್ಕಾಗಿ ಇಂದಿನಿಂದಲೇ ನಾವೆಲ್ಲರೂ ಹೆಚ್ಚು ಗಿಡ, ಮರಗಳನ್ನು ನೆಟ್ಟು ಪರಿಸರ ಕಾಪಾಡಿಕೊಳ್ಳುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಅರಣ್ಯ ಸಚಿವರು ಸಾಕಷ್ಟು ಕಾರ್ಯಮಾಡುತ್ತಲಿದ್ದಾರೆ. ಅವರ ಕಾರ್ಯಕ್ಕೆ ನಮ್ಮೆಲ್ಲರ ಸಹಕಾರದ ಅಗತ್ಯವಿದೆ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿ ಸಿಪಿಐ ಜಿ.ಎಸ್.ಬಿರಾದಾರ, ಸರ್ಕಾರ ಮಾಡುವ ಕೆಲಸದಲ್ಲಿ ಸಾರ್ವಜನಿಕರ ಸಹಕಾರ ಮಹತ್ವದ್ದಾಗಿದೆ. ಗಿಡ, ಮರಗಳನ್ನು ನೆಡುವ ಮೂಲಕ ಅವುಗಳನ್ನು ಉಳಿಸಿ, ಬೆಳೆಸುವ ಕಾರ್ಯ ಸಾರ್ವಜನಿಕರದ್ದಾಗಿದೆ ಎಂದು ಹೇಳಿದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ದಾಬಶೆಟ್ಟಿ ಮಾತನಾಡಿ, ಪರಿಸರ ರಕ್ಷಣೆಗೆ ಹೆಚ್ಚಿನ ಜಾಗೃತಿಯ ಅವಶ್ಯಕತೆ ಇದೆ. ಇದಕ್ಕೆ ಸರ್ಕಾರದ ಜೊತೆಯಲ್ಲಿ ಸಂಘ, ಸಂಸ್ಥೆಗಳು ಕೈಜೋಡಿಸಬೇಕು ಎಂದು ಹೇಳಿದರು. ತಾಲೂಕು ಕ.ಸಾ.ಪ ಅಧ್ಯಕ್ಷ ನಾಗಭೂಷಣ ಮಾಮಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮನ್ಮಥಸ್ವಾಮಿ ಕಾಕನಾಳ, ಕಸಾಪ ನಗರಘಟಕದ ಅಧ್ಯಕ್ಷ ಸಂತೋಷ ಬಿಜಿಪಾಟೀಲ, ವಿರಶೆಟ್ಟಿ ಕರಕಾಳೆ, ಗಣಪತಿ ಬೋಚರೆ, ಭದ್ರೇಶ ಗುರಯ್ಯಾ ಸ್ವಾಮಿ, ಸಂತೋಷ ಹಡಪದ, ದೀಪಕ ಥಮಕೆ, ಪೊಲೀಸ್ ಇಲಾಖೆಯ ಅಂಬ್ರೀಶ ಮತ್ತಿತರರು ಇದ್ದರು.