
ಚಾಮರಾಜನಗರ, ಮೇ.25:- ಜಲಜೀವನ್ ಮಿಷನ್ ಕಾಮಗಾರಿ ವೇಳೆ ಗ್ರಾಮಕ್ಕೆ ಸರಬರಾಜಾಗುವ ನೀರಿನ ಪೈಪ್ ಲೈನ್ ವಿದ್ಯುತ್ ಕೇಬಲ್ ತುಂಡಾಗಿರುವುದರಿಂದ ಹಳ್ಳದ ನೀರನ್ನು ಕುಡಿಯುತ್ತಿರುವ ಕಳವಳಕಾರಿ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ಚರ ಬೆಟ್ಟದ ತಪ್ಪಲಿನ ಆನೆಹೊಲ ಗ್ರಾಮದಲ್ಲಿ ನಡೆಯುತ್ತಿದೆ.
ಜಪಜೀವನ್ ಮಿಷನ್ಕಾಮಗಾರಿ ನಡೆಸುವಾಗ ಪೈಪ್ ಲೈನ್ ಒಡೆದು ಕುಡಿಯುವ ನೀರು ಸರಬರಾಜು ಆಗದಿರುವುದರಿಂದ ಗ್ರಾಮದ ಸಮೀಪ ಇರುವ ಹಳ್ಳದ ಕಲುಷಿತ ನೀರನ್ನೇ ಬಸಿದು ಗ್ರಾಮಸ್ಥರು ಬಳಸುತ್ತಿದ್ದಾರೆ.
ಆನೆಹೊಲ ಗ್ರಾಮದಲ್ಲಿ 200 ಮನೆಗಳಿದ್ದು ಸುಮಾರು 400 ಹೆಚ್ಚು ಜನಸಂಖ್ಯೆ ಇದೆ. ಕಳೆದ 8 ದಿನಗಳಿಂದಲೂ ಕುಡಿಯುವ ನೀರು ಸರಬರಾಜುಆಗದ ಹಿನ್ನೆಲೆ ಹಳ್ಳದ ನೀರನ್ನು ಬಸಿದು ಮಹಿಳೆಯರು ಮನೆಗೆ ಹೊತ್ತುತರುವ ಪರಿಸ್ಥಿತಿ ಉದ್ಭವಿಸಿದೆ.
ಗ್ರಾಮದ ಸಮೀಪ ಹರಿಯುತ್ತಿರುವಕರಡಿ ಶೀಳು ಹಳ್ಳ ಎಂಬಲ್ಲಿಂದ ಮಹಿಳೆಯರು ಬಟ್ಟೆ ಮೂಲಕ ನೀರನ್ನು ಬಸಿದು ತರುತ್ತಿದ್ದು ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ನೀರಿನ ಸಮಸ್ಯೆಗೆ ಮುಕ್ತಿ ಹಾಡಬೇಕಿದೆ.