
ಕಲಬುರಗಿ,ಆ.1 4: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ “ನನ್ನ ಮಣ್ಣು ನನ್ನ ದೇಶ” ಕಾರ್ಯಕ್ರಮದ ಭಾಗವಾಗಿ ಹರ್ ಘರ್ ತಿರಂಗಾ ಅಭಿಯಾನ ಕೈಗೊಂಡಿದ್ದು, ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದ ಮೆಟ್ಟಿಲುಗಳ ಮೇಲೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮತ್ತು ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದು ಹರ್ ಘರ್ ತಿರಂಗಾ ಘೋಷಣೆ ಕೂಗಿ ಸಂಭ್ರಮಿಸಿದರು.
ಭಾರತ ಮಾತಾ ಕೀ ಜೈ, ಜೈ ಜವಾನ್-ಜೈ ಕಿಸಾನ್, ವಂದೇ ಮಾತರಂ ಹೀಗೆ ದೇಶ ಭಕ್ತಿಯ ಘೋಷಣೆಗಳನ್ನು ಹಾಕುತ್ತಾ ದೇಶ ಪ್ರೇಮ ಮೆರೆದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಸಿ. ಬಿ.ಫೌಜಿಯಾ ತರನ್ನುಮ್, ಆಗಸ್ಟ್ 13 ರಿಂದ 15ರ ಸಂಜೆ 6 ಗಂಟೆ ವರೆಗೆ ಜಿಲ್ಲೆಯ ಪ್ರತಿ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಬೇಕೆಂದು ಮನವಿ ಮಾಡಿದ ಅವರು, ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಆಹಾರ ಇಲಾಖೆ ಉಪನಿರ್ದೇಶಕ ಶಾಂತಗೌಡ ವಿ. ಗುಣಕಿ, ಖಜಾನೆ ಇಲಾಖೆ ಉಪನಿರ್ದೇಶಕ ಅಶೋಕ, ಆಯುಷ್ ಇಲಾಖೆ ಉಪನಿರ್ದೇಶಕಿ ಡಾ.ಬಿ.ಗಿರಿಜಾ, ಶಿಷ್ಟಾಚಾರ ತಹಶೀಲ್ದಾರ ನಿಸಾರ ಅಹ್ಮದ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗಾಯತ್ರಿ, ಡಿ.ಸಿ.ಪಿ.ಓ ಮಂಗಳಾ ಪಾಟೀಲ ಸೇರಿದಂತೆ ಇನ್ನಿತರ ಜಿಲ್ಲಾ ಮಟ್ಟದ ಅಧಿಕಾರಿಗಳು, ಡಿ.ಸಿ. ಕಚೇರಿ ಸಿಬ್ಬಂದಿಗಳು ಇದ್ದರು.