ಸಂಜೆವಾಣಿ ವಾರ್ತೆಹಗರಿಬೊಮ್ಮನಹಳ್ಳಿ. ಆ.13 ಅಪೂರ್ಣಗೊಂಡಿರುವ ಕನಕ ಭವನಕ್ಕೆ ಮೊದಲ ಹಂತದಲ್ಲಿ 25 ಲಕ್ಷ ರೂ. ಅನುದಾನ ನೀಡುತ್ತೇನೆ ಎಂದು ಶಾಸಕ ಕೆ ನೇಮಿರಾಜ್ ನಾಯ್ಕ ಭರವಸೆ ನೀಡಿದರು.ಪಟ್ಟಣದ ಕನಿಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕನಕ ಪ್ರತಿಭಾ ಪುರಸ್ಕಾರ ಮತ್ತು ಪತ್ತಿನ ಸಹಕಾರ ಬ್ಯಾಂಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ವರ್ಷ ಏನಾಗುತ್ತೋ ಅದನ್ನೇ ಮಾಡುತ್ತೇನೆ ಮುಂದಿನ ದಿನಗಳಲ್ಲಿ ಗುರುಗಳ ಆದೇಶವನ್ನು ಪಾಲಿಸುತ್ತೇನೆ ಮಠಮಾನ್ಯಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದರೆ ಅವರಿಂದ ಸಮಾಜ ಬೆಳೆಯಲು ಸಾಧ್ಯ . ಮಕ್ಕಳು ಸಂಸ್ಕಾರ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಸಮಾಜದ ಸಂಘಟನೆ ಮಾಡುವ ಮೂಲಕ ಕಟ್ಟಕಡೆಯ ವ್ಯಕ್ತಿಯ ಕಷ್ಟಕ್ಕೆ ನೆರವಾಗಬೇಕು. ಜನರಲ್ಲಿ ರಾಜಕಾರಣಿಗಳ ಮೇಲೆ ನಂಬಿಕೆ ಹೊರಟುಹೋಗಿದೆ. ಈಗ ಸುಳ್ಳು ಹೇಳುವುದು ಬಿಟ್ಟು ನಂಬಿಕೆ ಹುಟ್ಟುವಂತಹ ಕೆಲಸ ಮಾಡಬೇಕು ಎಂದರು. ಕಾರ್ಯಕ್ರಮದ ಆರಂಭದಲ್ಲಿ ಪ್ರಾಸ್ತವಿಕವಾಗಿ ಬುಡ್ಡಿ ಬಸವರಾಜ್ ಮಾತನಾಡಿ ಬೇರೆ ಸಮಾಜ ನೋಡಿದಾಗ ನಾವೆಲ್ಲ ದೂರ ಇದ್ದೇವೆ ಎಂದು ಭಾವಿಸಿಕೊಂಡಿದ್ದೇವೆ ಹಾಗಾಗಿ ನಾವೆಲ್ಲರೂ ಸಂಘಟನೆಯಾಗಬೇಕು. ತಾಲೂಕಿನಲ್ಲಿ ಕನಕ ಭವನ ಪೂರ್ಣಗೊಳಿಸಲು ಶಾಸಕರು ಅನುದಾನ ನೀಡುತ್ತಾರೆ ಎಂಬ ನಂಬಿಕೆ ಇದೆ. ಈ ಹಿಂದೆ ಇದ್ದ ಶಾಸಕ ಕೋಟಿ ಕೋಟಿ ಕೊಡುತ್ತೇನೆ ಎಂದು ಸುಳ್ಳು ಹೇಳಿ ನಮ್ಮ ಸಮಾಜವನ್ನು ಬಳಸಿಕೊಂಡರು ಎಂದು ಖಾರದಿಂದ ನುಡಿದರು. ಕಾರ್ಯಕ್ರಮದ ಸಾನಿಧ್ಯ ವಹಿಸಿ ಕನಕ ಗುರು ಪೀಠದ ತಿಂಥಣಿ ಬ್ರಿಡ್ಜ್ ಸಿದ್ದರಾಮನಂದಪುರಿ ಮಹಾಸ್ವಾಮಿಗಳು ಮಾತನಾಡಿ ಪದವಿ ಪಡೆದ ವಿದ್ಯಾರ್ಥಿಗಳು ಸುಮ್ಮನೆ ಕೂತುಕೊಳ್ಳುವ ಬದಲು ನೌಕರಿಗೆ ಪ್ರಯತ್ನಿಸಬೇಕು. ತಂದೆ ತಾಯಿಗಳು ಕಷ್ಟದಿಂದ ವಿದ್ಯಾಭ್ಯಾಸ ನೀಡಿರುತ್ತಾರೆ. ಅವರ ಕನಸನ್ನು ನೀವು ನಿಜ ಗೊಳಿಸಬೇಕು. ತಂದೆ ತಾಯಿ ಮಾಡಿದ ಆಸ್ತಿಯನ್ನು ಕಳೆದುಕೊಳ್ಳದೆ ಅದನ್ನೇ ಬಂಡವಾಳ ಮಾಡಿಕೊಂಡು ಹೊಸ ಹೊಸ ಹುದ್ದೆಗಳಲ್ಲಿ ಸೇರಿಕೊಳ್ಳುವ ಮೂಲಕ ಸಮಾಜದ ಒಳ್ಳೆಯ ಪ್ರತಿಭೆಗಳಾಗಬೇಕು. ತಾಲೂಕಿನಲ್ಲಿ ಒಂದು ಭವನ ಸಮಾಜದ ಹಾಸ್ಟೆಲ್ ನಿರ್ಮಿಸಬೇಕು ಎಂಬುವುದು ನನ್ನ ಆಸೆಯಾಗಿದೆ ಎಂದರು. ಇದೆ ವೇಳೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪುರಸ್ಕಾರ ಮಾಡಲಾಯಿತು ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಕೆ. ವೆಂಕಟೇಶ್, ಜಿಲ್ಲಾ ಕುರುಬ ಸಂಘದ ಕಾರ್ಯದರ್ಶಿ ಕುರಿ ಶಿವಮೂರ್ತಿ, ಬಿ ಇಒ ಆಗಿದ್ದ ಶೇಖರಪ್ಪ ಹೊರಪೇಟೆ, ಜೆಡಿಎಸ್ ತಾಲೂಕಾಧ್ಯಕ್ಷ ವೈ. ಮಲ್ಲಿಕಾರ್ಜುನ್, ನಂದಿಪುರ ಚರಂತ ಸ್ವಾಮೀಜಿ ಮಾತನಾಡಿದರು.ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಮುಟಗನಹಳ್ಳಿ ಕೊಟ್ರೇಶ್, ಬಣಕಾರ್ ಗೋಣೆಪ್ಪ ಕೊಟ್ರಯ್ಯ ಒಡೆಯರ್, ಎಂಎಸ್ ಕಲ್ಗುಡಿ, ಫೋಟೋ ರಾಮಣ್ಣ,ಬಣಕಾರ್ ಸುರೇಶ್, ಕುರುಬರ ವೆಂಕಟೇಶ್, ಟಿ ಮಹೇಶ್, ಮೇಟಿ ಬಸವರಾಜ್, ಮೈನಹಳ್ಳಿ ಪ್ರಭಾಕರ್, ಕೋಗಳಿ ಹನುಮಂತಪ್ಪ,ಬಿಕೆ ಬಸವರಾಜ್ ಇತರರಿದ್ದರು. ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತ ಗೂಳೆಪ್ಪ ನಿರ್ವಹಿಸಿದರು .