
ಬೆಂಗಳೂರು, ನ. ೧೨- ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಇವೆಲ್ಲಾ ಇಲ್ಲ. ಯಾರು ಹೈಕಮಾಂಡ್ಗೆ ಹೆಚ್ಚು ಹಣ ಕೊಡುತ್ತಾರೋ ಅವರು ಅಧಿಕಾರದಲ್ಲಿ ಇರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವರಿಗೆ ಗುರಿ ನೀಡಿದೆ. ಯಾರು ಹೆಚ್ಚು ಹಣ ನೀಡುವರೋ ಅವರು ಅಧಿಕಾರದಲ್ಲಿ ಮುಂದುವರೆಯುತ್ತಾರೆ. ಹಣ ನೀಡದವರು ಸಚಿವರೂ ಆಗಲ್ಲ ಎಂದರು. ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆಯಾಗಿದೆ ಎಂಬುದೆಲ್ಲಾ ಸರಿಯಲ್ಲ.
ಮುಖ್ಯಮಂತ್ರಿಯಾಗಿ ಮುಂದುವರೆಯಬೇಕಾದರೆ ಸಿದ್ದರಾಮಯ್ಯ ಹೆಚ್ಚು ಹಣ ಕೊಡಬೇಕು. ಹಾಗೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರುಗಳು ಹಣ ಕೊಟ್ಟರೆ ಮಾತ್ರ ಅಧಿಕಾರದಲ್ಲಿ ಮುಂದುವರೆಯುತ್ತಾರೆ ಅಷ್ಟೇ ಎಂದರು. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಜಾರಿ ಮಾಡಲು ಸಾಧ್ಯವಾಗದ ಮುಖ್ಯಮಂತ್ರಿ ಸಿದ್ಧರಾಮಯ್ಯ ತೆಲಂಗಾಣಕ್ಕೆ ಹೋಗಿ ಭಾಷಣ ಮಾಡುತ್ತಾರೆ. ಇವರು ಡ್ಯೂಪ್ಲಿಕೇಟ್ ಸಿಎಂ ಎಂದು ಟೀಕಿಸಿದ ಅವರು, ಮೊದಲು ನಮ್ಮ ರಾಜ್ಯದ ಸಮಸ್ಯೆಯನ್ನು ಸರಿ ಮಾಡಪ್ಪ ಎಂದು ಸಿದ್ಧರಾಮಯ್ಯ ಅವರನ್ನು ಗುರಿಯಾಗಿಸಿ ಹೇಳಿದರು. ಪಂಚರಾಜ್ಯಗಳ ಮತದಾರರಿಗೆ ಕಾಂಗ್ರೆಸ್ ಪಕ್ಷ ಸುಳ್ಳು ಗ್ಯಾರಂಟಿಗಳನ್ನು ಘೋಷಿಸುತ್ತದೆ. ಕರ್ನಾಟಕದಲ್ಲಿ ಸುಳ್ಳು ಗ್ಯಾರಂಟಿ ನೀಡಿ ಜನರಿಗೆ ಟೋಪಿ ಹಾಕಿದೆ. ಹಾಗಾಗಿ ಪಂಚ ರಾಜ್ಯಗಳ ಮತದಾರರು ಕಾಂಗ್ರೆಸ್ನ ಗ್ಯಾರಂಟಿಗಳಿಗೆ ಮರುಳಾಗಬಾರದು ಎಂದರು. ಕರ್ನಾಟಕ ಕಗ್ಗತ್ತಲಲ್ಲಿದೆ. ಗೃಹಜ್ಯೋತಿ ಫಲಾನುಭವಿಗಳಿಗೂ ವಿದ್ಯುತ್ ಬಿಲ್ ಬರುತ್ತಿದೆ. ಹೀಗಿರುವಾಗ ಡ್ಯೂಪ್ಲಿಕೇಟ್ ಸಿಎಂ ಸಿದ್ಧರಾಮಯ್ಯ ತೆಲಂಗಾಣದಲ್ಲಿ ೨೪ ಗಂಟೆ ಉಚಿತ ಕರೆಂಟ್ ಕೊಡುತ್ತೇವೆ ಎಂದು ಭಾಷಣ ಹೊಡಿದ್ದಾರೆ ಎಂದು ಟೀಕಿಸಿದರು. ತೆಲಂಗಾಣದಲ್ಲಿ ಸಿದ್ಧರಾಮಯ್ಯ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹೇಳಿದ್ದಾರೆ. ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಆಮೇಲೆ ತೆಲಂಗಾಣಕ್ಕೆ ಹೋಗಿ ಭಾಷಣ ಮಾಡಲಿ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಗ್ಯಾರಂಟಿ ಹೆಸರಿನಲ್ಲಿ ಕಿವಿಗೆ ಹೂ ಮುಡಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಸಾಧಕ ಬಾಧಕಗಳ ಬಗ್ಗೆ ಮುಂದೆ ವಿವರವಾಗಿ ಹೇಳುತ್ತೇನೆ ಎಂದು ಹೇಳಿ, ಸಮಾಜ ಕಲ್ಯಾಣ ಇಲಾಖೆಯ ೧೦ ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿದ್ದಾರೆ. ಅಭಿವೃದ್ಧಿ ಕಾರ್ಯಕ್ಕೆ ಹಣ ಇಲ್ಲ ಎಂದರು. ಸಿದ್ಧರಾಮಯ್ಯ ರವರಿಗೆ ನನ್ನ ಹೆಸರು ಕೇಳಿದರೆ ಭಯ ಹಾಗಾಗಿ ಅವರು ತೆಲಂಗಾಣದಲ್ಲಿ ನರೇಂದ್ರಮೋದಿ ಅವರಿಗೆ ಚಾಲೆಂಜ್ ಮಾಡುತ್ತಾರೆ. ಸಾಲದಿಂದ ದೇಶ ದಿವಾಳಿಯಾಗಿದೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ. ಇವರು ಐದು ವರ್ಷ ಸಿಎಂ ಆಗಿದ್ದಾಗ ೨ ಲಕ್ಷದ ೪೫ ಸಾವಿರ ಕೋಟಿ ರೂ.ಗಳನ್ನು ಸಾಲ ಮಾಡಿದ್ದರು.
ಇವರಿಗೆ ಯಾವ ನೈತಿಕತೆ ಇದೆ ಎಂದು ಹರಿಹಾಯ್ದರು. ಸರ್ಕಾರದ ಖಜಾನೆಯ ದುಡ್ಡೆಲ್ಲಾ ಆಯ್ದ ವ್ಯಕ್ತಿಗಳ ಮನೆಯಲ್ಲಿದೆ. ರಾಜ್ಯದಲ್ಲಿ ದುಡ್ಡು ಮಾಡಿ ದೇಶದಲ್ಲಿ ಎಲೆಕ್ಷನ್ ನಡೆಸುವುದು ಕಾಂಗ್ರಸ್ ನಾಯಕರ ಉದ್ದೇಶ ಎಂದು ಟೀಕಿಸಿದರು. ಮುಖ್ಯಮಂತ್ರಿ ಕಚೇರಿ ನವೀಕರಣಕ್ಕೆ ಕೋಟಿ ಕೋಟಿ ರೂ. ಖರ್ಚು ಮಾಡಲಾಗಿದೆ. ಇಷ್ಟಾದರೂ ಯಾರೋ ಆಪ್ತ ಸಚಿವರು ವಿದೇಶದಲ್ಲಿ ಸಿಗುವ ಕೋಟಿ ಕೋಟಿ ಬೆಲೆಯ ಸೋಫಾ ಸೆಟ್ನ್ನು ಗಿಫ್ಟಾಗಿ ಕೊಟ್ಟಿದ್ದಾರಂತೆ ಇದು ಹ್ಯೂಬ್ಲೆಟ್ ವಾಚ್ನ ಅಪ್ಡೆಟ್ ವರ್ಷನ್ ಇರಬಹುದು ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.