
ಅಥಣಿ : ಜು.25:ತಾಲೂಕಿನ ಶಂಕರಹಟ್ಟಿ ಗ್ರಾಮದ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ನಿವೇಶನಗಳ ಹಕ್ಕು ಪತ್ರ ಹಾಗೂ ನಿವೇಶನ ಸ್ವಾಧೀನತೆ ಕೊಡುವಲ್ಲಿ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಅಥಣಿ ತಾಲೂಕು ಆಡಳಿತ, ತಾಲೂಕಾ ಪಂಚಾಯತಿ ಅಥಣಿ ಹಾಗೂ ಗ್ರಾಮ ಪಂಚಾಯತ ಶಂಕರಹಟ್ಟಿ ಇವರ ವಿರುದ್ಧ ಅಥಣಿ ತಾಲೂಕು ಪಂಚಾಯತಿ ಎದುರು ಫಲಾನುಭವಿಗಳು ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ .
ಈ ವೇಳೆ ಫಲಾನುಭವಿ ಅನೀಲ ಸಾಣೆ ಮಾತನಾಡುತ್ತಾ ಶಂಕರಹಟ್ಟಿ ಗ್ರಾಮದ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ರಿ.ಸ.ನಂ: 2391 ರಲ್ಲಿ ಈಗಾಗಲೆ 2005-06 ರಲ್ಲಿ ಸರಕಾರದಿಂದ ಜಮೀನು ಖರೀದಿಸಿ ಠರಾವು ಪಾಸುಮಾಡಿ ಪರಿಶಿಷ್ಟ ಜಾತಿಯ 49 ಫಲಾನುಭವಿಗಳನ್ನು ಆಯ್ಕೆ ಮಾಡಿ ಅಂದಿನ ಶಾಸಕರಾದ ಲಕ್ಷ್ಮಣ ಸವದಿ ಇವರ ನೇತೃತ್ವದಲ್ಲಿ 2011 ರಲ್ಲಿ ಹಕ್ಕುಪತ್ರಗಳನ್ನು ಹಂಚಿಕೆ ಮಾಡಿರುತ್ತಾರೆ. ಆವಾಗ ‘ಪಂಚಾಯತಿಯ ಆಸ್ತಿ ರಜಿಸ್ಟರದಲ್ಲಿ ನೋಂದ ಮಾಡಿಕೊಡುವುದಾಗಿ ಹೇಳಿ ಕೊಟ್ಟಂತಹ 49 ಹಕ್ಕುಪತ್ರಗಳನ್ನು ಫಲಾನುಭವಿಗಳಿಂದ ಗ್ರಾಮ ಪಂಚಾಯತ ಕಾರ್ಯದರ್ಶಿಗಳು, ವಾಪಸ ಪಡೆದುಕೊಂಡರು. ಆ ಹೊತ್ತಿನಿಂದ ಈ ಹೊತ್ತಿನವರೆಗೂ ಹಕ್ಕುಪತ್ರಗಳನ್ನು ಕೊಡದ ಈಗ ಒಂದು ವರ್ಷದ ಹಿಂದೆ 49 ಫಲಾನುಭವಿಗಳ ಪೈಕಿ 34 ಫಲನುಭವಿಗಳಿಗೆ ಮಾತ್ರ ಹಕ್ಕು ಪತ್ರಗಳನ್ನು ನೀಡಿದ್ದು ಇನ್ನುಳಿದ 15 ಜನ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ನೀಡಲು ವಿಳಂಬ ಮಾಡುವುದರ ಜೊತೆಗೆ ಈ ಹಿಂದೆ ಕೊಟ್ಟಂತಹ 34 ಫಲಾನುಭವಿಗಳಿಂದ ಕಂದಾಯ ತೆರಿಗೆಯನ್ನು ತುಂಬಿಸಿಕೊಂಡು ಅವರಿಗೆ ನಿವೇಶನ ಸ್ವಾಧೀನತೆಗೆ ಅಡ್ಡಿ ಪಡಿಸುತ್ತಿದ್ದಾರೆ. ಇದು ದಲಿತ ವಿರೋಧಿ ನೀತಿಯನ್ನು ಅನುಸರಿಸಿದಂತಾಗುತ್ತದೆ. ಇದನ್ನು ಖಂಡಿಸಿ ತಾಲೂಕಾ ಪಂಚಾಯತಿ ಆವರಣದ ಮುಂದೆ ನೊಂದ ಫಲಾನುಭವಿಗಳು ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಗಾಮ ಶಾಖೆ, ಶಂಕರಹಟ್ಟಿ ವತಿಯಿಂದ ತಾಲೂಕಾ ಪಂಚಾಯತಿ, ಅಥಣಿ ಇವರ ಆವರಣದ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೆವೆ ಎಂದು ಹೇಳಿದರು .
ಈ ವೇಳೆ ಪರಶುರಾಮ ಟೊನಪೆ, ರಾಘವೇಂದ್ರ ಶಿಂಪಿ, ಪಾರೀಸ್ ಗೋಂದಳಿ, ಕುಮಾರ ಕಾಂಬಳೆ, ಪ್ರಕಾಶ ಕಾಂಬಳೆ ಶಿವಾನಂದ ಸೌದಾಗರ, ವಿಜಯ ಬಡಚಿ, ಕುಮಾರ ಐದಣ್ಣವರ, ಸಾಗರ ಕಾಂಬಳೆ, ಯಲ್ಲಪ್ಪ ಮಾಳಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು .