
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೨೯:ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಕರ ಹೆಸರು ಅಂತಿಮಗೊಂಡಿದ್ದು, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಈ ವರ್ಷದ ದಸರಾವನ್ನು ಉದ್ಘಾಟಿಸುವರು. ಮೈಸೂರಿನಲ್ಲಿಂದು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರು, ಈ ಬಾರಿಯ ದಸರಾವನ್ನು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಉದ್ಘಾಟಿಸುವರು ಎಂದು ಹೇಳಿದರು.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿಂದು ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಮುಖ್ಯಮಂತ್ರಿಗಳು, ವಿಶ್ವವಿಖ್ಯಾತ ಮೈಸೂರು ದಸರಾವನ್ನು ಅಕ್ಟೋಬರ್ ೧೫ರಂದು ಬೆಳಿಗ್ಗೆ ೧೦.೧೫ರಿಂದ ೧೦.೩೦ರ ಒಳಗಿನ ಶುಭ ಲಗ್ನದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಉದ್ಘಾಟಿಸುವರು ಎಂದರು.
ಈ ಬಾರಿಯ ಮೈಸೂರು ದಸರಾ ಉದ್ಘಾಟಕರ ಹೆಸರನ್ನು ಅಂತಿಮಗೊಳಿಸುವ ತೀರ್ಮಾನವನ್ನು ಸಚಿವ ಸಂಪುಟ ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿವೇಚನೆಗೆ ಬಿಡಲಾಗಿತ್ತು. ಅದರಂತೆ ಮುಖ್ಯಮಂತ್ರಿಗಳು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ಹೆಸರನ್ನು ಅಂತಿಮಗೊಳಿಸಿ ಅವರೇ ಉದ್ಘಾಟಕರ ಹೆಸರನ್ನು ಘೋಷಣೆ ಮಾಡಿದ್ದಾರೆ.
ನಾಡ ಹಬ್ಬ ದಸರಾ ಅ. ೧೫ ರಿಂದ ಆರಂಭಗೊಳ್ಳಲಿದ್ದು, ೧೦ ದಿನಗಳ ಕಾಲ ದಸರಾ ವೈಭವೋಪೇತವಾಗಿ ನಡೆಯಲಿದ್ದು, ವಿಜಯದಶಮಿ ದಿನ ನಾಡದೇವತೆ ಚಾಮುಂಡೇಶ್ವರಿಯ ಅದ್ಧೂರಿ ಜಂಬೂಸವಾರಿಯೊಂದಿಗೆ ದಸರಾ ಮುಕ್ತಾಯಗೊಳ್ಳಲಿದೆ.
ಈ ಬಾರಿಯ ದಸರಾವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಯುವ ದಸರಾ, ರೈತರ ದಸರಾ ಹೀಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಗಿದೆ.ಮೈಸೂರು ದಸರಾಗೆ ಸಿದ್ಧತೆಗಳು ಭರದಿಂದ ನಡೆದಿದ್ದು, ಮೈಸೂರು ದಸರಾಗೆ ಅಗತ್ಯ ಅನುದಾನವನ್ನು ಒದಗಿಸಲು ಸರ್ಕಾರ ಮುಂದಾಗಿದೆ.ಪ್ರತಿ ಬಾರಿಯೂ ಜಂಬೂಸವಾರಿ ಮೆರವಣಿಗೆ ದಸಾರ ಉತ್ಸವದ ಪ್ರಮುಖ ಆಕರ್ಷಣಿಯಾಗಿದೆ. ೯ ದಿನಗಳ ಕಾಲ ನಡೆಯಲಿರುವ ವೈಭವೋಪೇತ ದಸರಾ ಉತ್ಸವದಲ್ಲಿ ಸಾಂಸ್ಕೃತಿಕ ನಗರಿ ಸಿದ್ದಗೊಳ್ಳುತ್ತಿದೆ. ಜಂಬೂಸವಾರಿ ದಿನದಿಂದು ಅರಮನೆ ಮುಂಭಾಗ ಬಲರಾಮನ ದ್ವಾರದ ಬಳಿ ನಂದಿಧ್ವಜಕ್ಕೆ ಮುಖ್ಯಮಂತ್ರಿಗಳು ಪೂಜೆ ಸಲ್ಲಿಸುವ ಮೂಲಕ ಅದ್ಧೂರಿ ದಸರಾ ಮೆರವಣಿಗೆ ಚಾಲನೆ ದೊರೆಯಲಿದೆ.೯ ದಿನಗಳ ಕಾಲ ಮೈಸೂರು ನಗರದ ಪಾರಂಪಾರಿಕ ಐತಿಹಾಸಿಕ ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತದೆ. ಈ ಕಣ್ಣುಕೋರೈಸುವ ವಿದ್ಯುತ್ ದೀಪಗಳನ್ನು ಕಣ್ತುಂಬಿಕೊಳ್ಳಲು ದಸರಾ ಮೆರವಣಿಗೆಯನ್ನು ವೀಕ್ಷಿಸಲು ಲಕ್ಷಾಂತರ ಜನರು ಮೈಸೂರಿಗೆ ಭೇಟಿ ನೀಡುತ್ತಾರೆ. ಇದರ ಜೊತೆಗೆ ಫಲಪುಷ್ಪ ಪ್ರದರ್ಶನ, ಯುವ ದಸರಾ ಸೇರಿದಂತೆ ಅರಮನೆಯಲ್ಲಿ ನಡೆಯಲಿರುವ ಸಂಗೀತ ಕಾರ್ಯಕ್ರಮ ದಸರಾ ಮಹೋತ್ಸಕ್ಕೆ ಮೆರಗು ತಂದು ಕೊಡಲಿದೆ. ಒಟ್ಟಾರೆ ಈ ಬಾರಿಯ ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ನಾದಬ್ರಹ್ಮ ಸಂತಸ
ದಸರಾ ಉದ್ಘಾಟನೆಗೆ ತಮಗೆ ಅವಕಾಶ ಸಿಕ್ಕಿರುವುದಕ್ಕೆ ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಸಂತಸ ವ್ಯಕ್ತಪಡಿಸಿದ್ದಾರೆ. ದಸರಾ ಉದ್ಘಾಟನೆಗೆ ತಮಗೆ ಸಿಕ್ಕಿರುವ ಅವಕಾಶದ ಸಂತಸವನ್ನು ಹಂಚಿಕೊಂಡಿರುವ ಹಂಸಲೇಖ ಅವರು, ನಾನು ಕಲಾಪ್ರತಿನಿಧಿಯಾಗಿದ್ದೇನೆ. ಎಲ್ಲರ ಪರವಾಗಿ ದಸರಾ ದೀಪ ಹಚ್ಚುತ್ತೇನೆ ಎಂದರು.ಮೈಸೂರು ದಸರಾ ಉದ್ಘಾಟನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ನನಗೆ ಕರೆ ಮಾಡಿ ಹೇಳಿದರು. ನಿಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದೇವೆ ಎಂದು ಸಿಎಂ ಹೇಳಿದ ಮೇಲೆ ನಾನು ಒಪ್ಪಿಕೊಂಡೆ ಎಂದು ಹೇಳಿದರು.ಕಳೆದ ವರ್ಷ ನನಗೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನನ್ನನ್ನು ಭೇಟಿಯಾಗಿ ನನಗೆ ಶುಭಹಾರೈಸಿದ್ದರು. ಅವರಿಗೆ ಧನ್ಯವಾದ ಎಂದ ಹಂಸಲೇಖ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು. ರಾಜ್ಯದಲ್ಲಿ ಹಲವು ಸಿದ್ಧಾಂತಗಳಿವೆ ಆದರೆ ಕನ್ನಡ ಎಂದಾಕ್ಷಣ ಎಲ್ಲರೂ ಒಂದಾಗಬೇಕು ಎಂದರು.
ದಸರಾ ಉತ್ಸವಕ್ಕೆ ಹೊಸ ಹಾಡನ್ನು ಮಾಡುವ ಆಸೆ ನನ್ನಲ್ಲಿ ಮೂಡಿದೆ. ಬದುಕಿದು ಕನ್ನಡ ಭಿಕ್ಷೆ, ಇಲ್ಲಿ ಸಮರಸವೇ ನಮ್ಮ ರಕ್ಷೆ ಎಂಬ ಸಾಲುಗಳನ್ನು ಅವರು ಉಲ್ಲೇಖಿಸಿ ದಸರಾಗೆ ಹಾಡೊಂದನ್ನು ಬರೆಯುವ ಬಯಕೆಯನ್ನು ಖುಷಿಯಿಂದ ಹಂಚಿಕೊಂಡರು.