
ನವದೆಹಲಿ,ಆ.೧೩- ಈ ಬಾರಿ ಸ್ವಾತಂತ್ರ್ಯೋತ್ಸವದಂದು ಕೆಂಪು ಕೋಟೆಯಿಂದ ಸ್ವಾತಂತ್ರ್ಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾಡುವ ಭಾಷಣ ಆಲಿಸಲು ರೈತರು, ದಾದಿಯರು,ಶಿಕ್ಷಕರು ಸೇರಿದಂತೆ ವಿವಿಧ ವರ್ಗಗಳ “ಸುಮಾರು ೧,೮೦೦ ವಿಶೇಷ ಅತಿಥಿಗಳಿಗೆ ಆಹ್ವಾನ ನೀಡಿಲಾಗಿದೆ.
ರಾಜ್ಯದ ಇಬ್ಬರು ಮಹಿಳಾ ನೀರುಘಂಟಿಗಳಿಗೆ ಹಾಗೂ ರೈತ ಉತ್ಪಾದಕ ಕಂಪನಿ ಸ್ಥಾಪಿಸಿರುವ ರೈತ ದಂಪತಿಗಳಿಗೂ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಗಿದ್ದು, ಚಾಮರಾಜನಗರ ಜಿಲ್ಲೆಯ ಎಡಂದೂರು ತಾಲ್ಲೂಕಿನ ಕಿನಕಹಳ್ಳಿ ಗ್ರಾಮದ ನಳಿನಕುಮಾರಿ ಮತ್ತು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಗೌಡಯ್ಯ ಗ್ರಾಮದ ಪುಷ್ಪವತಿ ಹೊನತಿ ಇವರುಗಳಿಗೂ ಆಹ್ವಾನ ಬಂದಿದ್ದು, ಇವರುಗಳ ತಮ್ಮ ಗ್ರಾಮಗಳಲ್ಲಿ ನೀರುಘಂಟಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ವಿಜಯನಗರ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಬಣವಿಕಲ್ಲು ಗ್ರಾಮದ ಜಿ. ಅಂಬಿಕಾ ಗಿರೀಶ್ ದಂಪತಿಗಳಿಗೂ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಅವರು ಆಹ್ವಾನ ನೀಡಿದ್ದು, ಈ ದಂಪತಿಗಳು ರೈತ ಉತ್ಪಾದಕ ಕಂಪನಿ ಸ್ಥಾಪಿಸಿ ಲಾಭಾಂಶವಿಲ್ಲದೆ ರೈತರಿಗೆ ಬಿತ್ತನೆ ಬೀಜ ಗೊಬ್ಬರ ಔಷಧಿ ಪೂರೈಸುವ ಕೆಲಸ ಮಾಡುತ್ತಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಇತರ ಆಹ್ವಾನಿತರಲ್ಲಿ ಗ್ರಾಮಗಳ ಸರಪಂಚ್ಗಳು, ಶಿಕ್ಷಕರು, ರೈತರು ಮತ್ತು ಮೀನುಗಾರರು ಸೇರಿದ್ದಾರೆ. ಇದೇ ಮೊದಲ ಬಾರಿ ಇಷ್ಟೊಂದು ಸಂಖ್ಯೆಯಲ್ಲಿ ವಿವಿಧ ಕಾಯಕದಲ್ಲಿ ತೊಡಗಿರುವನ್ನು ಆಯ್ಕೆ ಮಾಡಲಾಗಿದೆ.ಒಂದೊಂದು ರಾಜ್ಯದಿಂದ ಪ್ರತಿ ಕ್ಷೇತ್ರದಿಂದ ಇಬ್ಬರು ಮೂರು ಮಂದಿ ಆಯ್ಕೆ ಮಾಡಲಾಗಿದೆ.
ದೇಶದ ಸ್ವಾತಂತ್ರ್ಯೋತ್ಸವಕ್ಕೆ ೭೫ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ೧೮೦೦ ಮಂದಿಯನ್ನು ವಿಶೇಷ ಆಹ್ವಾನಿತರಾಗಿ ೧೫ರ ಸ್ವಾತಂತ್ರೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಇದರಲ್ಲಿ ೫೦ ಮಂದಿ ನರ್ಸ್ ಮತ್ತು ಅವರ ಕುಟುಂಬದವರೂ ಸೇರಿದ್ದಾರೆ.
ಸಮಾಜದ ಎಲ್ಲ ವರ್ಗದ ಜನರನ್ನು ಆಹ್ವಾನಿಸುವ ಸರ್ಕಾರದ ಉಪಕ್ರಮದ ಭಾಗವಾಗಿ ಅವರನ್ನು ಆಹ್ವಾನಿಸಲಾಗಿದೆ. “ಶುಶ್ರೂಷಾ ವೃತ್ತಿಯನ್ನು ಗುರುತಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಆಹ್ವಾನಿತ ಮಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಕೋವಿಡ್ ನಂತರ, ಆಸ್ಪತ್ರೆ ಸೇವೆಗಳನ್ನು ನಡೆಸುವಲ್ಲಿ ದಾದಿಯರ ಮಹತ್ವದ ಬಗ್ಗೆ ಜನರು ಹೆಚ್ಚು ಜಾಗೃತರಾಗಿದ್ದಾರೆ” ಎಂದು ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಹಿರಿಯ ನರ್ಸಿಂಗ್ ಅಧಿಕಾರಿ ನಿಧಿ ಬೇಲಾ ಹೇಳಿದ್ದಾರೆ.
ಫರಿದಾಬಾದ್ನ ಬಾದ್ಶಾ ಖಾನ್ ಸಿವಿಲ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ನಲ್ಲಿ ನರ್ಸಿಂಗ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸವಿತಾ ರಾಣಿ ಮತ್ತೊಬ್ಬ ಆಹ್ವಾನಿತರಾಗಿದ್ದಾರೆ.
ಕೋವಿಡ್ -೧೯ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರ ಅತ್ಯುತ್ತಮ ಕೆಲಸಕ್ಕಾಗಿ ನರ್ಸಿಂಗ್ ದಿನದಂದು ಅವರನ್ನು ಅಧ್ಯಕ್ಷ ದ್ರೌಪದಿ ಮುರ್ಮು ಅವರು ಗೌರವಿಸಿದ್ದರು. ಅವರನ್ನು ಆಹ್ವಾನಿಸಲಾಗಿದೆ.
ಹಿಂದೂ ರಾವ್ ಆಸ್ಪತ್ರೆಯ ಸಹಾಯಕ ನರ್ಸಿಂಗ್ ಸೂಪರಿಂಟೆಂಡೆಂಟ್ ವೀರಮತಿ ಅವರು ಆಗಸ್ಟ್ ೧೫ ರಂದು ನಡೆಯುವ ಆಚರಣೆಗೆ ಹಾಜರಾಗಲು ಆಹ್ವಾನಿಸಿದ್ದಾರೆ, ಕೋವಿಡ್ -೧೯ ನಿರ್ವಹಣೆಯ ಉಸ್ತುವಾರಿ ವಹಿಸಿದ್ದರು. “ಸಾಂಕ್ರಾಮಿಕ ರೋಗದ ಸಮು ಕಠಿಣ ಅವಧಿಯಾಗಿತ್ತು. ನಮ್ಮ ಪ್ರಯತ್ನಗಳ ಮೂಲಕ ಅದನ್ನು ಸುಲಭಗೊಳಿಸಿದ್ದೇವೆ, ಕೆಲವೊಮ್ಮೆ ನಮ್ಮ ಸ್ವಂತ ಕುಟುಂಬದ ಅಗತ್ಯಗಳನ್ನು ತ್ಯಾಗ ಮಾಡಿದ್ದವು ಎಂದಿದ್ದಾರೆ.
ಪ್ರತಿಷ್ಠಿತ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ನಮ್ಮನ್ನು ಆಹ್ವಾನಿಸುವ ಮೂಲಕ ಸರ್ಕಾರ ನಮ್ಮ ಪ್ರಯತ್ನಗಳನ್ನು ಗುರುತಿಸುತ್ತಿದೆ ಎಂದು ನನಗೆ ಖುಷಿಯಾಗಿದೆ, ”ಎಂದು ೫೬ ವರ್ಷ ವಯಸ್ಸಿನ ವೀರಮತಿ ಹೇಳಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷ ಪೂರ್ಣ ಹಿನ್ನೆಲೆ
- ಈ ಬಾರಿಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ೧೮೦೦ ವಿಶೇಷ ಆಹ್ವಾನಿತರಿಗೆ ಅವಕಾಶ
- ರೈತರು, ದಾದಿಯರು, ಸರಪಂಚರು, ಶಿಕ್ಷಕರು ಸೇರಿ ಹಲವು ಮಂದಿ ಭಾಗಿ
- ಇದೇ ಮೊದಲ ಬಾರಿಗೆ ಕಾಯಕವನ್ನೇ ನಂಬಿ ಬದುಕುತ್ತಿರುವ ಜನರಿಗೆ ಆಹ್ವಾನ
- ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ಸಿಕ್ಕಿದಕ್ಕೆ ಅನೇಕರು ಹರ್ಷ
- ಒಂದೊಂದು ರಾಜ್ಯದಿಂದ ಪ್ರತಿ ಕ್ಷೇತ್ರದಿಂದ ಇಬ್ಬರು ಮೂರು ಮಂದಿ ಆಯ್ಕೆ