ಸ್ವಾಗತಾರ್ಹ ಬಜೇಟ್

ಗುರುಮಠಕಲ್:ಜು.8:ಕರ್ನಾಟಕ ರಾಜ್ಯ ಬಜೆಟ್ ಘೋಷಣೆಯಾಗಿದೆ. ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಲು ಕಟ್ಟಡ ದುರಸ್ತಿ ಸೇರಿದಂತೆ ಇತರ ಸೌಲಭ್ಯಗಳ ಅಭಿವೃದ್ಧಿಗಾಗಿ ಅನುದಾನ ಘೋಷಿಸಲಾಗಿದೆ. ತಜ್ಞರ ಸಮಿತಿ ನೇಮಕ ಮಾಡಿ ಪಠ್ಯಪುಸ್ತಕ ಪರಿಷ್ಕರಣೆ ಮಾಡುವುದಾಗಿ ಹಾಗೂ ಹೊಸ ಶಿಕ್ಷಣ ನೀತಿ 2020ಯನ್ನು ಕೈಬಿಟ್ಟು ರಾಜ್ಯಕ್ಕೆ ಪ್ರತ್ಯೇಕ ನೀತಿಯೊಂದನ್ನು ಜಾರಿಗೊಳಿಸುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ, ಜೊತೆಗೆ, ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಅನುದಾನವನ್ನು ಹೆಚ್ಚಿಸಲಾಗಿದೆ. ಸರ್ಕಾರದ ಈ ನಿರ್ಧಾರಗಳನ್ನು ಎಐಡಿಎಸ್‍ಓ ಸ್ವಾಗತಿಸುತ್ತದೆ.

ಇದು, ಪಠ್ಯಪುಸ್ತಕ ಪರಿಷ್ಕರಣೆ ಹಾಗೂ ಸಾರ್ವಜನಿಕ ಶಿಕ್ಷಣದ ಉಳಿವಿಗಾಗಿ ಎನ್.ಇ.ಪಿ ವಿರೋಧಿಸಿ ರಾಜ್ಯದಲ್ಲಿ ಬೆಳೆದ ವಿದ್ಯಾರ್ಥಿ ಹಾಗೂ ಜನ ಚಳುವಳಿಗೆ ಸಂದ ಜಯವಾಗಿದೆ. ರಾಜ್ಯದಲ್ಲಿ ರೂಪಿಸಲಾಗುವ ಹೊಸ ಶಿಕ್ಷಣ ನೀತಿಯು ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ, ಕೋಮುವಾದೀಕರಣಕ್ಕೆ ಎಡೆಕೊಡದೆ ಪ್ರಜತಾಂತ್ರಿಕವಾಗಿಯೂ, ಧರ್ಮನಿರಪೇಕ್ಷವಾಗಿಯೂ ಇರುವುದೆಂಬ ಅಪೇಕ್ಷೆ ಇದೆ. ಇವುಗಳ ಅನುಷ್ಠಾನವನ್ನು ಸರ್ಕಾರವು ಏಕಪಕ್ಷಿಯವಾಗಿ ನಡೆಸದೆ ರಾಜ್ಯದ ಶಿಕ್ಷಣ ತಜ್ಞರು, ಪಾಲಕರು ಹಾಗೂ ವಿದ್ಯಾರ್ಥಿ ಸಂಘಟನೆಗಳನ್ನು ಒಳಗೊಂಡ ಪ್ರಜಾತಾಂತ್ರಿಕ ಪ್ರಕ್ರಿಯೆಯ ಮೂಲಕ ನಡೆಸಬೇಕೆಂಬ ಅಪೇಕ್ಷೆಯನ್ನು ನಾವು ವ್ಯಕ್ತಪಡಿಸುತ್ತೇವೆ.

ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದ್ದ ಲ್ಯಾಪ್ ಟಾಪ್, ಸೈಕಲ್ ವಿತರಣೆಯಂತಹ ಕಲ್ಯಾಣ ಯೋಜನೆಗಳಿಗೆ ಅನುದಾನ ಘೋಷಣೆ ಆಗಿಲ್ಲ ಮತ್ತು ಹಿಂದಿನ ಸರ್ಕಾರದ ಬಜೆಟ್ಟಿಗಿಂತ ಈ ಬಜೆಟ್ಟಿನಲ್ಲಿ ಶಿಕ್ಷಣಕ್ಕೆ ಶೇಕಡ ಒಂದರಷ್ಟು ಅನುದಾನ ಕಡಿತಗೊಳಿಸಿರುವುದರ ಬಗ್ಗೆ ಮುಂದಿನ ದಿನಗಳಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಆಶಿಸುತ್ತೇವೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕೆಂಬುದು ವಿದ್ಯಾರ್ಥಿ ಸಮುದಾಯದ ಬಹುದಿನಗಳ ಅಪೇಕ್ಷಿಯಾಗಿತ್ತು. ಹಿಂದುಳಿದ ಮತ್ತು ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ವಿದ್ಯಾರ್ಥಿಗಳ ಸೌಲಭ್ಯಗಳಿಗೂ ಅನುದಾನದ ಕೊರತೆಯಿದೆ. ವಿದ್ಯಾರ್ಥಿಗಳ ಅವಶ್ಯಕತೆಗಳನ್ನು ಪೂರೈಸಲು ಬಜೆಟ್ಟಿನ ಹೊರತಾಗಿಯೂ ಸರ್ಕಾರವು ಅನುದಾನ ನೀಡುವದೆಂಬ ನಮ್ಮ ಆಶಯವನ್ನು ಈ ಮೂಲಕ ವ್ಯಕ್ತಪಡಿಸುತ್ತಿದ್ದೇವೆ.