ಸ್ವಸಹಾಯ ಸಂಘದ ಸದಸ್ಯರಿಂದಲೇ ಸ್ಟ್ಯಾಂಡ್ ಪೋಸ್ಟ್ ಖರೀದಿಸಲು ಸೂಚನೆ


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಆ.16: ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳಿವೆ. ಆದರೆ, ಅದರ ಸದ್ಬಳಕೆಯಾದಗಲೇ ಸರ್ಕಾರಕ್ಕೂ ಒಳ್ಳೆಯ ಹೆಸರು ಹಾಗೂ ಮತ್ತಷ್ಟು ಯೋಜನೆಗಳ ಜಾರಿಗೂ ಉತ್ಸಾಹ ಎಂದು ಮಾನ್ಯ ಸಚಿವರಾದ ಶ್ರೀ ಬಿ.ಜಡ್. ಜಮೀರ್ ಅಹ್ಮದ್ ಖಾನ್ ಹೇಳಿದರು.
ತಾಲೂಕಿನ ಕೂಲಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಕ್ಕಹಳ್ಳಿ ಹಾಗೂ ನೀಲಗುಂದ ಗ್ರಾಪಂ ವ್ಯಾಪ್ತಿಯ ಅನಂತನಹಳ್ಳಿ, ಮಾಚಿಹಳ್ಳಿಯಲ್ಲಿ ನರೇಗಾದಡಿ ಅಭಿವೃದ್ಧಿಪಡಿಸುತ್ತಿರುವ ಕಾಮಗಾರಿಗಳನ್ನು ಸೋಮವಾರ ವೀಕ್ಷಣೆ ಬಳಿಕ ಮಾತನಾಡಿದರು.
ಕೂಲಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಕ್ಕಹಳ್ಳಿಯಲ್ಲಿ ನರೇಗಾ ಹಾಗೂ ರೇಷ್ಮೆ ಇಲಾಖೆ ಮೂಲಕ ಮಹಿಳಾ ಸ್ವಸಹಾಯ ಸಂಘದಿಂದ ಅಭಿವೃದ್ಧಿ ಪಡಿಸಿರುವ ರೇಷ್ಮೆ ನರ್ಸರಿ ಹಾಗೂ ಜೆಜೆಎಂನ ಸ್ಟ್ಯಾಂಡ್ ಪೋಸ್ಟ್‍ಗಳನ್ನು ವೀಕ್ಷಿಸಿದ ಸಚಿವರು, ಮಹಿಳಾ ಸ್ವಸಹಾಯ ಸಂಘಗಳಿಗೆ ಕೆಟಿಪಿಪಿ ನಿಯಮದ 4ಜಿ ಪ್ರಕಾರ ಟೆಂಡರ್‍ನ ವಿನಾಯಿತಿ ಇರುವುದರಿಂದ ಮಹಿಳೆಯರೇ ತಯಾರಿಸಿರುವ ಜಲ ಜೀವನ್ ಮಿಷನ್‍ನ ಸ್ಟ್ಯಾಂಡ್ ಪೋಸ್ಟ್‍ಗಳನ್ನು ಖರೀದಿ ಮಾಡಲು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಇದರಿಂದ ಮಹಿಳೆಯರೂ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಮಹಿಳೆಯರೇ ಸ್ಟ್ಯಾಂಡ್ ಪೋಸ್ಟ್‍ಗಳನ್ನು ನಿರ್ಮಿಸಿರುವುದರ ಕುರಿತು ಮಾಹಿತಿ ಪಡೆದ ಸಚಿವರು, ಆಶ್ಚರ್ಯ ಹಾಗೂ ಸಂತಸ ವ್ಯಕ್ತಪಡಿಸಿ ಸರ್ಕಾರ ಇಂತಹ ಕೆಲಸಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತದೆ. ಇದನ್ನು ಮುಂದುವರಿಸಿಕೊಂಡು ಹೋಗಿ, ಏನೇ ಸಹಕಾರ, ನೆರವು ಬೇಕಾದರೆ ತಿಳಿಸಿ ಎಂದು ಸ್ವಸಹಾಯ ಸಂಘದ ಸದಸ್ಯರಿಗೆ ತಿಳಿಸಿದರು.
ಚಿಕ್ಕಹಳ್ಳಿಯಲ್ಲಿ ಅಭಿವೃದ್ಧಿಪಡುಸುತ್ತಿರುವ ರೇಷ್ಮೆ ನರ್ಸರಿಯಲ್ಲಿ 2 ಲಕ್ಷ ಸಸಿಗಳನ್ನು ಬೆಳೆಸಲು ಉದ್ದೇಶಿಸಿದ್ದು, ಈಗಾಗಲೇ 90 ಸಾವಿರ ಸಸಿ ನಾಟಿ ಮಾಡಲಾಗಿದೆ. ಸ್ಥಳೀಯ ರೈತರಿಗೆ ಕಡಿಮೆ ದರದಲ್ಲಿ ರೇಷ್ಮೆ ಸಸಿ ಸರಬರಾಜು ಮಾಡಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ಮಾನ್ಯ ಸಚಿವರಾದ ಜಮೀರ್ ಅಹ್ಮದ್ ಖಾನ್ ಹಾಗೂ ಮಾನ್ಯ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ರೇಷ್ಮೆ ಕಡ್ಡಿಗಳನ್ನು ನಾಟಿ ಮಾಡಿದ್ದು ವಿಶೇಷವಾಗಿತ್ತು.
ಬಳಿಕ ನೀಲಗುಂದ ಗ್ರಾಪಂ ವ್ಯಾಪ್ತಿಯ ಅನಂತನಹಳ್ಳಿ ಬಳಿ ಇರುವ ಆದರ್ಶ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಹೈಟೆಕ್ ಭೋಜನಾಲಯ ಹಾಗೂ ಅಡುಗೆ ಕೋಣೆ ಕಾಮಗಾರಿಯನ್ನು ವೀಕ್ಷಿಸಿದ ಸಚಿವರು, ಈ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಲಾಗಿದೆ. ಇದೇ ರೀತಿ ಎಲ್ಲ ಸರ್ಕಾರಿ ಶಾಲೆಗಳಲ್ಲಿ ನಿರ್ಮಿಸಬೇಕು ಎಂದು ತಿಳಿಸಿದಾಗ, ಈಗಾಗಲೇ ಜಿಲ್ಲಾದ್ಯಂತ ಸರ್ಕಾರಿ ಶಾಲೆಗಳಿಗೆ ಬೇಕಾದ ಕಾಂಪೌಂಡ್, ಭೋಜನಾಲಯ ಹಾಗೂ ಅಡುಗೆ ಕೋಣೆ, ಹೈಟೆಕ್ ಶೌಚಾಲಯ, ಪೌಷ್ಟಿಕ ಕೈತೋಟ ಸೇರಿ ವಿವಿಧ ಕಾಮಗಾರಿಗಳನ್ನು ನರೇಗಾದಡಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಚಿವರಿಗೆ ಮಾನ್ಯ ಸಿಇಒ ಬಿ.ಸದಾಶಿವ ಪ್ರಭು ಅವರು ಮಾಹಿತಿ ನೀಡಿದರು. ಒಂದು ಶಾಲೆಯಲ್ಲಿ 100ಕ್ಕಿಂತ ಹೆಚ್ಚಿನ ಮಕ್ಕಳಿದ್ದರೆ ಮತ್ತೊಂದು ಶೌಚಾಲಯ ನಿರ್ಮಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಇದೇ ಶಾಲೆಯಲ್ಲಿ ನೂತನ ಕಂಪ್ಯೂಟರ್ ಲ್ಯಾಬ್‍ಅನ್ನು ಉದ್ಘಾಟನೆ ಮಾಡಲಾಯಿತು.
ನಂತರ ನೀಲಗುಂದ ಗ್ರಾಪಂ ವ್ಯಾಪ್ತಿಯ ಮಾಚಿಹಳ್ಳಿ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯಲ್ಲಿ ಇಕೋ ಪಾರ್ಕ್‍ಅನ್ನು ವೀಕ್ಷಿಸಿದ ಸಚಿವರು ಹಾಗೂ ಶಾಸಕರು ಗಿಡಗಳನ್ನು ನೆಟ್ಟು ನೀರೆರೆದರು. ಬಳಿಕ ತ್ವರಿತ ಹಾಗೂ ಸುಂದರವಾಗಿ ಕಾಮಗಾರಿ ಮುಗಿಸಲು ಅಧಿಕಾರಿಗಳಿಗೆ ತಿಳಿಸಿದರು. ಇದೇ ವೇಳೆ ಹಾಸ್ಟೆಲ್‍ಗೆ ಭೇಟಿ ನೀಡಿದ ಸಚಿವರು ಮೂಲಸೌಲಭ್ಯ ಪರಿಶೀಲಿಸಿದರು. ತಾಲೂಕಿನಲ್ಲಿ ಮತ್ತಷ್ಟು ಹಾಸ್ಟೆಲ್ ಸಹಿತ ಶಾಲೆಗಳು ಹಾಗೂ ಇದೇ ಶಾಲೆಯಲ್ಲಿ ಕಾಲೇಜು ಆರಂಭಿಸಲು ಮಕ್ಕಳ ಮನವಿಗೆ ಪ್ರತಿಕ್ರಿಯಿಸಿದ ಸಚಿವರು, ಅಧಿಕಾರಿಗಳ ಬಳಿ ಚರ್ಚಿಸಿ ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ದಿವಾಕರ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಸದಾಶಿವಪ್ರಭು, ಜಿಪಂನ ಯೋಜನಾ ನಿರ್ದೇಶಕ ಅಶೋಕ್ ತೋಟದ್, ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ಪ್ರಕಾಶ್, ರೇಷ್ಮ್ಮೆ ಇಲಾಖೆ ಉಪ ನಿರ್ದೇಶಕ ಸುದೀರ್, ನರೇಗಾ ತಾಲೂಕು ಸಹಾಯಕ ನಿರ್ದೇಶಕ ಯು.ಎಚ್.ಸೋಮಶೇಖರ್, ರೇಷ್ಮೆ ಇಲಾಖೆಯ ತಾಲೂಕುಮಟ್ಟದ ಅಧಿಕಾರಿಗಳು ಹಾಗೂ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ ಹಾಗೂ ನರೇಗಾ ಹಾಗೂ ಎನ್‍ಆರ್‍ಎಲ್ ಸಿಬ್ಬಂದಿ ಮತ್ತು ಸಂಘದ ಸಿಬ್ಬಂದಿ ಇದ್ದರು.