
ಚಾಮರಾಜನಗರ, ಮೇ.21:- ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕಿದ್ದು, ಸಾರ್ವಜನಿಕರಿಗೆ ಈ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಿ. ಎಸ್. ರಮೇಶ್ ಅವರು ತಿಳಿಸಿದರು.
ಚಾಮರಾಜನಗರ ನಗರಸಭಾ ಕಚೇರಿ ಆವರಣದಲ್ಲಿ ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯಡಿ ನನ್ನಜೀವನ ನನ್ನ ಸ್ವಚ್ಛ ನಗರ ಯೋಜನೆ ಕಾರ್ಯಕ್ರಮದ ಅಂಗವಾಗಿ ತ್ಯಾಜ್ಯ ವಸ್ತುಗಳ ಸ್ವೀಕಾರ ಹಾಗೂ ಪ್ರೋತ್ಸಾಹ ವಸ್ತುಗಳ ವಿತರಣಾ ಕೇಂದ್ರಕ್ಕೆ ಚಾಲನೆ ನೀಡಿಅವರು ಮಾತನಾಡಿದರು.
ನಮ್ಮ ಸುತ್ತಮುತ್ತಲ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ಮನೆಯ ಒಳಗೆ ಹಾಗೂ ಸುತ್ತಮುತ್ತ ಸ್ವಚ್ಛತೆಯಿಂದ ಇರುವಂತೆ ನೋಡಿಕೊಳ್ಳಬೇಕು. ಸಾರ್ವಜನಿಕರು ನೈರ್ಮಲ್ಯದ ಕಡೆ ಹೆಚ್ಚು ಒಲವು ತೋರಬೇಕು. ಸ್ವಚ್ಛತೆಗೆ ಸಂಬಂಧಿಸಿದ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸ್ಪಂದಿಸಿ ಪ್ರೋತ್ಸಾಹಿಸಿ ಯಶಸ್ವಿಗೊಳಿಸಬೇಕು ಎಂದರು.
ನಗರದಲ್ಲಿ ಪುನರ್ ಬಳಕೆಯ ತ್ಯಾಜ್ಯ ವಸ್ತುಗಳನ್ನ ಸ್ವೀಕರಿಸಿ ಅದರ ಬದಲು ಪ್ರೋತ್ಸಾಹದಾಯಕವಾಗಿ ವಿವಿಧ ವಸ್ತುಗಳನ್ನು ನೀಡುವಐದುಆರ್.ಆರ್.ಆರ್ ಕೇಂದ್ರಗಳನ್ನು ತೆರೆಯಲಾಗಿದೆ. ಮನೆಯಲ್ಲಿಉಪಯೋಗಕ್ಕೆ ಬಾರದ ಹಳೆಯ ವಸ್ತುಗಳು, ಪ್ಲಾಸ್ಟಿಕ್ ಚೀಲ, ಎಲೆಕ್ಟ್ರಾನಿಕ್ ವಸ್ತುಗಳು, ಮರು ಬಳಕೆ ಮಾಡಬಹುದಾದ ವಸ್ತುಗಳನ್ನು ಆರ್.ಆರ್.ಆರ್ ಕೇಂದ್ರಗಳಲ್ಲಿ ನೀಡಿ ಪ್ರತಿಯಾಗಿ ಪರಿಸರ ಸ್ನೀಹಿ ಲೇಖನ ಸಾಮಾಗ್ರಿಗಳು, ಪುಸ್ತಕಗಳು ಮತ್ತು ಪರಿಸರ ಸಂಬಂಧಿತಇತರೆ ವಸ್ತುಗಳನ್ನು ಪಡೆಯಬಹುದು ಎಂದು ಜಿಲ್ಲಾಧಿಕಾರಿ ಡಿ.ಎಸ್ರಮೇಶ್ ಅವರು ತಿಳಿಸಿದರು.
ಬಳಿಕ ನನ್ನ ಲೈಫ್, ನನ್ನ ಸ್ವಚ್ಛ ನಗರ ಸಹಿ ಸಂಗ್ರಹಣೆ ಅಭಿಯಾನದಲ್ಲಿ ಸಹಿ ಮಾಡುವ ಮೂಲಕ ಅಭಿಯಾನ ಉದ್ಘಾಟಿಸಿದರು. ಸೆಲ್ಪಿ ಪ್ರೇಮ್ನಲ್ಲಿ ಪೋಟೊ ತೆಗೆಸಿಕೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿದರು.
ನಗರಸಭಾ ಸದಸ್ಯರಾದ ಮಹೇಶ್, ಅಬ್ರಾರ್ ಅಹಮದ್, ಖಲೀಲ್, ಮಮತಾ, ಗಾಯತ್ರಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಎಂ.ವಿ. ಸುಧಾ, ನಗರಸಭೆ ಪೌರಾಯುಕ್ತ ಎಸ್.ವಿ. ರಾಮ್ದಾಸ್, ಪರಿಸರ ಅಧಿಕಾರಿಗಿರಿ ಜಮ್ಮ, ಕಂದಾಯಅಧಿಕಾರಿ ಶರವಣ, ಹಿರಿಯಆರೋಗ್ಯ ನಿರೀಕ್ಷಕಿ ಪುಷ್ಪಾ, ಕಿರಿಯ ಆರೋಗ್ಯ ನಿರೀಕ್ಷಕ ಸುಷ್ಮಾ, ಮಂಜು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.