
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.14: ನಾನು ಸುಮಾರು 18 ಸಾವಿರ ಮತಗಳನ್ನು ಪಡೆದು ಸೋತಿದ್ದರು ನನ್ನ ಹೋರಾಟ ಕ್ಷೇತ್ರದ ಜನರ ಅಭಿವೃದ್ಧಿಗಾಗಿ ನಿರಂತರವಾಗಿ ಮುಂದುವರಿಯುತ್ತದೆ ಎಂದು ಕೆ ಆರ್ ಪಿ ಪಿ ಪರಾಜಿತ ಅಭ್ಯರ್ಥಿ ಟಿ.ದರಪ್ಪ ನಾಯಕ್ ತಿಳಿಸಿದರು.
ನಗರದ ತಮ್ಮ ಸ್ವಗೃಹದಲ್ಲಿ ಶನಿವಾರ ಸಂಜೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಎರಡು ವರ್ಷಗಳಿಂದ ನಾನು ಕ್ಷೇತ್ರದ ಜನರೊಂದಿಗೆ ಒಡನಾಟ ಇಟ್ಟುಕೊಂಡಿದ್ದು ಜನರ ಅನೇಕ ಸಮಸ್ಯೆಗಳಿಗೆ ಸ್ಪಂದಿಸುತ್ತ ಬಂದಿದ್ದೇನೆ, ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಬಗ್ಗೆ ಮತ್ತು ನಾನು ಬೇರೊಂದು ಪಕ್ಷಕ್ಕೆ ಬೆಂಬಲ ನೀಡಿದ್ದೇನೆ ಎಂದು ತಾಲೂಕಿನ ಪ್ರಮುಖ ಹಿರಿಯ ರಾಜಕೀಯ ನಾಯಕರೊಬ್ಬರು ಸುಳ್ಳು ಸುದ್ದಿ ಹರಡಿಸಿದ ಹಿನ್ನೆಲೆಯಲ್ಲಿ ನಮ್ಮ ಪಕ್ಷಕ್ಕೆ ಹಿನ್ನಡೆ ಉಂಟಾಗಿದ್ದು, ನಾನು ಈ ಚುನಾವಣೆಯಲ್ಲಿ ಸೋತಿದ್ದರು ಜನರ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರವಾಗಿ ನನ್ನ ಹೋರಾಟ ನಡೆಯುತ್ತದೆ, ಗೆದ್ದ ಶಾಸಕರಿಗಿರುವಷ್ಟು ಜವಾಬ್ದಾರಿ, ಸೋತ ಅಭ್ಯರ್ಥಿಗೂ ಇರುತ್ತದೆ ನಾನು ನನ್ನ ಜವಾಬ್ದಾರಿಯನ್ನು ಶ್ರದ್ಧೆ ನಿಷ್ಠೆಯಿಂದ ಮಾಡುತ್ತೇನೆಂದು ಹೇಳಿದರು.
ಮುಖಂಡರಾದ ವಿನೋದ್ ಗೌಡ, ನಾಗಪ್ಪ, ಹಾಗೂ ಕಾರ್ಯಕರ್ತರು ಇದ್ದರು.