
ನವದೆಹಲಿ, ಮ.೧- ದೇಶದಲ್ಲಿಂದು ಕೊರೊನಾ ಸೋಂಕು ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ದೇಶದಾದ್ಯಂತ ೪,೨೮೨ ಕೊರೊನಾವೈರಸ್ ಸೋಂಕು ಪ್ರಕರಣಗಳು ಪತ್ತೆ ಯಾಗಿದ್ದು, ಇದೇ ಅವಧಿಯಲ್ಲಿ ೬,೦೩೭ ಮಂದಿ ಸೋಂಕಿನಿಂತ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ ೪೭,೨೪೬ಕ್ಕೆ ಇಳಿಕೆಯಾಗಿದೆ ಎಂದು ಅಂಕಿ ಅಂಶ ನೀಡಿದೆ.
ಮುಂಜಾನೆ ೮ ಗಂಟೆಗೆ ಲಭ್ಯವಾದ ಮಾಹಿತಿ ಅನುಸಾರ ಕೇರಳದಲ್ಲಿ ಆರು ಮಂದಿ ಸೇರಿದಂತೆ ಇಂದು ೧೪ ಮಂದಿ ಮೃತಪಟ್ಟಿದ್ದು, ಈವರೆಗೆ ಒಟ್ಟು ೫,೩೧,೫೪೭ ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ.
ಪ್ರತಿದಿನದ ಪಾಸಿಟಿವಿಟಿ ದರ ಶೇ ೪.೯೨ರಷ್ಟಿದ್ದು, ವಾರದ ಪಾಸಿಟಿವಿಟಿ ದರ ಶೇ ೪.೦೦ರಷ್ಟಿದೆ. ದೇಶದಲ್ಲಿ ಈವರೆಗೆ ೪,೪೯,೪೯,೬೭೧ ಮಂದಿ ಸೋಂಕಿತರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಒಟ್ಟು ಸೋಂಕು ಪ್ರಕರಣಗಳ ಪೈಕಿ ಶೇ ೦.೧೧ರಷ್ಟು ಸಕ್ರಿಯ ಪ್ರಕರಣಗಳಿದ್ದರೆ, ರಾಷ್ಟ್ರೀಯ ಕೋವಿಡ್ ಚೇತರಿಕೆ ದರ ಶೇ ೯೮.೭೧ರಷ್ಟಿದೆ. ಇದೇ ವೇಳೆ ದೇಶದಾದ್ಯಂತ ಈವರೆಗೆ ೪,೪೩,೭೦,೮೭೮ ಮಂದಿ ಕೋವಿಡ್ನಿಂದ ಗುಣಮುಖರಾಗಿದ್ದಾರೆ. ದೈನಂದಿನ ಮರಣ ಪ್ರಮಾಣ ಶೇ ೧.೧೮ರಷ್ಟಿದೆ. ಎಂದು ಸಚಿವಾಲಯ ತಿಳಿಸಿದೆ.
ದೇಶದಾದ್ಯಂತ ನಡೆಯುತ್ತಿರುವ ಲಸಿಕಾ ಅಭಿಯಾನದ ಅಡಿಯಲ್ಲಿ ಈವರೆಗೂ ೨೨೦.೬೬ ಕೋಟಿಗೂ ಅಧಿಕ ಕೋವಿಡ್ ವಿರುದ್ಧದ ಲಸಿಕಾ ಡೋಸ್ಗಳನ್ನು ವಿತರಿಸಲಾಗಿದೆ ಎಂದು ಸಚಿವಾಲಯದ ವೆಬ್ ಸೈಟ್ ನಲ್ಲಿ ಮಾಹಿತಿ ಒದಗಿಸಿದೆ.