
ನವದೆಹಲಿ, ಆ.೯-ಕಾಂಗ್ರೆಸ್ ಹಿರಿಯ ನಾಯಕ ಉಮ್ಮನ್ ಚಾಂಡಿ ಅವರ ನಿಧನದಿಂದ ತೆರವಾದ ಕ್ಷೇತ್ರ ಸೇರಿದಂತೆ ೬ ರಾಜ್ಯಗಳ ೭ ವಿಧಾನಸಭಾ ಕ್ಷೇತ್ರಗಳಿಗೆ ಸೆಪ್ಟೆಂಬರ್ ೫ ರಂದು ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ತ್ರಿಪುರಾದಲ್ಲಿ ಎರಡು ಸ್ಥಾನಗಳಿಗೆ ಮತ್ತು ಕೇರಳ, ಜಾರ್ಖಂಡ್, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ತಲಾ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಯಲಿದ್ದು, ಸೆಪ್ಟೆಂಬರ್ ೮ ರಂದು ಫಲಿತಾಂಶ ಬರಲಿದೆ ಎಂದು ಮಾಹಿತಿ ನೀಡಿದೆ.
ಜಾರ್ಖಂಡ್ನ ಡುಮ್ರಿ ವಿಧಾನಸಭಾ ಸ್ಥಾನಕ್ಕೆ ಹಾಲಿ ಶಾಸಕ ಜಗರ್ನಾಥ್ ಮಹ್ತೋ ಅವರ ನಿಧನದ ಹಿನ್ನೆಲೆಯಲ್ಲಿ ಉಪಚುನಾವಣೆ ಅನಿವಾರ್ಯವಾಗಿತ್ತು. ಹಾಲಿ ಶಾಸಕ ಸಂಸುಲ್ ಹಕ್ ಅವರ ನಿಧನ ಮತ್ತು ಪ್ರತಿಮಾ ಭೂಮಿಕ್ ಅವರ ರಾಜೀನಾಮೆಯಿಂದಾಗಿ ತ್ರಿಪುರಾದ ಬೊಕ್ಸಾನಗರ ಮತ್ತು ಧನ್ಪುರ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಹಾಗೇ, ಪಶ್ಚಿಮ ಬಂಗಾಳದ ಧುಪ್ಗುರಿ ವಿಧಾನಸಭಾ ಸ್ಥಾನವು ಹಾಲಿ ವಿಧಾನಸಭಾ ಸದಸ್ಯ ಬಿಷ್ಣು ಪದಾ ರೇ ಅವರ ನಿಧನದ ನಂತರ ತೆರವಾಗಿತ್ತು. ಉತ್ತರ ಪ್ರದೇಶದ ಘೋಸಿ ಸ್ಥಾನವು ಸಮಾಜವಾದಿ ಪಕ್ಷದ ದಾರಾ ಸಿಂಗ್ ಚೌಹಾಣ್ ಬಿಜೆಪಿಗೆ ಸೇರಲು ರಾಜೀನಾಮೆ ನೀಡಿದ ನಂತರ ತೆರವಾಗಿತ್ತು.
ಹಾಲಿ ಶಾಸಕ ಚಂದನ್ ರಾಮ್ದಾಸ್ ನಿಧನದ ನಂತರ ಉತ್ತರಾಖಂಡದ ಬಾಗೇಶ್ವರ್ ಕ್ಷೇತ್ರ ತೆರವಾಗಿತ್ತು. ಚಾಂಡಿ ಕೇರಳದ ಪುತ್ತುಪಲ್ಲಿ ಕ್ಷೇತ್ರದ ಶಾಸಕರಾಗಿದ್ದರು. ಅವರು ೫೦ ವರ್ಷಗಳ ಕಾಲ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.