ವಿಜಯಪುರ: ಜೂ.26:ಸರ್ವಕಲೆಗಳಲ್ಲಿ ಶ್ರೇಷ್ಠವಾದ ಕಲೆ ಸಂಗೀತ ಕಲೆ. ನಮ್ಮ ದೇಶದ ಸಂಸ್ಕøತಿಯನ್ನು ಉಳಿಸುವ ಸಂಗೀತವನ್ನು ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಒಂದು ಸರ್ಕಾರ ಹೋಗುತ್ತದೆ ಇನ್ನೊಂದು ಸರ್ಕಾರ ಬರುತ್ತದೆ ಆದರೆ ಸರಕಾರದಲ್ಲಿರುವ ಸೃಜನಶೀಲ ಶಾಸಕರು ಇವತ್ತು ಸಂಗೀತವನ್ನು ಉಳಿಸುವ, ಪ್ರೋತ್ಸಾಹಿಸುವ ಕೆಲಸ ಮಾಡಬೇಕಾಗಿದೆ. ಸಂಗೀತ ಒಬ್ಬ ಮನುಷ್ಯನ ದುಃಖವನ್ನು, ಗೊಂದಲಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ ಎಂದು ವಿಜಯಪುರದ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ಸಂಗಮೇಶ ಬಬಲೇಶ್ವರ ಸರಕಾರವನ್ನು ಆಗ್ರಹಿಸಿದರು.
ವಿಜಯಪುರದ ಸುರಶ್ರೀ ಸಂಗೀತ ಅಕಾಡೆಮಿ ಹಾಗೂ ಸುರಸಿಂಗಾರ ಕಲಾ ಮತ್ತು ಸಾಂಸ್ಕೃತಿಕ ಸಂಸ್ಥೆಗಳ ಸಹಯೋಗದಲ್ಲಿ ಕಂದಗಲ್ಲ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡ ವಿಜಯಪುರದ ಎರಡನೇ ಶಾಸ್ತ್ರೀಯ ಸಂಗೀತೋತ್ಸವ ಹಾಗೂ ಗುರುವಂದನೆ ಮತ್ತು ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು “ಕರ್ನಾಟಕದ ಏಕೈಕ ಮಹಿಳಾ ವಿಶ್ವವಿದ್ಯಾಲಯವನ್ನು ಹೊಂದಿದ ವಿಜಯಪುರ ವಿಶ್ವವಿದ್ಯಾಲಯದಲ್ಲಿ ಒಂದು ಶಾಶ್ವತವಾದ ಸಂಗೀತದ ವಿಭಾಗ ಆಗಬೇಕು. ಆ ಸಂಗೀತ ವಿಭಾಗಕ್ಕೆ ಡಾ. ಹರೀಶ ಅವರಂತ ವಿದ್ವಾನರು ನೇಮಕಗೊಳ್ಳಬೇಕು. ಆ ಮೂಲಕ ವಿಜಯಪುರ ಜಿಲ್ಲೆಯಾದ್ಯಂತ ಸಂಗೀತದ ಪರಿಸರವನ್ನು ಪಸರಿಸುವಂತ ಕೆಲಸ ಆಗಬೇಕು. ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಸಂಗೀತ ವಿಭಾಗ ಶಾಶ್ವತವಾಗಿ ಅನುದಾನ ಪಡೆದುಕೊಂಡು, ಡಾ. ಹರೀಶ ಅವರಂತಹ ಶಿಕ್ಷಕರನ್ನ ನೇಮಿಸಬೇಕೆಂದು ಕುಲಪತಿಗಳ ಮೂಲಕ ಹಾಗೂ ಉಸ್ತುವಾರಿ ಸಚಿವರ ಮೂಲಕ ಮುಖ್ಯಮಂತ್ರಿಗಳಿಗೆ ಆಗ್ರಹಿಸುತ್ತೇವೆ. ಆ ಮೂಲಕ ಸಂಗೀತಕ್ಕೆ ಒಂದು ಶಾಶ್ವತವಾದ ಕೊಡುಗೆಯನ್ನು ನಾವು ನೀವೆಲ್ಲರೂ ನೀಡೋಣ” ಎಂದು ಸರಕಾರಕ್ಕೆ ಮನವಿಯನ್ನು ಮಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿ ಡಾ. ಸತೀಶ್ ಜಿಗಿಜಿನ್ನಿ ಮಾತನಾಡಿ “ಸಂಗೀತ ಕೇವಲ ಹವ್ಯಾಸಿಯಲ್ಲ, ಅದೊಂದು ವಿಜ್ಞಾನ. ಮನುಷ್ಯ ತನ್ನ ಇತರ ಅವಯವಗಳಿಗೆ ಶಕ್ತಿಯನ್ನು ಬರಲು ಬೇರೆ ಬೇರೆ ವ್ಯಾಯಾಮಗಳನ್ನು ಮಾಡುತ್ತಾನೆ. ಆದರೆ ಶರೀರದ ಎಲ್ಲ ಭಾಗಕ್ಕೂ ಏಕಕಾಲಕ್ಕೆ ವ್ಯಾಯಾಮವಾಗಿ ಶಕ್ತಿಯನ್ನು ತುಂಬುವ ಕೆಲಸ ಸಂಗೀತ ಮಾಡುತ್ತದೆ. ಇವತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಂಗೀತವನ್ನು ಒಂದು ಚಿಕಿತ್ಸೆಯಾಗಿ ಬಳಸಲಾಗುತ್ತದೆ. ಸಂಗೀತದಿಂದ ಎಲ್ಲ ರೋಗಗಳಿಗೂ ಮದ್ದನ್ನು ಕಂಡುಹಿಡಿಯುವ ಕೆಲಸ ನಡೆಯುತ್ತಿದೆ. ಸಂಗೀತ ಒಂದು ದಿವ್ಯ ಔಷಧಿ ಇದ್ದಂತೆ ಎಂದು ಹೇಳಿದರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಸಂಯೋಜಕ ಡಾ. ಜಿ. ಬಿ. ಸೋನಾರ್ ಅವರು ಮಾತನಾಡಿ, ಇಂದು ಸಂಗೀತಕ್ಕೆ ಎಲ್ಲಿಲ್ಲದ ಬೆಲೆ ಇದೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಸಂಗೀತ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದರೆ ಸಂಗೀತಕ್ಕೆ ಮಾರ್ಗದರ್ಶನದ ಅವಶ್ಯಕತೆ ಇದೆ. ಈ ಸಂದರ್ಭದಲ್ಲಿ ಡಾ. ಹರೀಶ್ ಹೆಗಡೆಯವರು ವಿಜಯಪುರ ಜಿಲ್ಲೆಯಲ್ಲಿ ಸುರಶ್ರೀ ಸಂಗೀತ ಅಕಾಡೆಮಿಯನ್ನು ಸ್ಥಾಪಿಸುವುದರ ಮೂಲಕ ನೂರಾರು ವಿದ್ಯಾರ್ಥಿಗಳನ್ನು ಸಂಗೀತ ಕ್ಷೇತ್ರದಲ್ಲಿ ಬೆಳೆಸುವಂತಹ ಒಂದು ಶ್ರೇಷ್ಠ ಕೆಲಸವನ್ನು ಮಾಡುತ್ತಿದ್ದಾರೆ. ಅವರಿಗೆ ನಮ್ಮ ನಿಮ್ಮೆಲ್ಲರ ಸಹಾಯ ಸಹಕಾರ ನೀಡುವುದು ತುಂಬಾ ಅವಶ್ಯಕ ಎಂದರು.
ಇದೇ ಸಂದರ್ಭದಲ್ಲಿ ಡಾ. ಹರೀಶ್ ಹೆಗಡೆಯವರು ಬರೆದ ‘ಸಂಗೀತ ಪಾರಿಭಾಷಿಕ ಶಬ್ದಾವಳಿ’ ಎಂಬ ಸಂಗೀತದ ಪುಸ್ತಕ ಲೋಕಾರ್ಪಣೆಯಾಯಿತು. ಅದರ ಜೊತೆಗೆ ಇನ್ನೊಂದು ಪುಸ್ತಕ ವಿದ್ವಾನ್ ಶಂಬು ಭಟ್ ಮತ್ತು ಡಾ. ಹರೀಶ್ ಹೆÉಗಡಿಯವರು ರಚಿಸಿದ ‘ಗಾನಾರಂಭ’ ಎಂಬ ಇನ್ನೊಂದು ಪುಸ್ತಕ ವೇದಿಕೆ ಮೇಲೆ ಲೋಕಾರ್ಪಣೆಯಾಯಿತು. ಈ ಎರಡು ಪುಸ್ತಕಗಳು ಸಂಗೀತದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೂ ಕೂಡ ಉಪಯೋಗವಾಗಲಿದೆ ಎಂದು ಅಭಿಪ್ರಾಯ ಪಟ್ಟರು.
ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಪಂ. ಶ್ರೀಪಾದ ಹೆಗಡೆ ಮತ್ತು ಶ್ರೀಮತಿ ನಾಗವೇಣಿ ಹೆಗಡೆ ಇವರಿಗೆ ಸಮಾರಂಭದಲ್ಲಿ ಗುರುವಂದನೆಯನ್ನು ಸಲ್ಲಿಸಲಾಯಿತು ಇನ್ನೋರ್ವ ವಿದ್ವಾನ್ ದತ್ತಾತ್ರೆಯ ಗಾಂವ್ಕರ್ ಮತ್ತು ಶ್ರೀಮತಿ ಜಯಂತಿ ಗಾಂವ್ಕರ ಅವರಿಗೂ ಗುರುವಂದನೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಸಂಗೀತ ಪೆÇೀಷಕರಾದ ಶ್ರೀ ಕಲ್ಲನಗೌಡ ರಾಮನಗೌಡ ಬಿರಾದಾರ್ ಮತ್ತು ಶ್ರೀಮತಿ ಗಂಗಾ ಕಲ್ಲನಗೌಡ ಬಿರಾದಾರ್ ಇವರನ್ನು ಸನ್ಮಾನಿಸಲಾಯಿತು.
ಎರಡು ದಿನಗಳವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಸುರಶ್ರೀ ಸಂಗೀತ ಅಕಾಡೆಮಿಯ ಡಾ. ಹರೀಶ್ ಹೆಗಡೆ ಮತ್ತು ಶ್ರೀಮತಿ ಕವಿತಾ ಹೆಗಡೆಯವರ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತಪಡಿಸಿದರು. ವಿಜಯಪುರ ಜಿಲ್ಲೆ ಹಾಗೂ ವಿವಿಧ ಜಿಲ್ಲೆಗಳಿಂದ ನೂರಾರು ಸಂಗೀತದ ವಿದ್ಯಾರ್ಥಿಗಳು ಸಂಗೀತ ಶಿಕ್ಷಕರು ಹಾಗೂ ವಿದ್ವಾಂಸರು ಭಾಗವಹಿಸಿ ಪ್ರಶಂಸಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸುರಶ್ರೀ ಸಂಗೀತ ಅಕಾಡೆಮಿಯ ಅಧ್ಯಕ್ಷ ನರಸಿಂಹ ರಾಯಚೂರು ಮಾತನಾಡಿ, ಮುಂದಿನ ದಿನಮಾನಗಳಲ್ಲಿ ವಿಜಯಪುರದಲ್ಲಿ ಪ್ರತಿ ವರ್ಷ ಇಂತಹ ಬೃಹತ್ ಸಂಗೀತ ಸಮಾವೇಶಗಳನ್ನು ಹಮ್ಮಿಕೊಳ್ಳುವ ಯೋಜನೆ ಇದೆ ಎಂದರು. ಸುರಶ್ರೀ ಸಂಗೀತ ಅಕಾಡೆಮಿಯ ಸಂಸ್ಥಾಪಕ ಡಾ. ಹರೀಶ ಹೆಗಡೆ ಮಾತನಾಡಿ, ಉತ್ತರ ಕರ್ನಾಟಕದ ಪ್ರತಿಯೊಂದು ಮನೆಮನೆಗಳಲ್ಲಿ ಮನಗಳಲ್ಲಿಯೂ ಸಂಗೀತದ ವಾತಾವರಣ ನಿರ್ಮಾಣವಾಗಬೇಕು. ಸಂಗೀತ ದೇವರು ಕೊಟ್ಟ ದೊಡ್ಡ ವರ. ಆ ಸಂಗೀತ ಮನುಷ್ಯನ ಪ್ರತಿಯೊಂದು ನೋವುಗಳನ್ನು ಮರೆಸುವ ಕೆಲಸ ಮಾಡುತ್ತದೆ ಎಂದರು.
ಶ್ರೀಮತಿ ಕವಿತಾ ಹೆಗಡೆ ಪ್ರಾರ್ಥನೆಯನ್ನು ಮಾಡಿದರು. ಸುಭಾಸಚಂದ್ರ ಕನ್ನೂರ ಕಾರ್ಯಕ್ರಮವನ್ನು ನಿರೂಪಿಸಿದರು. ವಿ. ಶಂಬು ಭಟ್ ವಂದಿಸಿದರು. ಸಮಾರಂಭದಲ್ಲಿ ಸುರಸಿಂಗಾರ ಕಲಾ ಮತ್ತು ಸಾಂಸ್ಕೃತಿಕ ಸಂಸ್ಥೆಯ ಮುಖ್ಯಸ್ಥ ಸಂಗಣ್ಣ ಪಾಟೀಲ್, ಶಾಂತಾಬಾಯಿ ಕೌತಾಳ, ಪ್ರಶಾಂತ ಶೆಟ್ಟಿ , ಅಂಬಾದಾಸ ಜೋಶಿ ವೀರೇಶ್ ವಾಲಿ, ರಮೇಶ್ ಚೌಹಾನ್, ಡಾ. ಮಲ್ಲಿಕಾರ್ಜುನ ಮೇತ್ರಿ, ಅಹಿಂದ್ ಮುಖಂಡ ಸೋಮನಾಥ್ ಕಳ್ಳಿಮನಿ. ಶ್ರೀವಿನಯ್ ಕುಲಕರ್ಣಿ, ಕಾರ್ತಿಕ್ ಜಂಗಿನಮಠ ಹಾಗೂ ಎಲ್ಲ ಪಾಲಕರು ಸೇರಿದಂತೆ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.