
ಬೆಂಗಳೂರು, ಮಾ. ೯- ಮಂಡ್ಯದ ಸಂಸದೆ ಸುಮಲತಾ ಅಂಬರೀಷ್ ಯಾವ ಪಕ್ಷ ಸೇರ್ಪಡೆಯಾಗುತ್ತಾರೆ ಎಂಬ ಕುತೂಹಲಕ್ಕೆ ನಾಳೆ ತೆರೆ ಬೀಳಲಿದ್ದು, ಸುಮಲತಾ ಅಂಬರೀಷ್ ಬಿಜೆಪಿ ಸೇರುವ ಸಾಧ್ಯತೆಗಳಿವೆ.
ಮಂಡ್ಯದ ತಮ್ಮ ನಿವಾಸದಲ್ಲಿ ಸುಮಲತಾ ಅಂಬರೀಷ್ ಅವರು ನಾಳೆ ಆಪ್ತರ ಸಭೆ ಕರೆದಿದ್ದು, ಅವರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದು, ನಾಳೆ ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಪಕ್ಷ ಸೇರ್ಪಡೆ ತೀರ್ಮಾನವನ್ನು ಪ್ರಕಟಿಸುವರು ಎಂದು ಅವರ ಆಪ್ತ ಮೂಲಗಳು ಹೇಳಿವೆ.
ಪ್ರಧಾನಿ ಮೋದಿ ಅವರು ಇದೇ ತಿಂಗಳ ೧೨ ಭಾನುವಾರ ಮಂಡ್ಯಗೆ ಭೇಟಿ ನೀಡುತ್ತಿದ್ದು, ಈ ಸಂದರ್ಭದಲ್ಲೇ ಸುಮಲತಾ ಅಂಬರೀಷ್ರವರು ಮೋದಿ ಸಮ್ಮುಖದಲ್ಲೇ ಬಿಜೆಪಿ ಸೇರುವರು ಎಂದು ಹೇಳಲಾಗಿದೆ.
ಸಂಸದೆ ಸುಮಲತಾ ಅಂಬರೀಷ್ರವರಿಗೆ ಪಕ್ಷ ಸೇರುವಂತೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಆಹ್ವಾನ ನೀಡಿದ್ದವು. ಆದರೆ, ಸುಮಲತಾ ಅಂಬರೀಷ್ರವರು ತಮ್ಮ ಅಪ್ತರೊಂದಿಗೆ ಈಗಾಗಲೇ ಹಲವು ಸುತ್ತಿನ ಸಭೆ ನಡೆಸಿದ್ದು, ಬಿಜೆಪಿ ಸೇರುವ ಸಾಧ್ಯತೆ ಇದೆ. ಕೆಲ ದಿನಗಳ ಹಿಂದೆ ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣಾರವನ್ನು ಭೇಟಿ ಮಾಡಿ ಚರ್ಚಿಸಿದ್ದರು.
ಸುಮಲತಾ ಬಿಜೆಪಿ ಸೇರ್ಪಡೆ ಪುಟ್ಟರಾಜು
ಸಂಸದೆ ಸುಮಲತಾ ಅಂಬರೀಷ್, ಬಿಜೆಪಿ ಸೇರುತ್ತಾರೆ ಎಂದು ಜೆಡಿಎಸ್ ಶಾಸಕ ಪುಟ್ಟರಾಜು ಬಾಂಬ್ ಸಿಡಿಸಿದ್ದಾರೆ. ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಸಮ್ಮುಖದಲ್ಲೇ ಸುಮಲತಾ ಅಂಬರೀಷ್ ಬಿಜೆಪಿ ಸೇರ್ಪಡೆಗೆ ಪ್ಲಾನ್ ಮಾಡಿದ್ದರು. ಪ್ರಧಾನಿಯವರ ಕಾರ್ಯಕ್ರಮ, ಸರ್ಕಾರಿ ಕಾರ್ಯಕ್ರಮ ಅಗಿರುವುದರಿಂದ ನಾಳೆಯೇ ಸುಮಲತಾ ಅವರು ಬಿಜೆಪಿ ಸೇರುತ್ತಾರೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.