ಸುಧಾಕರ್ ಲಾಲ್ ಗೆಲ್ಲಿಸಿ ನನ್ನ ಕಣ್ಣೀರು ಒರೆಸಿ: ದೇವೇಗೌಡ

ಕೊರಟಗೆರೆ, ಏ. ೨೫- ಲೋಕಸಭಾ ಚುನಾವಣೆಗೆ ನಾನು ನಿಲ್ಲೋದಿಲ್ಲ ಅಂತಾ ಹೇಳಿದೆ. ಆದರೆ ಕಾಂಗ್ರೆಸ್ ಪಕ್ಷದವರು ನನ್ನನ್ನು ತುಮಕೂರು ಜಿಲ್ಲೆಗೆ ಕರೆ ತಂದು ಸೋಲಿಸಿ ಅವಮಾನ ಮಾಡಿದರು. ನನ್ನನ್ನು ಸೋಲಿಸಿ ಅವಮಾನ ಮಾಡಿದ ನೋವು ಇನ್ನೂ ಕಾಡುತ್ತಿದೆ. ನಮ್ಮೆಲ್ಲರ ಆತ್ಮೀಯ ಸುಧಾಕರಲಾಲ್ ರವರನ್ನು ಗೆಲ್ಲಿಸಿ ನನ್ನ ಕಣ್ಣೀರು ಒರೆಸಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕಾರ್ಯಕರ್ತರಿಗೆ ಕರೆ ನೀಡಿದರು.
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕೇಂದ್ರದ ಗ್ರಾಮದಲ್ಲಿ ಜೆಡಿಎಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾನು ೧೯೯೪ ರಲ್ಲಿ ಸಿಎಂ ಆಗಿದ್ದಾಗ ೧೧ ಕ್ಷೇತ್ರದಲ್ಲಿ ೯ ಕ್ಷೇತ್ರ ಗೆಲ್ಲಿಸಿದ ತುಮಕೂರು ಜಿಲ್ಲೆಯ ಪುಣ್ಯಾತ್ಮರು ನೀವು. ಕಾಂಗ್ರೆಸ್ ನಾಯಕರು ನನಗೆ ಅವಮಾನ ಮಾಡಿದ ನೋವು ಇನ್ನೂ ನನ್ನನ್ನು ಕಾಡುತ್ತಿದೆ. ಸುಧಾಕರಲಾಲ್ ಬಡ ಕುಟಂಬದ ಒಬ್ಬ ಸಾಮಾನ್ಯ ಜೆಡಿಎಸ್ ಕಾರ್ಯಕರ್ತ. ೨೫ ವರ್ಷದಿಂದ ಕೊರಟಗೆರೆ ಕ್ಷೇತ್ರದಲ್ಲಿ ಬಡಜನರ ಸೇವೆ ಮಾಡುತ್ತಿದ್ದಾನೆ. ನೀವು ಸಾಮಾನ್ಯ ಕಾರ್ಯಕರ್ತನನ್ನು ಬೆಳೆಸಿದ್ದೀರಾ. ೨೦೨೩ಕ್ಕೆ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿ. ಕುಮಾರಸ್ವಾಮಿ ಸರ್ಕಾರ ಸುಧಾಕರಲಾಲ್‌ಗೆ ವಿಶೇಷ ಸ್ಥಾನಮಾನ ನೀಡುತ್ತದೆ ಎಂದು ಭರವಸೆ ನೀಡಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿ, ಜೆಡಿಎಸ್ ಪಕ್ಷ ಮುಸ್ಲಿಂ ಸಮಾಜಕ್ಕೆ ಸಾಕಷ್ಟು ಅನುಕೂಲ ಕಲ್ಪಿಸಿದೆ. ಯಾವುದೇ ಪಕ್ಷ ರಾಜ್ಯಾಧ್ಯಕ್ಷನ ಪಟ್ಟ ನೀಡಿಲ್ಲ. ಆದರೆ ಜೆಡಿಎಸ್ ನನಗೆ ನೀಡಿದೆ. ಮುಸ್ಲಿಂ ಸಮಾಜ ಜೆಡಿಎಸ್ ಪಕ್ಷದ ಪರವಾಗಿ ಇರಬೇಕಿದೆ. ದೇವೇಗೌಡರು ಮತ್ತು ಕುಮಾರಸ್ವಾಮಿಗೆ ರೈತರ ಚಿಂತೆ. ಆದರೆ ಪರಮೇಶ್ವರ್‌ಗೆ ಜೀರೋ ಟ್ರಾಫಿಕ್ ಚಿಂತೆ. ಮುಸ್ಲಿಂ ಮೀಸಲಾತಿ ರದ್ದತಿಯ ಬಗ್ಗೆ ಪರಮೇಶ್ವರ್ ಮಾತನಾಡಿದ್ರಾ ನೀವೇ ಹೇಳಿ ಎಂದು ಪ್ರಶ್ನಿಸಿ, ಚುನಾವಣೆ ಭಾಷಣಾ ಮತ್ತು ೧ ಸಾವಿರ ಹಣಕ್ಕೆ ನಾವು ಯಾಮಾರಬಾರದು ಎಂದು ಮನವಿ ಮಾಡಿದರು.
ಜೆಡಿಎಸ್ ಹಿಂದುಳಿದ ವರ್ಗಗಳ ಕಾರ್ಯಾಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ, ನಿಮ್ಮ ಮನೆ ಬಾಗಿಲಿಗೆ ಮತಯಾಚನೆಗೆ ಬರುವ ಜನಸೇವಕ ಮತ್ತೆ ನಿಮ್ಮ ಬಳಿಯೇ ಇರ್ತಾರೆ. ಚುನಾವಣೆ ವೇಳೆಯಲ್ಲೇ ಕೊರಟಗೆರೆ-ತುಮಕೂರು ನಗರಕ್ಕೆ ಮುಖಂಡರನ್ನು ಕರೆಸಿಕೊಂಡು ರಾಜಕೀಯ ಮಾಡುವ ಕಾಂಗ್ರೆಸ್ ನಾಯಕ ಮುಂದೆ ನಿಮ್ಮ ಕೈಗೆ ಸಿಗ್ತಾರೆಯೇ. ೨೦೨೩ಕ್ಕೆ ಅಭಿವೃದ್ದಿಯ ಚಿಂತನೆಯುಳ್ಳ ಜನನಾಯಕ ಸುಧಾಕರಲಾಲ್ ಗೆಲುವು ಖಚಿತ ಎಂದರು.
ಸಮಾವೇಶದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರೋಶನ್‌ಬೇಗ್, ಎಸ್ಸಿ ಘಟಕದ ಕಾರ್ಯಧ್ಯಕ್ಷ ಶ್ರೀರಾಮ್, ಜಿಲ್ಲಾಧ್ಯಕ್ಷ ಆಂಜಿನಪ್ಪ, ಮಹಿಳಾಧ್ಯಕ್ಷೆ ಕುಸುಮಾ, ಹಿರಿಯ ಮುಖಂಡ ಅಂದಾನಪ್ಪ, ಕೊರಟಗೆರೆ ಕಾರ್ಯಾಧ್ಯಕ್ಷ ನರಸಿಂಹರಾಜು, ಕಾರ್ಯದರ್ಶಿ ಲಕ್ಷ್ಮಣ್, ವಕ್ತಾರ ಲಕ್ಷ್ಮೀಶ್, ಉಪಾಧ್ಯಕ್ಷ ಮಂಜುನಾಥ್, ಮುಖಂಡರಾದ ಸಿದ್ದಮಲ್ಲಪ್ಪ, ಪ್ರಕಾಶ್, ಫಾರೂಕ್, ಲಕ್ಷ್ಮೀನರಸಪ್ಪ, ವೆಂಕಟೇಶ್, ರಮೇಶ್, ಲಕ್ಷ್ಮೀಕಾಂತ್, ಸಂತೋಷಗೌಡ, ಕಿಶೋರ್, ನಯಾಜ್, ರವಿಕುಮಾರ್, ಮರುಡಪ್ಪ, ರೇಣುಕಾ ಮತ್ತಿತರರು ಉಪಸ್ಥಿತರಿದ್ದರು.