
ಕಲಬುರಗಿ:ಮಾ.22: ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಆಶಾವಾದಿ ಮತ್ತು ಪ್ರಯತ್ನವಾಗಿರಬೇಕು. ಬೇವು-ಬೆಲ್ಲ ಸವಿಯುವುದು ಅಂದರೆ ಜೀವನದಲ್ಲಿ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಿ ಮುನ್ನೆಡದರೆ, ವ್ಯಕ್ತಿ ಉನ್ನತವಾದ ಸಾಧನೆ ಮಾಡಲು ಸಾಧ್ಯವಿದೆ ಎಂಬ ಸಮಭಾವದ ಮೇರು ಸಂದೇಶವನ್ನು ಯುಗಾದಿ ಹಬ್ಬವು ಇಡೀ ಜಗತ್ತಿಗೆ ಸಾರುತ್ತದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.
ನಗರದ ಕೈಲಾಸ ನಗರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಜರುಗಿದ ‘ಯುಗಾದಿ ವಿಶೇಷ ಕಾರ್ಯಕ್ರಮ’ದಲ್ಲಿ ಅವರು ಮಾತನಾಡುತ್ತಿದ್ದರು.
ಭಾರತ ಕೃಷಿ ಪ್ರಧಾನ ದೇಶವಾಗಿದೆ. ರೈತರು, ಶ್ರಮಜೀವಿಗಳು ವರ್ಷದ ಕೊನೆಯಲ್ಲಿ ತಮ್ಮ ಚಟುವಟಿಕೆಗಳನ್ನು ಮುಗಿಸಿ, ಆ ವರ್ಷಕ್ಕೆ ವಿದಾಯ ಹೇಳಿ, ಮುಂದಿನ ವರ್ಷವನ್ನು ಸ್ವಾಗಿಸುವ ದಿನ ಇದಾಗಿದೆ. ಭಾರತೀಯರ ನಿಜವಾದ ಹೊಸ ವರ್ಷಾಚರಣೆ ಎಂದರೆ ಯುಗಾದಿಯೇ ಹೊರತು ‘ಜನವರಿ-1’ ಅಲ್ಲ. ಇದು ಕೇವಲ ಹೊಸ ವರ್ಷಾಚರಣೆ ಹಬ್ಬವಾಗದೇ, ಶ್ರೇಷ್ಠ ಸಂಸ್ಕøತಿ, ಉನ್ನತವಾದ ಮೌಲ್ಯಗಳನ್ನು ಹೊಂದಿದೆ. ನಿಸರ್ಗವು ಕೂಡಾ ಈ ದಿನಗಳಲ್ಲಿ ಬದಲಾವಣೆಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ಜಯಶ್ರೀ ಎಚ್.ಪಾಟೀಲ, ವಿಜಯಲಕ್ಷ್ಮೀ ಮೈಲ್ವಾರ್, ಶೋಭಾ, ಬಸವಶ್ರೀ, ಬಸವಭುವನ, ಬೃಂದಾ, ಆರಾಧ್ಯ, ವಿವನ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.