ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.24: ತಾಲೂಕಿನ ನಡವಿ ಗ್ರಾಮದ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ವೈಶಾಖ ಶುದ್ಧ ಅಕ್ಷಯ ತೃತೀಯ ದಿನವಾದ ಭಾನುವಾರ ಸಂಜೆ ಸಡಗರಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.
ಭಾನುವಾರ ಬೆಳಿಗ್ಗೆ 7.30ಕ್ಕೆ ರಾಮಲಿಂಗೇಶ್ವರನಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಕಳಸಾರೋಹಣದ ನಂತರ ‘ಮಡಿತೇರು’ ಎಳೆಯಲಾಯಿತು. ಮಧ್ಯಾಹ್ನ ಎಡೆಯೂರು ಸಿದ್ಧಲಿಂಗೇಶ್ವರ ಪುರಾಣ ಮಹಾಮಂಗಲ ಮಾಡಿ ಮಹಾಗಣಾರಾಧನೆ ಮಾಡಲಾಯಿತು.
ಸಂಜೆಗೆ ಡೊಳ್ಳು, ರಾಂಡೋಲ್, ಸಿಂಧನೂರಿನ ಡ್ರಂ ಸೆಟ್ ಸೇರಿದಂತೆ ಸಕಲ ಮಂಗಲ ವಾದ್ಯಗಳೊಂದಿಗೆ ಚಂದ್ರಯ್ಯಸ್ವಾಮಿ, ಪೂಜಾರಿ ರಾಮಸ್ವಾಮಿ ಅವರು ಭಕ್ತಗಣದೊಂದಿಗೆ ಬಂದು ರಥಕ್ಕೆ ಹೂವಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಭಕ್ತರು ಹೂ, ಬಾಳೆಕಾಯಿ ಹಾಗೂ ಉತ್ತುತ್ತಿ (ಓಣು) ರಥಕ್ಕೆ ಎಸೆದು ಹರಕೆ ತೀರಿಸಿದರು.
ಸಮೀಪದ ಗ್ರಾಮಗಳಾದ ಹೆರಕಲ್ಲ, ನಿಟ್ಟೂರು, ಸಿರಿಗೇರಿ, ಮುದ್ಧಟ ನೂರು, ಉಡೇಗೋಳ, ರುದ್ರಸಾದ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ಭಕ್ತರು ಸಾಕ್ಷಿಯಾದರು.
ರಥೋತ್ಸವ ಪ್ರಯುಕ್ತ ಭಾನುವಾರ ರಾತ್ರಿ ವಾಲ್ಮೀಕಿ ಯುವಕ ಸಂಘದ ವತಿಯಿಂದ ‘ ರೇಣುಕಾ ಜಮದಗ್ನಿ ಕಲ್ಯಾಣ’ ಅರ್ಥಾತ್ ‘ಭಾರ್ವಗರಾಮನ ರಣಾಂಗಣ’ ಎಂಬ ಪೌರಾಣಿಕ ನಾಟಕ ಜನರನ್ನು ಆಕರ್ಷಿಸಿತು.
One attachment • Scanned by Gmail
ReplyForward |