ಸಂಜೆವಾಣಿ ವಾರ್ತೆ
ಸಿರಿಗೇರಿ ಜೂನ್.17. ಗ್ರಾಮದಿಂದ ತೆಕ್ಕಲಕೋಟೆಗೆ ಹೋಗುವ ಒಳ ರಸ್ತೆಯು ಕಳೆದೆರಡು ವರ್ಷಗಳಿಂದ ರಿಪೇರಿಯಲ್ಲೇ ಮುಳುಗಿದ್ದು. ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ. ಈ ರಸ್ತೆಯಲ್ಲಿ ಸಂಚರಿಸುವವರಿಗೆ ಸಿರಿಗೇರಿಯಿಂದ 2ಕಿ.ಮೀ. ತೆಕ್ಕಲಕೋಟೆಯಿಂದ 3ಕಿ.ಮೀ. ಮಾತ್ರ ಡಾಂಬರ್ ರಸ್ತೆ ಇದ್ದು, ಈರಸ್ತೆಯಲ್ಲಿ ಹೋಗುವ ಅಥವಾ ಬರುವ ಹೊಸಬರಿಗೆ ರಸ್ತೆ ಚನ್ನಾಗಿದೆ ಎಂದು ಭಾಸವಾಗುತ್ತದೆ. ಆದರೆ ಒಳ ಹೋದಂತೆ ಮದ್ಯದಲ್ಲಿ ಸುಮಾರು 4 ರಿಂದ 5ಕಿ.ಮೀ. ರಸ್ತೆಯು ಕೇವಲ ಬಿಂಚೆಯ ಹಾಸನ್ನು ಹಾಸಿದ್ದು, ವಾಹನಗಳು ತಿರುಗಾಡಿ ದಿನದಿಂದ ದಿನಕ್ಕೆ ಕಲ್ಲಿನ ರಸ್ತೆಯಾಗಿ ಮಾರ್ಪಟ್ಟು ಅನಿವಾರ್ಯತೆಯಲ್ಲಿ ಈ ರಸ್ತೆಯಲ್ಲಿ ತಿರುಗಾಡುವವರಿಗೆ 5ಕಿ.ಮೀ. ಬಿಂಚೆಯಲ್ಲೇ ಸಂಚರಿಸುವುದು ಅನಿವಾರ್ಯವಾಗಿದೆ. ಬೈಕ್ನಲ್ಲಿ ಹೋಗುವವರಿಗೆ ಆಯತಪ್ಪಿ ಬೀಳುವ ಭಯ, ಆಟೋ, ಕಾರು, ಇತರೆ ಲಘು ವಾಹನಗಳಿಗೆ ಒಂದುಕಡೆಯ ಚಕ್ರ ಬಿಂಚೆಯಲ್ಲಿಯೇ ತಿರುಗುವಂತೆ ಮಾಡಿ ನಿಲ್ಲುವುದು. ಹೊಲಗದ್ದೆಗಳಿಗೆ ಹೋಗುವ ಮೂಕ ಜಾನುವಾರುಗಳಿಗೆ ಕಲ್ಲಿನ ಬಿಂಚೆಯಲ್ಲಿ ಬಂಡಿ ಎಳೆಯುವ ಕಷ್ಟ, ರಸ್ತೆಯ ಮಾದರಿ ಗೊತ್ತಿಲ್ಲದವರು ಬಂದರೆ ಹಿಂದಕ್ಕೆ ಹೋಗಬೇಕೋ ಮುಂದಕ್ಕೆ ಹೋಗಬೇಕೋ ಎನ್ನುವ ಚಿಂತೆಗೆ ಹತ್ತುವಂತೆ ಮಾಡಿದೆ. ರಸ್ತೆ ಪೂರ್ಣಗೊಳ್ಳದಿದ್ದಕ್ಕೆ ಕಾರಣ ಕೇಳಿದರೆ ಬಿಲ್ಲು ಮಂಜೂರು ಆಗುತ್ತಿಲ್ಲವೆಂಬ ಕಾರಣ ನೀಡಲಾಗುತ್ತಿದೆ. ಕುರುಗೋಡು, ಕಂಪ್ಲಿ, ಸಿರುಗುಪ್ಪ ತಾಲೂಕುಗಳಿಗೆ ಸಂಪರ್ಕ ನೀಡುವ ಮತ್ತು ಆಂದ್ರಕ್ಕೂ ಸಾಮಿಪ್ಯವನ್ನು ಕಲ್ಪಿಸುವ ಈ ರಸ್ತೆಯ ಕಡೆಗೆ ಈಗಿನ ನೂತನ ಶಾಸಕರು ಶಾಸ್ವತ ಪರಿಹಾರ ನೀಡುವ ಕೆಲಸ ಮಾಡಿಸಬೇಕಿದೆ. ಕೂಡಲೇ ರಸ್ತೆಯ ದುರಸ್ತಿಯನ್ನು ಮುಗಿಸುವುದು, ತೆಕ್ಕಲಕೋಟೆ ಪಟ್ಟಣದ ಹೊರಗೆ ಬೈಪಾಸ್ ರಸ್ತೆ ವ್ಯವಸ್ಥೆ ಮಾಡಿ ಬಸ್ಸುಗಳ ಸಂಚಾರಕ್ಕೆ ಚಾಲನೆ ನೀಡುವ ಕೆಲಸ ಮಾಡಬೇಕೆಂಬುದು ಈ ತಾಲೂಕುಗಳ ಸಾರ್ವಜನಿಕರ ಒತ್ತಾಸೆಯಾಗಿದೆ.