ಸಿದ್ದು ತವರಿನಲ್ಲೇ ಡಿಕೆಶಿಗೆ ಸಿಎಂ ಸ್ಥಾನಕ್ಕೆ ಆಗ್ರಹ

ಮೈಸೂರು: ಮೇ.16:- ರಾಜ್ಯದ ಮುಖ್ಯಮಂತ್ರಿ ಸ್ಥಾನ ಹಂಚಿಕೆ ಕಗ್ಗಂಟಾದ ಬೆನ್ನಲ್ಲೇ ಇದೀಗ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲೇ ಒಕ್ಕಲಿಗರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಿಗೆ ಸ್ಥಾನಕ್ಕಾಗಿ ಆಗ್ರಹಿಸಿದ್ದಾರೆ.
ನಗರದ ಬಂದಂತಮ್ಮ ಕಾಳಮ್ಮ ದೇವಾಲಯದಲ್ಲಿ ಈ ಸಂಬಂಧ ಆದಿ ಚುಂಚನಗಿರಿ ಶಾಖಾಮಠದ ಶ್ರೀ ಸೋಮನಾಥ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟಿಸಿದ ಒಕ್ಕಲಿಗ ಸಮುದಾಯದ ಮುಖಂಡರು ಕೆಪಿಸಿಸಿ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ.
ಈ ವೇಳೆ ಮಾತನಾಡಿದ ಸ್ವಾಮೀಜಿಗಳು, ಡಿ.ಕೆ.ಶಿವಕುಮಾರ್ ಅವರು ಸಹನೆಯಿಂದ ಪಕ್ಷ 130 ಸ್ಥಾನ ಗಳಿಸುವವರೆಗೂ ಅವರದೇ ಆದರ ರೀತಿಯಲ್ಲಿ ಹೋರಾಟ ನಡೆಸಿದ್ದಾರೆ. ಪಕ್ಷದಲ್ಲಿ ಕಿರಿಯರು ಹಾಗೂ ಹಿರಿಯರು ಇಬ್ಬರನ್ನೂ ಒಮ್ಮತದಿಂದ ಕರೆದೊಯ್ಯುವಲ್ಲಿ ಅವರ ಪಾತ್ರ ವೂ ಹೆಚ್ಚಿದೆ. ಹೀಗಾಗಿ ಪಕ್ಷ ಸಂಘಟನೆಗಾಗಿ ಇಷ್ಟೊಂದು ಶ್ರಮ ವಹಿಸಿರುವ ಅವರಿಗೆ ಸಿಎಂ ಸ್ಥಾನ ನೀಡಬೇಕೆಂಬುದು ಸಮುದಾಯದ ಕೂಗಾಗಿದೆ ಎಂದು ಹೇಳಿದರು. ಒಕ್ಕಲಿಗರ ಸಂಘದ ನಿರ್ದೆಶಕ ಹಾಗೂ ನಗರಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ ಮಾತನಾಡಿ, ಪಕ್ಷಕ್ಕಾಗಿ ಡಿ.ಕೆ.ಶಿವಕುಮಾರ್ ಸರ್ವಸ್ವವನ್ನೂ ತ್ಯಾಗ ಮಾಡಿ ಹೋರಾಟ ಮಾಡಿದ್ದಾರೆ.
ಪಕ್ಷ ಸಂಕಷ್ಟದಲ್ಲಿದ್ದಾಗ ಪಕ್ಷವನ್ನು ಮುನ್ನಡೆಸಿ ಈ ಹಂತಕ್ಕೆ ತಂದಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಪಕ್ಷ ಬಲಿಷ್ಠಗೊಳಿಸುವಲ್ಲಿಯೂ ಅವರದೇ ಪಾಲು ಹೆಚ್ಚಿದೆ. ಇದೆಲ್ಲಾ ಕಾರಣ ಪರಿಗಣಿಸಿ ಪಕ್ಷ ಅವರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಒಕ್ಕಲಿಗ ಹಿತಚಿಂತಕರು ಶಂಕರ್, ಟಿ.ರವಿ ಗೌಡ, ರಾಜು, ಸುರೇಶ್. ಸಿ.ರಮೇಶ್, ಡಿ.ರಮೇಶ್, ಎಂ.ಮೋಹನ್ ಕುಮಾರ್ ಗೌಡ, ಬಂದಂತಮ್ಮ ಕಾಳಮ್ಮ ದೇವಸ್ಥಾನದ ಅಧ್ಯಕ್ಷ ಶ್ರೀನಿವಾಸ್, ಶಂಭು, ರವೀಂದ್ರ, ತಾಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಕೃಷ್ಣೇಗೌಡ, ಶ್ರೀನಿವಾಸ್, ವಕೀಲರಾದ ಕೃಷ್ಣ, ಬಸವರಾಜ್, ದಿನೇಶ್, ಜಗ್ಗೇಶ್ ಇನ್ನಿತರರು ಪದಾಧಿಕಾರಿಗಳು ಹಾಗೂ ಸಭೆಯಲ್ಲಿ ಹಾಜರಿದ್ದರು.