
ನವದೆಹಲಿ, ಆ. ೧೦- ಮುಖ್ಯ ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆಯಿಂದ ಸರ್ವೋಚ್ಛ ನ್ಯಾಯಾಲಯದಿಂದ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಡುವ ಕುರಿತ ಮಸೂದೆಯನ್ನು ರಾಜ್ಯಸಭೆಯಲ್ಲಿಂದು ಮಂಡಿಸಲಾಗಿದೆ.
ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವೆಗಳ ಶರತ್ತುಗಳ ಮತ್ತು ಅಧಿಕಾರಿ ಅವಧಿ) ಮಸೂದೆ ೨೦೨೩ ರನ್ನು ಕಾನೂನು ಸಚಿವ ಅರ್ಜುನ್ ರಾಂ ಮೇಘವಾಲ್ ಮಂಡಿಸಿದರು.
ಚುನಾವಣಾ ಅಧಿಕಾರಿಗಳನ್ನು ಒಳಗೊಂಡಿರುವ ಸಮಿತಿ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿಗಳು ಮುಖ್ಯ ಚುನಾವಣಾ ಆಯುಕ್ತರನ್ನು ನೇಮಿಸಬೇಕು. ಪ್ರಧಾನ ಮಂತ್ರಿ, ಲೋಕಸಭೆಯ ಪ್ರತಿಪಕ್ಷ ನಾಯಕ ಮತ್ತು ಪ್ರಧಾನ ಮಂತ್ರಿಯಿಂದ ನಾಮನಿರ್ದೇಶನಗೊಂಡು ಕೇಂದ್ರ ಸಚಿವ ಸಂಪುಟ ಸಚಿವರು ಇದರ ಸದಸ್ಯರಾಗಿರುತ್ತಾರೆ.
ಪ್ರಧಾನ ಮಂತ್ರಿ ಈ ಸಮಿತಿಯ ಅಧ್ಯಕ್ಷರಾಗಿದ್ದು ಚುನಾವಣಾ ಆಯುಕ್ತರಾಗುವ ಅಧಿಕಾರಿ ಕೇಂದ್ರ ಸರ್ಕಾರದ ಕಾಂiiದರ್ಶಿ ಸಮಾನ ಹುದ್ದೆಯನ್ನು ಹೊಂದಿರಬೇಕು ಎಂಬ ಅಂಶವನ್ನು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಈ ಹಿಂದೆ ಸಂವಿಧಾನದ ೩೨೪ನೇ ವಿಧಿ ಅನುಸಾರ ರಾಷ್ಟ್ರಪತಿಗಳು ಮುಖ್ಯ ಚುನಾವಣಾ ಆಯುಕ್ತ ಹಾಗೂ ಇತರ ಚುನಾವಣಾ ಆಯುಕ್ತರನ್ನು ಪ್ರಧಾನ ಮಂತ್ರಿಯ ಸಲಹೆ ಮೇರೆಗೆ ನೇಮಕ ಮಾಡಲಾಗುತ್ತಿತ್ತು.ಮುಖ್ಯ ಚುನಾವಣಾ ಆಯುಕ್ತ ಹಾಗೂ ಚುನಾವಣಾ ಆಯುಕ್ತರ ನೇಮಕಕ್ಕೆ ಕೊಲಿಜಯಂ ವ್ಯವಸ್ಥೆ ಇರಬೇಕು ಎಂದು ಕೋರಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ , ಅಜಯ್ ರಸ್ತೋಗಿ, ಅನಿರುದ್ಧ ಭೋಸ್, ಹೃಷಿಕೇಶರಾಯ್ ಮತ್ತು ಸಿ.ಟಿ. ರವಿಕುಮಾರ್ ಅವರಿದ್ದ ಸಂವಿಧಾನ ಪೀಠ ವಿಚಾರಣೆ ನಡೆಸಿ, ಮಾರ್ಚ್ ತಿಂಗಳಿನಲ್ಲಿ ತೀರ್ಪು ನೀಡಿತ್ತು.
ಈ ತೀರ್ಪಿನಲ್ಲಿ ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸದಸ್ಯರಾಗಿರುವ ಸಮಿತಿಯ ಸಲಹೆಯಂತೆ ರಾಷ್ಟ್ರಪತಿ ನೇಮಕ ಮಾಡಬೇಕೆಂದು ಹೇಳಿತ್ತು.