
ದೇವದುರ್ಗ,ನ.೦೧- ಸಾಹಿತ್ಯ ಮತ್ತು ಸಂಗೀತ ಒಂದೇ ನಾಣ್ಯದ ಎರಡು ಮುಖಗಳಂತೆ ಕೆಲಸ ಮಾಡಿದ್ದು ಈ ಎರಡೂ ಸಮಾಜದಲ್ಲಿ ಹಾಸುಹೊಕ್ಕಾಗಿವೆ ಎಂದು ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಹೇಳಿದರು.
ಪಟ್ಟಣದ ಅಂಬಾಭವಾನಿ ದೇವಸ್ಥಾನದಲ್ಲಿ ಕಸಾಪ ಜಿಲ್ಲಾ ಹಾಗೂ ತಾಲೂಕು ಘಟಕ ಮತ್ತು ಸಂಗೀತ ಶಿಕ್ಷಕರ ಬಳಗದಿಂದ ಹಮ್ಮಿಕೊಂಡಿದ್ದ ಪಂಡಿತ್ ಪುಟ್ಟರಾಜ ಗವಾಯಿಗಳ ೧೩ನೇ ಪುಣ್ಯ ಸ್ಮರಣೆ ಹಾಗೂ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು. ನಾವು ಒತ್ತಡದ ಬದುಕಿನಿಂದ ಹೊರಬರುವುದಕ್ಕೆ ಮನಸ್ಸಿಗೆ ಹಿತವನ್ನು ನೀಡುವುದಕ್ಕೆ ಸಂಗೀತ ಸಾಹಿತ್ಯ ಪೂರಕವಾಗಿದೆ. ಕನ್ನಡ ನಾಡಿನ ಸಂಗೀತ ಕ್ಷೇತ್ರಕ್ಕೆ ಪಂಡಿತ್ ಪುಟ್ಟರಾಜ ಗವಾಯಿಗಳ ಸೇವೆ ಅಮೋಘವಾಗಿದೆ. ಸಾಕ್ಷರತೆ ಮಾನವನ ಬೆಳಕಿಗೆ ದಾರಿ ದೀಪವಾಗಿದೆ ಎಂದರು.
ಸಾಹಿತಿ ಶಂಕರ್ ಉಬಾಳೆ ಚುಟುಕು ಸಾಹಿತ್ಯದ ಬಗ್ಗೆ ಉಪನ್ಯಾಸ ನೀಡಿ, ಕವನ ಕವಿತೆ ಓದುವ ಅಭಿರುಚಿ ಇಂದಿನ ಜನರಲ್ಲಿ ಕಡಿಮೆಯಾಗಿದೆ. ಆದ್ದರಿಂದ ಚುಟುಕು ಸಾಹಿತ್ಯ ಜನಪ್ರಿಯ ಪಡೆದುಕೊಳ್ಳುತ್ತದೆ. ಚುಟುಕು ಸಾಹಿತ್ಯ ಯುವಜನತೆಯನ್ನು ಸೆಳೆಯುವಂಥ ಶಕ್ತಿ ಹೊಂದಿದೆ. ಸಾಹಿತ್ಯ ಅಧ್ಯಯನ ಮಾಡುವ ದೃಷ್ಟಿಯಿಂದ ಯುವಜನತೆಗೆ ಜಾಗೃತಿ ಮೂಡಿಸಬೇಕಿದೆ. ಕನ್ನಡ ಸಾಹಿತ್ಯ ಕಾರ್ಯಕ್ರಮಗಳಿಗೆ ಪ್ರೋತ್ಸಾಹದ ಅಗತ್ಯವಿದೆ. ಜನರು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದರು.
ಉಪನ್ಯಾಸಕ ಶಿವರಾಯ, ಕಸಾಪ ಮಾಜಿ ತಾಲೂಕು ಅಧ್ಯಕ್ಷ ಬಸವರಾಜ್ ಬ್ಯಾಗವಾಟ್ ಮಾತನಾಡಿದರು. ಚುಟುಕು ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮೈನುದ್ದಿನ್ ಕಾಟಮಳ್ಳಿ, ನರಸಿಂಗ್ ರಾವ್ ಸರ್ಕೀಲ್, ಪಿ.ಸುನಿಲ್ ಕುಮಾರ್, ಡಿ.ಶ್ರೀನಿವಾಸ್, ಸಂಗೀತ ಬಳಗದ ಅಧ್ಯಕ್ಷ ವೆಂಕಟೇಶ್ ದೊರೆ ತೆಗ್ಗಿಹಾಳ, ಹನುಮಯ್ಯ ಪಿಲಿಗುಂಡ, ನಾಗರೆಡ್ಡಿ, ರಮೇಶ್ ಕುಮಾರ್, ಈರಣ್ಣ ಜಾಲಿಬೆಂಚಿ, ಕಲಾವಿದ ಮೌನೇಶ್ ಕುಮಾರ್ ಚಾವಣಿ, ಕಸಾಪ ತಾಲೂಕು ಅಧ್ಯಕ್ಷರಾದ ಎಚ್.ಶಿವರಾಜ್ ಇತರರಿದ್ದರು.