ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ

ಬೆಂಗಳೂರು,ಜೂ.೧-ಬೈಕ್ ಅಪಘಾತದಲ್ಲಿ ರಕ್ತನೂ ಬಾರದೇ ದೇಹದ ಒಳ ಭಾಗದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವಕನೊಬ್ಬ ಮೆದುಳು ನಿಷ್ಕ್ರಿಯ (ಬ್ರೈನ್ ಡೆಡ್) ಆಗಿ ಮೃತಪಟ್ಟಿರುವ ಘಟನೆ ಬಸವೇಶ್ವರ ನಗರದಲ್ಲಿ ನಡೆದಿದೆ.
ಬಸವೇಶ್ವರ ನಗರದ ರೋಹಿತ್ (೨೬) ಮೃತ ಯುವಕನಾಗಿದ್ದು, ಕಳೆದ ಒಂದು ವಾರದಿಂದ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಯುವಕನ ಬ್ರೈನ್ ಡೆಡ್ ಆಗಿದೆ ಎಂದು ಸಂಜೆ ವೈದ್ಯರು ಘೋಷಿಸಿದ್ದಾರೆ.
ಮೃತ ಯುವಕನ ಅಂಗಾಂಗಗಳನ್ನು ದಾನ ಮಾಡಿ ಆತನ ಕುಟುಂಬಸ್ಥರು ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಮೃತ ರೋಹಿತ್‌ನ ೨ ಕಣ್ಣು, ೨ ಕಿಡ್ನಿ, ಲಿವರ್, ಲಂಗ್ಸ್, ಹೃದಯ ಅಂಗಾಂಗಗಳನ್ನು ದಾನ ಮಾಡಲಾಗಿದೆ. ಬೈಕ್ ಅಪಘಾತದಲ್ಲಿ ರಕ್ತನೂ ಬರದೇ ಗಾಯಗೊಂಡಿದ್ದ ರೋಹಿತ್, ೮ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ನಿನ್ನೆ ಸಂಜೆ ಬ್ರೈನ್ ಡೆಡ್ ಎಂದು ವೈದ್ಯರು ಘೋಷಿಸಿದ್ದರು. ಮೃತ ರೋಹಿತ್‌ಗೆ ೮ ತಿಂಗಳ ಪುಟ್ಟ ಕಂದಮ್ಮ ಇದ್ದು, ಕುಟುಂಬಸ್ಥರು ಕಣ್ಣೀರು ಹಾಕ್ತಿದ್ದಾರೆ.
ಕಳೆದ ಮೇ ೨೧ರಂದು ಎರಡು ಬೈಕ್‌ಗಳ ಮಧ್ಯೆ ರಸ್ತೆ ಅಪಘಾತವಾಗಿತ್ತು. ಬಿದ್ದ ರಭಸಕ್ಕೆ ರೋಹಿತ್‌ಗೆ ಯಾವುದೇ ಗಾಯವಾಗದೇ, ರಕ್ತನೂ ಬಂದಿರಲಿಲ್ಲ. ಪ್ರಜ್ಞೆ ತಪ್ಪಿ ಬಿದ್ದ ಕಾರಣ, ವಿಜಯನಗರದ ವಿಜಯನಗರ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಪ್ರಜ್ಞೆಯಲ್ಲಿದ್ದ ರೋಹಿತ್, ನಂತರ ಪ್ರಜ್ಞಾಹೀನಾನಾಗಿದ್ದಾನೆ.
ವೈದ್ಯರ ನಿರ್ಲಕ್ಷ್ಯದಿಂದಾಗಿ ಮತ್ತೊಂದು ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ವೈದ್ಯರ ನಿರ್ಲಕ್ಷ್ಯವೇ ರೋಹಿತ್ ಸಾವಿಗೆ ಕಾರಣ ಎಂದು ಮೃತ ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ.