ನವದೆಹಲಿ,ಮಾ.25-“ನನ್ನ ಹೆಸರು ವೀರ್ ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ ಎಂದಿಗೂ ಕ್ಷಮೆ ಕೇಳುವುದಿಲ್ಲ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೆಟೆದು ನಿಂತಿದ್ದಾರೆ.ಮೋದಿ ಉಪನಾಮದ ಟೀಕೆ ಹಿನ್ನೆಲೆಯಲ್ಲಿ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹ ಮಾಡಿದ ಒಂದು ದಿನದ ನಂತರ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ, ತಾವು ಹೇಳಿದ ಹೇಳಿಕೆಗೆ ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.”ನನ್ನ ಹೆಸರು ಸಾವರ್ಕರ್ ಅಲ್ಲ, ನನ್ನ ಹೆಸರು ಗಾಂಧಿ, ಗಾಂಧಿಗಳು ಯಾರ ಬಳಿಯೂ ಕ್ಷಮೆ ಕೇಳುವುದಿಲ್ಲ” ಎಂದು ಗುಡುಗಿದ್ದಾರೆ.
ಜೈಲಿಗೆ ಹೋಗಲು ಹೆದರಲ್ಲ :
ತಾವು ಜೈಲಿಗೆ ಹೋಗಲು ಹೆದರುವುದಿಲ್ಲ ಮತ್ತು ಸಂಸತ್ತಿನಿಂದ ಅ ಅನರ್ಹಗೊಳಿಸಿರುವುದು ಉದ್ಯಮಿ ಅದಾನಿ ಸಮಸ್ಯೆಯಿಂದ ಜನರನ್ನು ಬೇರೆಡೆಗೆ ಸೆಳೆಯುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ದೂರಿದ್ದಾರೆ.ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಷೇರು ಅಕ್ರಮದ ಆರೋಪ ಹೊತ್ತಿರುವ ಉದ್ಯಮಿ ಗೌತಮ್ ಅದಾನಿಯನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದ್ದಾರೆ.”ಅದಾನಿ ಶೆಲ್ ಸಂಸ್ಥೆಗಳಲ್ಲಿ ರೂ 20,000 ಕೋಟಿ ಹೂಡಿಕೆ ಮಾಡಿದವರು ಯಾರು . ಯಾರ ದುಡ್ಡು ಎಂಬ ಪ್ರಶ್ನೆ ಬಾಕಿ ಉಳಿದಿದೆ. ನಾನು ಪ್ರಶ್ನೆಯನ್ನು ಕೇಳುತ್ತಲೇ ಇರುತ್ತೇನೆ” ಎಂದು ಹೇಳಿದ್ದಾರೆ.
ಸಮಾನತೆ ಕಂಡವನು:
ಹಿಂದುಳಿದ ವರ್ಗದವನ್ನು ಅವಮಾನಿಸಲಾಗಿದೆ ಎಂದು ಕೇಂದ್ರದ ಹಲವು ಸಚಿವರು ಆರೋಪ ಮಾಡಿದ್ದಾರೆ. ಹಿಂದುಳಿದ ವರ್ಗ ಸೇರಿದಂತೆ ಎಲ್ಲ ಸಮುದಾಯಗಳಲ್ಲಿ ಸಮಾನತೆ ಕಂಡವನು ನಾನು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.ಒಬಿಸಿ ಸಮುದಾಯವನ್ನು ಅವಮಾನಿಸುವ ಬಿಜೆಪಿಯ ಆರೋಪಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಯಾವಾಗಲೂ ಸಹೋದರತ್ವದ ಬಗ್ಗೆ ಮಾತನಾಡುತ್ತೇನೆ, ಇದು ಒಬಿಸಿಗಳ ಬಗ್ಗೆ ಅಲ್ಲ” ಎಂದು ಹೇಳಿದ್ದಾರೆ.ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಮುಂದಿನ ದಿನಗಳಲ್ಲಿ ರಾಜಕೀಯ ಹೋರಾಟ ಮತ್ತಷ್ಟು ಹೆಚ್ಚಲಿದೆ ಎಂದಿದ್ದಾರೆ.