ಬಳ್ಳಾರಿ,ಮಾ.31: ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ವೇಳೆ ಸಾರ್ವಜನಿಕ ಆಸ್ತಿಯನ್ನಾಗಲೀ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಸಾರ್ವಜನಿಕವಾಗಿ ಕಾಣುವಂತೆ ಗೋಡೆ ಬರಹ, ಜಾಹೀರಾತು ಪೋಸ್ಟರ್ ಆಳವಡಿಕೆ ಸೇರಿದಂತೆ ಇನ್ನೀತರೆ ಫಲಕಗಳನ್ನು ಹಾಕುವ ಮೂಲಕ ಸಾರ್ವಜನಿಕ ಆಸ್ತಿ-ಪಾಸ್ತಿಗೆ ವಿರೂಪಗೊಳಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪವನ್ಕುಮಾರ್ ಮಾಲಪಾಟಿ ಅವರು ಆದೇಶಿದ್ದಾರೆ.
ಸಾರ್ವಜನಿಕ ಪ್ರದೇಶಗಳ ಮೇಲೆ ಅಧಿಕಾರ ಹೊಂದಿರುವ ಸ್ಥಳೀಯ ಪ್ರಾಧಿಕಾರದಿಂದ ಲಿಖಿತ ಅನುಮತಿಯಿಲ್ಲದೆ ಯಾವುದೇ ತರಹದ ಗೋಡೆ ಬರಹ, ಜಾಹೀರಾತು ಪೋಸ್ಟರ್ ಆಳವಡಿಸುವಂತಿಲ್ಲ ಮತ್ತು ಈ ರೀತಿ ಸಾರ್ವಜನಿಕ ವೀಕ್ಷಣೆಗೆ ತೆರೆದಿರುವ ಯಾವುದೇ ಸ್ಥಳಗಳಲ್ಲಿ ಅಂಟಿಸಬಾರದು ಮತ್ತು ಕೆತ್ತನೆ ಮಾಡುವಂತಿಲ್ಲ. ಇಂತಹ ಕೃತ್ಯಗಳಿಗೆ ಕುಮ್ಮಕ್ಕು ಅಥವಾ ಸಲಹೆ ನೀಡಿದರೆ ಅಂತಹವರನ್ನು ಆರು ತಿಂಗಳು ಕಾರಾಗೃಹ ಶಿಕ್ಷೆ ಸೇರಿದಂತೆ ದಂಡ ವಿಧಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಚುನಾವಣೆ ಪ್ರಚಾರದಿಂದ ಇಂತಹ ವಿರೂಪಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಸ್ಥಳೀಯ ಪ್ರಾಧಿಕಾರದ ಪರವಾನಿಗೆ ಇಲ್ಲದೇ ಯಾವುದೇ ತರಹದ ಜಾಹೀರಾತುಗಳನ್ನು ಸಾರ್ವಜನಿಕ ವೀಕ್ಷಣೆಗೆ ತೆರೆದಿರುವ ಯಾವುದೇ ಸ್ಥಳಗಳಲ್ಲಿ ಪ್ರದರ್ಶಿಸುವಂತಿಲ್ಲ. ಸಾರ್ವಜನಿಕ, ಖಾಸಗಿ ಕಟ್ಟಡಗಳು ಮತ್ತು ಇತರ ತೆರೆದ ಸ್ಥಳಗಳ ಗೋಡೆಗಳ ಮೇಲೆ ಮನಬಂದಂತೆ ಬರೆದು ಭಿತ್ತಿಪತ್ರಗಳನ್ನು ಬರೆದು ವಿರೂಪಗೊಳಿಸುವುದು ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಐಪಿಸಿ ಸೆಕ್ಷನ್ 188 ಅಡಿಯಲ್ಲಿ ಅಪರಾಧ ಎಂದು ಪರಿಗಣಿಸಿ ದಂಡನೆಗೆ ಗುರಿ ಪಡಿಸಲಾಗುತ್ತದೆ.
ಈ ಆದೇಶವು ಇಡೀ ಜಿಲ್ಲೆಗೆ ಅನ್ವಯಿಸಲಿದ್ದು, ಚುನಾವಣಾ ಪ್ರಕ್ರಿಯೆಯು ಪೂರ್ಣಗೊಳ್ಳುವವರೆಗೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.