
ದಾವಣಗೆರೆ.ಮಾ.೨೩; ನಗರದ ಸಾರ್ವಜನಿಕರು ಮಹಾನಗರ ಪಾಲಿಕೆಗೆ ಮನೆ ಕಂದಾಯ, ನೀರಿನ ಕಂದಾಯ, ವಾಣಿಜ್ಯ ಮಳಿಗೆಗಳ ಕಂದಾಯ ಇಂದು ನಾನಾ ರೀತಿಯಲ್ಲಿ ತೆರೆಗೆ ಕಟ್ಟುತ್ತಿದ್ದು, “ತೆರಿಗೆ ಮಾತ್ರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದೆ ಆದರೆ ಸೌಲಭ್ಯಗಳು ಮಾತ್ರ ಪುರಸಭೆಗಿಂತ ಕಡೆಯಾಗಿದೆ” ಎಂಬುದಕ್ಕೆ ಬೀದಿ ದೀಪದ ವ್ಯವಸ್ಥೆ ಮಾಡಲಾಗದಿರುವುದೇ ಸಾಕ್ಷಿಯಾಗಿದೆ ಎಂದು ಸಾಮಾಜಕ ಕಾರ್ಯಕರ್ತ ಕೆ.ಎಲ್.ಹರೀಶ್ ಬಸಾಪುರ ಹೇಳಿದ್ದಾರೆ.ನಗರದ ಅನೇಕ ಕಡೆಗಳಲ್ಲಿ ಬೀದಿ ದೀಪದ ವ್ಯವಸ್ಥೆ ಇಲ್ಲ, ಇದರ ಬಗ್ಗೆ ಸಂಬಂಧಪಟ್ಟವರಿಗೆ ವಿಚಾರಿಸಿದರೆ ಹೊಸ ಬೀದಿ ದೀಪಗಳಿಗಾಗಿ ಅನುಮೋದನೆಗೆ ಕಳಿಸಲಾಗಿದೆ ಎಂಬ ಸಿದ್ಧ ಉತ್ತರ ದೊರೆಯುತ್ತದೆ, ಕಳೆದ ಒಂದು ವರ್ಷದಿಂದ ಇದೆ ಉತ್ತರವನ್ನು ಸಂಬಂಧಪಟ್ಟ ಅಧಿಕಾರಿಗಳು ತಿಳಿಸುತ್ತಿದ್ದು ಅನುಮೋದನೆಗೆ ಹೋದ ಕಡತ ಕಳವಾಗಿದೆಯೇ ಎಂಬ ಅನುಮಾನ ಸಾರ್ವಜನಿಕರದಾಗಿದೆ.ಇನ್ನು ಹಳೆಯ ಬೀದಿ ದೀಪದ ವ್ಯವಸ್ಥೆ ದೇವರಿಗೆ ಪ್ರೀತಿ, ನಗರದ ಈರುಳ್ಳಿ ಮಾರ್ಕೆಟ್ ಮುಖ್ಯರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ಬೀದಿ ದೀಪ ಇದ್ದರೂ ಕಾರ್ಯನಿರ್ವಹಿಸುತ್ತಿಲ್ಲ, ಈಗಿರುವ ಬೀದಿ ದೀಪಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಗೆ ಅನುಮಾನ ಕಾರಣ ಯಾವುದಾದರು ಬೀದಿ ದೀಪ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರು ನೀಡಿದರೆ ಅದನ್ನು ಸರಿ ಮಾಡುವುದರೊಳಗೆ ಪಕ್ಕದ ಬೇರೆ ಬೀದಿ ದೀಪಗಳು ಕೆಟ್ಟು ಹೋಗಿರುತ್ತವೆ.ಬಸಾಪುರ ಗ್ರಾಮದಲ್ಲಿ ಸೋಲಾರ್ ಬೀದಿ ದೀಪಗಳು ಕಳೆದ ಆರು ತಿಂಗಳಿಂದ ಕಾರ್ಯನಿರ್ವಹಿಸುತ್ತಿಲ್ಲ, ಇದರ ಬಗ್ಗೆ ಪಾಲಿಕೆಗೆ ದೂರು ನೀಡಿದರೆ ಮೇನ್ಟೆನೆನ್ಸ್ ಟೆಂಡರ್ ಅವಧಿ ಮುಗಿದಿದ್ದು, ಹೊಸ ಟೆಂಡರ್ ಕರೆದ ನಂತರ ರಿಪೇರಿ ಮಾಡಲಾಗುವುದು ಎನ್ನಲಾಗುತ್ತಿದೆ, ತಾತ್ಕಾಲಿಕ ವ್ಯವಸ್ಥೆಯ ಆದರೂ ಮಾಡಬೇಕಾದ ಪಾಲಿಕೆ ಮೂಕ ಪ್ರೇಕ್ಷಕನಂತಿರುವುದು ಮಾತ್ರ ಬೇಸರ ಎಂದಿದ್ದಾರೆ.