ಮಾನ್ವಿ,ಏ.೦೨- ಪಟ್ಟಣದ ಜನೋದಯ ಸಂಸ್ಥೆಯಿಂದ ಮಾನ್ವಿ ನಗರ ಹಾಗೂ ಗ್ರಾಮೀಣ ಭಾಗದ ಯುವಕ ಯುವತಿಯರಿಗೆ ಸಾಮಾಜಿಕ ಲೆಕ್ಕ ಪರಿಶೋಧನೆಯ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿ ಈರೇಶ್ ಹುಲುಗುಂಚಿ ಇವರು ಸಾಮಾಜಿಕ ಲೆಕ್ಕ ಪರಿಶೋಧನೆಯ ಕುರಿತು ವಿವರಿಸುತ್ತ ಮಹಾತ್ಮಾ ಗಾಂಧಿ ನರೇಗಾದಲ್ಲಿನ ವಿನೂತನ ಲಕ್ಷಣವೆಂದರೆ ಅದು ಸಾಮಾಜಿಕ ಲೆಕ್ಕ ಪರಿಶೋಧನೆಯನ್ನು ಸಾರ್ವಜನಿಕ ಕಣ್ಗವಾಲಿನ ಒಂದು ವಿಧಾನವಾಗಿದೆ. ಇದು ವಿವಿಧ ಸ್ಥರದಲ್ಲಿ ಕಾರ್ಯಗತಗೊಳ್ಳುವ ಕೆಲಸದ ಪ್ರಮಾಣ ಹಾಗೂ ಗುಣಮಟ್ಟವನ್ನು ಪರಿಶೀಲಿಸುವ ಒಂದು ನಿರಂತರವಾಗಿ ಚಾಲ್ತಿಯಲ್ಲಿರುವ ಪ್ರಕ್ರಿಯೆಯಾಗಿದೆ. ಇದರಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ, ಜನರ ಭಾಗವಹಿಸುವಿಕೆಯನ್ನು ಒಳಗೊಂಡಿದೆ. ಪ್ರತಿ ಗ್ರಾಮ ಪಂಚಾಯತಿಯಲ್ಲಿ ಆರು ತಿಂಗಳಿಗೊಮ್ಮೆ ಎಲ್ಲಾ ಅಂಶಗಳ ಕಡ್ಡಾಯ ಮರುಪರಿಶೀಲನೆಯನ್ನು ಒಳಗೊಂಡ ಪ್ರಕ್ರಿಯೆಯನ್ನು ನಡೆಸಬೇಕು ಎಂದರು.
ನಂತರ ಸಿಸ್ಟರ್ ಪ್ರಮೀಳಾ ಮಾತಾನಾಡಿ ಯುವಕ ಯುವತಿಯರು ಸಮಾಜದ ಪ್ರಗತಿಯ ಪ್ರತಿಬಿಂಬವಾಗಿ ಉತ್ಸಾಹದಿಂದ ಕೆಲಸ ಮಾಡಬೇಕೆಂದು ತಿಳಿಸಿದರು. ಎಂ. ಚಂದ್ರುರವರು ಜಾಗೃತಿ ಹಾಡುಗಳನ್ನು ಹಾಡಿದರು. ತರಬೇತಿ ಕಾರ್ಯಕ್ರಮದಲ್ಲಿ ಸಂಸ್ಥೆ ನಿರ್ದೇಶಕರಾದ ಸಿಸ್ಟರ್ ಸೇಲ್ವಿ, ಸಿಸ್ಟರ್ ರೀನಾ, ಸಿಸ್ಟರ್ ದಿವ್ಯಾ ಹಾಗೂ ಮಾರ್ಟಿನ್, ಮಹಾದೇವ, ಕಲ್ಪನಾ, ಶಕುಂತಲಾ ಪಾಲುಗೊಂಡಿದ್ದರು.