ಕಲಬುರಗಿ:ಜೂ.9: ಮಾನವನಿಗೆ ಅವಶ್ಯಕವಾಗಿ ಬೇಕಾಗುವ ನೀರನ್ನು ಪೂರೈಸುವ ಸಾಗರಗಳು ಅಮೂಲ್ಯವಾದ ನೈಸರ್ಗಿಕ ಸಂಪತ್ತಾಗಿವೆ. ಭೂಮಿಯ ಮೇಲೆ ಒಟ್ಟು ಶೇ.97ರಷ್ಟು ನೀರನ್ನು ಹಿಡಿದಿಟ್ಟುಕೊಂಡು ಮಳೆಯ ರೂಪದಲ್ಲಿ ಭೂಮಿಯ ಮೇಲೆ ಸುರಿಯುವ ಮೂಲಕ ಸಸ್ಯ ಮತ್ತು ಪ್ರಾಣಿ ಸಂಪತ್ತನ್ನು ಉಳಿಸುತ್ತವೆ. ಪರಿಸರವನ್ನು ಸಮತೋಲ ಸ್ಥಿತಿಯಲ್ಲಿರಲು ಸಾಗರ ಹಾಗೂ ಸಮುದ್ರಗಳು ತುಂಬಾ ಅವಶ್ಯಕವಾಗಿವೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ 'ಶಿವಾ ವಿದ್ಯಾಮಂದಿರ'ದಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಜರುಗಿದ 'ವಿಶ್ವ ಸಾಗರಗಳ ಹಾಗೂ ಸಮುದ್ರ ಸಂಬಂಧಿ ದಿನಾಚರಣೆ'ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಸ್ಯ ಸಂಪತ್ತುಗಳಿಂದ ಆಕ್ಷಿಜನ್ ದೊರೆತು ಜೀವಿಗಳು ಉಸಿರಾಡಿಸಲು ಸಾಧ್ಯವಾಗುತ್ತದೆ. ವಾತಾವರಣದಲ್ಲಿ ಕಾರ್ಬನ್ ಡೈಆಕ್ಷೈಡ್ ಪ್ರಮಾಣ ಕಡಿಮೆ ಮಾಡಿ ಪರಿಸರವನ್ನು ಸ್ವಚ್ಚವಾಗಿಡಲು ಸಹಕಾರಿಯಾಗಿವೆ. ವಿಶ್ವದ ಅರ್ಧದಷ್ಟು ಜನರು ಕರಾವಳಿಯ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಜೀವನಾಧಾರವೆಂದರೆ ಸಾಗರಗಳಾಗಿವೆ. ಇಲ್ಲಿನ ಪ್ರಮುಖ ಉದ್ಯೋಗವೆಂದರೆ ಮೀನುಗಾರಿಕೆಯಾಗಿದೆ. ಜೊತೆಗೆ ಉಪ್ಪು, ಚಿಪ್ಪು, ಮುತ್ತು, ವಜ್ರ, ವೈಡುರ್ಯ, ಪೆಟ್ರೋಲಿಯಂಗಳಂತಹ ಅಮೂಲ್ಯವಾದ ಸಂಪತ್ತನ್ನು ಒದಗಿಸಿಕೊಡುವ ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುತ್ತವೆ. ಸಾಗರ ಹಾಗೂ ಸಮುದ್ರಗಳನ್ನು ಮಲಿನಗೊಳಿಸದೆ ಸುರಕ್ಷಿತವಾಗಿ ಕಾಪಾಡುವುದು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ಚನ್ನಬಸಪ್ಪ ಗಾರಂಪಳ್ಳಿ, ಬಸವರಾಜ, ಮಹಾಂತೇಶ, ಸಂಗೀತಾ ಸಿ.ಗಾರಂಪಳ್ಳಿ ಸೇರಿದಂತೆ ಇನ್ನಿತರರು ಇದ್ದರು.