ಸಂಜೆವಾಣಿ ವಾರ್ತೆ
ಬಳ್ಳಾರಿ, ಜು.20: ಆಧುನಿಕ ನಾಗರಿಕ ಜಗತ್ತಿನ ಸಂವಿಧಾನಗಳಿಗೆ ಸರಿ ಸಮಾನವಾಗುವ ಮತ್ತು ಜಗತ್ತಿಗೇ ಒಂದು ವೈಜ್ಞಾನಿಕ ಧರ್ಮ ವನ್ನು ನಿರೂಪಿಸುವ ಸಾಮಥ್ರ್ಯ ಶರಣ ಸಾಹಿತ್ಯಕ್ಕಿದೆ. ರಷ್ಯಾ, ಫ್ರಾನ್ಸ್ ಮತ್ತು ಇತರೆ ದೇಶಗಳ ಕ್ರಾಂತಿಗಳ ಬಗ್ಗೆ ಮಾತನಾಡುವ ನಮ್ಮವರು, ಶರಣ ಕ್ರಾಂತಿಯ ನಿಜವಾದ ಶಕ್ತಿ, ಸಾಮಥ್ರ್ಯದ ಬಗ್ಗೆ ಮಾತನಾಡುವುದಿಲ್ಲ ಎಂದು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ. ಯು. ಶ್ರೀನಿವಾಸ ಮೂರ್ತಿಯವರು ಅಭಿಪ್ರಾಯ ಪಟ್ಟರು.
ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಪ್ರಥಮ ದರ್ಜೆ ಕಾಲೇಜಿನ ಸಹಯೋಗದೊಂದಿಗೆ ಏರ್ಪಡಿಸಿದ್ದ 288ನೇ ಮಹಾಮನೆ ಲಿಂ. ಐ.ಬಸವರಾಜ ಲಲಿತಮ್ಮ ದತ್ತಿ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ – ಸಹಬಾಳ್ವೆಯ ನೆಲೆಗಳು” ಎಂಬ ವಿಷಯದ ಬಗ್ಗೆ ಮಾತನಾಡುತ್ತಾ, ಬದುಕಿನ ಬುನಾದಿ ಸಹಕಾರ,ಸಹಬಾಳ್ವೆಯಾಗಿದೆ.ಸಹಾಯ ಮತ್ತು ಸಹಕಾರವನ್ನು ಪಡೆದುಕೊಂಡು ಆ ಜನಗಳನ್ನೇ ದೂರವಿಟ್ಟಿದ್ದ ಸಮಾಜದಲ್ಲಿ ಶರಣರು, ಇವನಾರು, ಇವನಾರು ಎನ್ನದೇ, ಇವ ನಮ್ಮವ, ನಮ್ಮ ಮನೆಯ ಮಗನೆಂದು ಕಾಣುವ ಮೂಲಕ ಕಾಯಕ ಜೀವಿಗಳ, ಶೋಷಣೆ ರಹಿತ ಸುಂದರ ಸಹಕಾರ, ಸಹಬಾಳ್ವೆಯ ಸಮಾಜವನ್ನು ನಿರ್ಮಿಸಿದರೆಂದು ತಿಳಿಸಿದರು. ಅತಿಥಿಗಳಾಗಿ ಪಾಲ್ಗೊಂಡಿದ್ದ, ವಿಮ್ಸ್ನ ಚರ್ಮರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ|| ಸುಮಾ ಡಿ. ಗುಡಿಯವರು ಮಾತನಾಡುತ್ತಾ, ಉನ್ನತ ಆದರ್ಶದ ಸರಳ ಜೀವನ ಶರಣರ ಆದರ್ಶವಾಗಿದ್ದು ಅವರ ಆರೋಗ್ಯಪೂರ್ಣ ಬದುಕಿಗೆ ಸಾಧನವಾಗಿತ್ತೆಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್.ಕೆ.ಮಂಜುನಾಥರೆಡ್ಡಿಯವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸಹಕಾರ, ಸಹಬಾಳ್ವೆ ಇಲ್ಲದೇ ಯಾವೊಂದು ಸಂಸ್ಥೆಯೂ ಶ್ರೇಯಸ್ಸನ್ನು ಪಡೆಯಲಾರದು ಎಂದರು. ವಿದ್ಯಾರ್ಥಿನಿಯರಾದ ಕು|| ಪ್ರಿಯಾಂಕ ಮತ್ತು ಪದ್ಮಶ್ರೀ ವಚನ ಪ್ರಾರ್ಥನೆ ಮಾಡಿದರು. ಉಪನ್ಯಾಸಕರಾದ ಸತ್ಯಮೂರ್ತಿ ಸ್ವಾಗತಿಸಿದರು. ಪರಿಷತ್ತಿನ ಅಧ್ಯಕ್ಷರಾದ ಕೆ.ಬಿ.ಸಿದ್ಧಲಿಂಗಪ್ಪ ಪ್ರಾಸ್ತಾವಿಕ ನುಡಿಗಳೊಂದಿಗೆ ಶರಣು ಸಮರ್ಪಣೆ ಮಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ದಸ್ತಗೀರಸಾಬ್ ದಿನ್ನಿ, ದತ್ತಿ ದಾಸೋಹಿಗಳಾದ ಐ. ಉದಯಶಂಕರ, ಪತ್ನಿ ಸವಿತಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕರಾದ ಪ್ರವೀಣ್ಕುಮಾರ್ ರವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಎನ್.ಡಿ. ವೆಂಕಮ್ಮ, ಬಿ,ಇಡಿ, ಕಾಲೇಜಿನ ನಿವೃತ್ತ ಉಪನ್ಯಾಸಕಿಯರಾದ ಸುಶೀಲಾ ಸಿರೂರ್, ಉಪನ್ಯಾಸಕ ವರ್ಗ, ಪದವಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವೇದಿಕೆಯ ಅತಿಥಿಗಳನ್ನು ಸನ್ಮಾನಿಸುವ ಮೂಲಕ ಕಾರ್ಯಕ್ರಮ ಮಂಗಲವಾಯಿತು.