ಸಸ್ಯಕಾಶಿಯಲ್ಲಿ ಅತ್ಯಾಕರ್ಷಕ ಫಲಪುಷ್ಪ ಪ್ರದರ್ಶನ ಆರಂಭ

ಬೆಂಗಳೂರು,ಆ.೪- ಸಿಲಿಕಾನ್ ಸಿಟಿ ಬೆಂಗಳೂರಿನ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಇಂದಿನಿಂದ ಫಲಪುಷ್ಪ ಪ್ರದರ್ಶನ ನಡೆಯಲಿದ್ದ, ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ.೭೬ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ತೋಟಗಾರಿಕೆ ಇಲಾಖೆ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನವನ್ನು ಇಂದು ಸಂಜೆ ೬ ಗಂಟೆಗೆ ಸಿಎಂ ಅವರಿಂದ ಉದ್ಘಾಟನೆಯಾಗಲಿದ್ದು, ಆಗಸ್ಟ್ ೧೫ರವರೆಗೂ ನಡೆಯಲಿದೆ.
ಪ್ರತಿವರ್ಷ ಸ್ವಾತಂತ್ರ್ಯ ದಿನದ ಅಂಗವಾಗಿ ಆಗಸ್ಟ್ ತಿಂಗಳಲ್ಲಿ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತದೆ. ಈ ಬಾರಿಯ ಫಲಪುಷ್ಪ ಪ್ರದರ್ಶನವು ವಿಧಾನಸೌಧ ಹಾಗೂ ಅದರ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಥೀಮ್ ಆಯ್ದುಕೊಳ್ಳಲಾಗಿದೆ.ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಹೂವಿನ ವಿಧಾನಸೌಧ ತಲೆ ಎತ್ತಿ ನಿಂತಿದೆ. ಕೆಂಗಲ್ ಹನುಮಂತಯ್ಯ ಅವರ ಬದುಕು, ಸಾಧನೆ ಹಾಗೂ ಅವರ ಕನಸುಗಳ ಬಗೆಗಿನ ಸಂಪೂರ್ಣ ಮಾಹಿತಿ ನೀಡುವ ಫಲಕಗಳನ್ನು ಹಾಕಲಾಗಿದೆ.ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಹೂವಿನ ವಿಧಾನಸೌಧ ಆಕರ್ಷಣೆಯ ಕೇಂದ್ರವಾಗಲಿದೆ. ಒಟ್ಟು ೩.೫ ಲಕ್ಷ ಬಗೆಬಗೆಯ ಹೂವುಗಳಿಂದ ಈ ವಿಧಾನಸೌಧ ನಿರ್ಮಿಸಲಾಗಿದೆ. ಇದರ ಜೊತೆಗೆ ಕೆಂಗಲ್ ಹನುಮಂತಯ್ಯವನವರ ಹೂವಿನ ಪ್ರತಿಮೆಯೂ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ.ಈ ಬಾರಿ ಸ್ಕಾಟ್ಲೆಂಟ್, ಇಂಡೋನೇಷಿಯಾದ ಹೂವುಗಳ ಬದಲಾಗಿ ಕೋಲ್ಕತ್ತಾ, ಪುಣೆ, ಆಂಧ್ರ, ಊಟಿ ಸೇರಿದಂತೆ ದೇಶದ ಮೂಲೆ ಮೂಲೆಯಿಂದ ಹೂವುಗಳನ್ನು ತರಿಸಲಾಗಿದೆ. ಒಟ್ಟಾರೆ ಈ ಬಾರಿ ೨೫ ಲಕ್ಷ ಹೂವುಗಳು ಫಲಪುಷ್ಪ ಪ್ರದರ್ಶನದಲ್ಲಿ ಜನರ ಮನ ಸೆಳೆಯಲು ಸಿದ್ಧವಾಗಿವೆ.ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರು ಸಾರ್ವಜನಿಕ ಸಾರಿಗೆ ಬಳಸಿದರೆ ಸಂಚಾರ ದಟ್ಟಣೆ ಹಾಗೂ ಪಾರ್ಕಿಂಗ್ ಸಮಸ್ಯೆ ಬಗೆಹರಿಯಲಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಫ್ಲವರ್ ಶೋ ವೀಕ್ಷಣೆಗೆ ಲಕ್ಷಾಂತರ ಜನರ ಆಗಮನದ ಹಿನ್ನೆಲೆ ಲಾಲ್‌ಬಾಗ್ ಬಳಿ ಸಂಚಾರ ದಟ್ಟಣೆ ಆಗದಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪರ್ಯಾಯ ಮಾರ್ಗ ಜೊತೆಗೆ ನಿಗದಿತ ಸ್ಥಳದಲ್ಲಿ ವಾಹನ ಪಾರ್ಕ್ ಮಾಡಲು ಸೂಚಿಸಲಾಗಿದೆ. ಡಾ.ಮರೀಗೌಡ ರಸ್ತೆ, ಲಾಲ್‌ಬಾಗ್ ರಸ್ತೆ, ಕೆ.ಹೆಚ್. ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಸಾಧ್ಯತೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಧ್ಯವಾದಷ್ಟು ಸಮೂಹ ಸಾರಿಗೆ ವ್ಯವಸ್ಥೆ ಬಳಸಲು ಮನವಿ ಮಾಡಲಾಗಿದೆ. ಬಿಎಂಟಿಸಿ ಬಸ್, ಮೆಟ್ರೋ, ಕ್ಯಾಬ್‌ಗಳನ್ನು ಬಳಸಲು ಸೂಚಿಸಲಾಗಿದೆ.

ಸ್ವಾತಂತ್ರೋತ್ಸವ ದಿನಾಚರಣೆ ಪ್ರಯುಕ್ತ ಇಂದಿನಿಂದ ನಗರದ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದ್ದು, ಹೂಗಳಿಂದ ಕೃತಕ ವಿಧಾನಸೌಧವನ್ನು ನಿರ್ಮಾಣ ಮಾಡಲಾಗಿದ್ದು, ಇದರ ಜೊತೆಗೆ ಮಾಜಿ ಮುಖ್ಯಮಂತ್ರಿ ದಿ. ಕೆಂಗಲ್ ಹನುಮಂತಯ್ಯನವರ ಪ್ರತಿಮೆಯನ್ನು ಹೂಗಳಿಂದ ಅಲಂಕೃತಗೊಳಿಸಲಾಗಿದೆ.

ವಾಹನಗಳ ನಿಲುಗಡೆ ಎಲ್ಲಿ?: ಕಾಲೇಜ್ ಆವರಣದಲ್ಲಿ ದ್ವಿಚಕ್ರ ವಾಹನ ನಿಲುಗಡೆ.ಕೆ.ಹೆಚ್.ರಸ್ತೆ, ಶಾಂತಿನಗರ ಬಿ.ಎಂ.ಟಿ.ಸಿ. ಬಸ್ ನಿಲ್ದಾಣದ ಮೇಲೆ ನಾಲ್ಕು ಚಕ್ರದ ವಾಹನ ನಿಲುಗಡೆ.ಡಾ.ಮರಿಗೌಡ ರಸ್ತೆ- ಹಾಪ್ ಕಾಮ್ಸ್ ನಲ್ಲಿ ದ್ವಿ ಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆ. ಜೆ.ಸಿ. ರಸ್ತೆ ಕಾರ್ಪೊರೇಷನ್ ಪಾರ್ಕಿಂಗ್ ಸ್ಥಳದಲ್ಲಿ ದ್ವಿ ಚಕ್ರ ಹಾಗೂ ನಾಲ್ಕು ಚಕ್ರದ ವಾಹನ ನಿಲುಗಡೆಗೆ ಅವಕಾಶ.ನಿಲುಗಡೆ ನಿಷೇಧ:ಡಾ. ಮರಿಗೌಡ ರಸ್ತೆ, ಲಾಲ್ ಬಾಗ್ ಮುಖ್ಯ ದ್ವಾರದಿಂದ ನಿಮ್ಹಾನ್ಸ್ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಕೆ.ಹೆಚ್.ರಸ್ತೆ, ಕೆ.ಹೆಚ್.ವೃತ್ತದಿಂದ ಶಾಂತಿನಗರ ಜಂಕ್ಷನ್ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಲಾಲ್ ಬಾಗ್ ರಸ್ತೆ, ಸುಬ್ಬಯ್ಯ ವೃತ್ತದಿಂದ ಲಾಲ್ ಬಾಗ್ ಮುಖ್ಯದ್ವಾರದ ವರೆಗೆ ಸಿದ್ದಯ್ಯ ರಸ್ತೆ, ಊರ್ವಶಿ ಥಿಯೇಟರ್ ಜಂಕ್ಷನ್ ನಿಂದ ವಿಲ್ಸನ್ ಗಾರ್ಡನ್ ೧೨ನೇ ಕ್ರಾಸ್ ವರೆಗೆ.ಬಿ.ಎಂ.ಟಿ.ಸಿ ರಸ್ತೆಯಲ್ಲಿ, ರಸ್ತೆಯ ಎರಡೂ ಬದಿಗಳಲ್ಲಿ ಲಾಲ್ ಬಾಗ್ ವೆಸ್ಟಿಗೇಟ್‌ನಿಂದ ಆರ್.ವಿ. ಟೀಚರ್ ಕಾಲೇಜ್‌ವರೆಗೆ, ಆರ್ ವಿ ಟೀಚರ್ ಕಾಲೇಜ್‌ನಿಂದ ಆಶೋಕ ಪಿಲ್ಲರ್ ವರೆಗೆ, ಅಶೋಕ ಪಿಲ್ಲರ್‌ನಿಂದ ಸಿದ್ದಾಪುರ ಜಂಕ್ಷನ್ ವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಟಿಕೆಟ್ ದರ ಎಷ್ಟು?
ಫಲಪುಷ್ಪ ಪ್ರದರ್ಶನಕ್ಕೆ ಟಿಕೆಟ್ ನಿಗದಿ ಮಾಡಲಾಗಿದ್ದು, ವಯಸ್ಕರಿಗೆ ವಾರದ ದಿನಗಳಲ್ಲಿ ೭೦ ರೂ. ಹಾಗೂ ರಜಾ ದಿನಗಳಲ್ಲಿ ೮೦ ರೂಪಾಯಿ ಹಾಗೂ ಮಕ್ಕಳಿಗೆ ೩೦ ರೂಪಾಯಿ ಇದೆ. ಜೊತೆಗೆ ಶಾಲಾ ಮಕ್ಕಳು ಶಾಲೆಯ ಯೂನಿಫಾರ್ಮ್ ಹಾಗೂ ಐಡಿ ಕಾರ್ಡ್ ಜೊತೆಗೆ ಬಂದರೆ ಉಚಿತವಾಗಿ ಹೂವಿನ ಲೋಕವನ್ನು ಕಣ್ತುಂಬಿಕೊಳ್ಳಬಹುದಾಗಿದೆ.