
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಸೆ.೧೨:ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಸರ್ವ ಪಕ್ಷ ನಿಯೋಗ ಭೇಟಿಗೆ ಪ್ರಧಾನಿ ಕಚೇರಿಯಿಂದ ಇದುವರೆಗೂ ಸಮಯಾವಕಾಶ ನಿಗದಿ ಮಾಡಿ ಪತ್ರ ಬಂದಿಲ್ಲ. ಮುಂದಿನವಾರ ಭೇಟಿಗೆ ಅವಕಾಶ ಸಿಗುವ ನಂಬಿಕೆ ತಮ್ಮದು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರಿನ ವಿಚಾರದಲ್ಲಿ ಪ್ರಧಾನಿಗಳ ಕಚೇರಿಗೆ ಪತ್ರ ಬರೆಯುತ್ತಲೇ ಇದ್ದೇವೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮುಂದಿನವಾರ ಸಮಯಾವಕಾಶ ಸಿಗುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ನದಿ ನೀರಿನ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅನಾವಶ್ಯಕ ರಾಜಕಾರಣ ಮಾಡುತ್ತಿವೆ. ಅಧಿಕಾರ ಸಿಗದೇ ಇರುವುದರಿಂದ ಅವರು ಹತಾಶರಾಗಿ ಸಹಿಸಿಕೊಳ್ಳಲಾಗದೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ತಮಗೆ ರಾಜ್ಯದ ಹಿತ ಮುಖ್ಯ ಎಂದರು.
ಕಾವೇರಿ ಜಲಾಶಯಗಳಲ್ಲಿ ನೀರಿಲ್ಲ. ನಮ್ಮ ಬಳಿ ಕುಡಿಯಲು iತ್ತು ನಮ್ಮ ಬೆಳೆಗಳಿಗೆ ಸಾಕಾಗುವಷ್ಟು ನೀರಿದೆ ಅಷ್ಟೆ ಎಂಬುದನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಗಮನಕ್ಕೂ ತಂದಿದ್ದೇವೆ ಎಂದು ಅವರು ಹೇಳಿದರು.