
ಮೈಸೂರು: ಮೇ.10:- ರಾಜ್ಯದಲ್ಲಿ ಮತದಾನ ಆರಂಭವಾಗಿದ್ದು ವಿಶೇಷವಾಗಿ ಮೈಸೂರಿನಲ್ಲಿ ಬೆಳಗ್ಗೆ ಜನರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ.
ಪ್ರತಿಬಾರಿಯೂ ನಗರದಲ್ಲಿ ಕಡಿಮೆ ಪ್ರಮಾಣದ ಮತದಾನ ದಾಖಲಾಗುತ್ತದೆ. ಹೀಗಾಗಿ ಈ ಬಾರಿ ರಾಜಕೀಯ ಪಕ್ಷಗಳು, ಚುನಾವಣಾ ಆಯೋಗ ಮತ ಪ್ರಮಾಣ ಹೆಚ್ಚಿಸಲು ಕಸರತ್ತು ಮಾಡಿತ್ತು.
ಬೆಳಗ್ಗೆ 7 ಗಂಟೆಗೆ ಜನರು ಸರದಿ ನಿಂತು ವೋಟ್ ಹಾಕಿದ್ದಾರೆ. 2018ರ ಚುನಾವಣೆ ಮೇ 12 ಶನಿವಾರ ನಡೆದಿತ್ತು. ವೀಕೆಂಡ್ ಆದ ಹಿನ್ನೆಲೆಯಲ್ಲಿ ಕಡಿಮೆ ಪ್ರಮಾಣದ ಮತದಾನ ನಡೆದಿತ್ತು. ಆದರೆ ಈ ಬಾರಿ ಬುಧವಾರ ನಡೆಯುತ್ತಿರುವ ಕಾರಣ ಹೆಚ್ಚಿನ ಪ್ರಮಾಣದ ಮತದಾನ ನಡೆಯುವ ನಿರೀಕ್ಷೆಯಿದೆ. ಮಧ್ಯಾಹ್ನದ ಬಳಿಕ ಮಳೆ ಬರುವ ಸಾಧ್ಯತೆ ಇರುವುದರಿಂದ ನಗರದ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಯತ್ತ ಬರುತ್ತಿದ್ದಾರೆ.
ಮತಗಟ್ಟೆಯ ಒಳಗಡೆ ಮೊಬೈಲ್ ತೆಗೆದುಕೊಂಡು ಹೋಗುವುದಕ್ಕೆ ಚುನಾವಣಾ ಆಯೋಗ ಅನುಮತಿ ನೀಡಿಲ್ಲ. ಕೆಲವೊಂದು ಕಡೆ ಪೆÇಲೀಸರೇ ಸ್ವಿಚ್ ಆಫ್ ಮಾಡಿ ತೆಗೆದುಕೊಂಡು ಹೋಗಲು ಅನುಮತಿ ನೀಡಿದ್ದಾರೆ. ಮೊಬೈಲ್ ವಿಚಾರದ ಬಗ್ಗೆ ಕೆಲವೊಂದು ಕಡೆ ಕಿರಿಕಿರಿ ನಡೆದ ಘಟನೆ ನಡೆದಿದೆ.
ಮಾಜಿ ಸಿಎಂ ಸಿದ್ಧರಾಮಯ್ಯ ತಮ್ಮ ತವರೂರಾದ ಸಿದ್ಧರಾಮನಹುಂಡಿಯಲ್ಲಿ ಮತದಾನ ಮಾಡಿದ್ದು, ಪತ್ನಿ ಜೊತೆ ಬಂದು ಮತ ಚಲಾವಣೆ ಮಾಡಿದ್ದಾರೆ. ಸಿದ್ದರಾಮಯ್ಯ ಜೊತೆಗೆ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ರಿಂದಲೂ ಮತದಾನ. ಕುವೆಂಪುನಗರದ ಜ್ಞಾನಂಗಂಗಾ (ಮತಗಟ್ಟೆ ಸಂಖ್ಯೆ 26)ಶಾಲೆಯಲ್ಲಿ ಸರತಿ ಸಾಲಿನಲ್ಲಿ ನಿಂತು 2023ರ ಚುನಾವಣಾ ರಾಯಬಾರಿ ಜಾವಗಲ್ ಶ್ರೀನಾಥ್ ಅವರು ಮತದಾನ ಮಾಡಿದರು.
ನಗರ ಪೆÇಲೀಸ್ ಆಯುಕ್ತ ಬಿ.ರಮೇಶ್ ಬಾನತೋಡ್ ಮತಚಲಾಯಿಸಿದರು.ಜಲಪುರಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು.ಪತ್ನಿ ಸಮೇತ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.
ಜಿಲ್ಲಾಧಿಕಾರಿಗಳಾದ ಡಾ ಕೆ.ವಿ.ರಾಜೇಂದ್ರ ಅವರು ಇಂದು ಮತಗಟ್ಟೆ ಸಂಖ್ಯೆ 139, ಸಿಎಫ್ ಟಿ ಆರ್ ಐ ಶಾಲೆಯಲ್ಲಿ ಮತದಾನ ಮಾಡಿದರು. ಸುತ್ತೂರು ಶ್ರೀಗಳು ಮಾತದಾನ ಮಾಡಿದ್ದು, ವರುಣಾ ಕ್ಷೇತ್ರದ ಸುತ್ತೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮತ ಚಲಾವಣೆ ಮಾಡಿದ್ದಾರೆ.